Wednesday, November 26, 2008

ಅಡ್ಡ ಹೆಸರುಗಳು

ಪ್ರತಿಯೊಂದು ಕೆಲಸಕ್ಕೂ ನೆನಪಿಟ್ಟುಕೊಳ್ಳುವುದು ಅಥವ ಗುರುತಿಟ್ಟುಕೊಳ್ಳುವುದು ಅಂತ ಇದ್ದೇ ಇರುತ್ತದೆ. ಉದಾಹರಣೆಗೆ ಅಡುಗೆಮನೆಯಲ್ಲಿ ಯಾವ ಯಾವ ಮಸಾಲೆ, ಮೆಣಸು, ಉಪ್ಪು, ಸಕ್ಕರೆ ಇತರೆ ವಸ್ತುಗಳು ಯಾವ ಯಾವ ಬಾಕ್ಸಿನಲ್ಲಿರುತ್ತವೆ ಅಂತ ಗುರುತಿಸಿಟ್ಟುಕೊಳ್ಳುವುದು, ಹಾಗೆ ಕಂಪ್ಯೂಟರಿನಲ್ಲಿ ಇರುವ ದಾಖಲೆಗಳು ಯಾವ ಯಾವ ಫೋಲ್ಡರಿನಲ್ಲಿ ಇರುತ್ತವೆ ಎನ್ನುವುದನ್ನು ನೆನಪಿಸಿಕೊಳ್ಳುವುದು.

ಇದೇ ರೀತಿ ನಮ್ಮ ದಿನಪತ್ರಿಕೆ ವಿತರಣೆ ಕೆಲಸದಲ್ಲೂ ಒಂದು ಏರಿಯಾದಲ್ಲಿರುವ ಅನೇಕ ರಸ್ತೆಗಳು, ಆ ರಸ್ತೆಗಳಲ್ಲಿ ನಾವು ಪ್ರತಿದಿನ ದಿನಪತ್ರಿಕೆ ಹಾಕುವ ಮನೆಗಳನ್ನು ನಾವು ಏಜೆಂಟರು ಮತ್ತು ನಮ್ಮ ಬೀಟ್ ಹುಡುಗರು ನೆನಪಿಟ್ಟುಕೊಳ್ಳಬೇಕು. ಇದನ್ನು ನಾವು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ.

ಈ ರೀತಿ ನಮ್ಮ ಗ್ರಾಹಕರ ಮನೆಗಳನ್ನು ನಾವು ಗುರುತಿಟ್ಟುಕೊಂಡು ಹೋಗಿ ಪ್ರತಿತಿಂಗಳು ಹಣ ವಸೂಲಿ ಮಾಡುವ ರೀತಿ ನೀತಿಗಳು, ನಮ್ಮ ಹುಡುಗರು ಮನೆಗಳನ್ನು ಗುರುತಿಟ್ಟುಕೊಳ್ಳುವ ವಿಧಾನ, ಅದಕ್ಕೇ ಅವರ್‍ಎ ನಾಮಕರಣ ಮಾಡಿಕೊಂಡ ಅಡ್ಡ ಹೆಸರುಗಳು, ತಮಾಷೆ ಪದಗಳು, ಆ ಕ್ಷಣಕ್ಕೆ ಬಲು ಮೋಜೆನಿಸಿದರೂ ಅದು ನನಗೂ ಮತ್ತು ನನ್ನ ಬೀಟ್ ಹುಡುಗರಿಗೂ ತುಂಬಾ ಮುಖ್ಯವಾಗಿರುತ್ತದೆ. ಮತ್ತು ಸುಲಭವೂ ಆಗಿರುತ್ತದೆ.

ಈ ವಿಚಾರವಾಗಿ ನಮ್ಮಲ್ಲಿ ನಡೆಯುವ ಮಾತುಕತೆ ಸನ್ನಿವೇಶಗಳಲ್ಲಿ ಕೆಲವನ್ನು ನಾನಿಲ್ಲಿ ಪ್ರತಿಬಿಂಬಿಸಲು ಪ್ರಯತ್ನಿಸುತ್ತೇನೆ.

ಆತ ತಮಿಳು ಹುಡುಗ ಸೇಬು. [ಅದು ಅಡ್ಡ ಹೆಸರು, ನಿಜ ಹೆಸರು ಶರತ್ ಅಂತ. ಶರತ್ ಅಂತ ಕೂಗಿದಾಗ ತಿರುಗಿನೋಡದೆ ಸೇಬು ಎಂದಾಗ ಚಕ್ಕನೆ ತಿರುಗುವಷ್ಟು ಒವರ್ ಟೇಕ್ ಮಾಡಿದೆ ಅವನ ಅಡ್ಡ ಹೆಸರು]. ಒಂದು ದಿನ ಯಾವುದೋ ಒಂದು ಮನೆಗೆ ಪತ್ರಿಕೆ ಹಾಕದೆ ತಪ್ಪಿಸಿದ್ದ. ಎಂದಿನಂತೆ ಆ ಗ್ರಾಹಕ ನನಗೆ ಫೋನ್ ಮಾಡಿ ನಮ್ಮ ಮನೆಗೆ ಇವತ್ತಿನ ಪೇಪರ್ ಬಂದಿಲ್ಲವೆಂದು ಹೇಳಿದರು. ಮರುದಿನ ಇವನು ಬಂದಾಗ ನಾನು ಕೇಳಿದೆ.

"ಹೇ ಸೇಬು, ಗಣೇಶ ದೇವಸ್ಥಾನದ ರಸ್ತೆಯಲ್ಲಿರೋ ಅಜ್ಜಿ ಮನೆಗೆ ಯಾಕೋ ನಿನ್ನೆ ಕನ್ನಡಪ್ರಭ ಹಾಕಲಿಲ್ಲ ? " ತುಸು ಕೋಪಗೊಂಡವನಂತೆ ನನ್ನ ಪ್ರಶ್ನೆ.

ತಕ್ಷಣ ಅವನಿಗೆ ಗಾಬರಿಯಾದರೂ ಅವನ ಮುಖದಲ್ಲಿ ಅದನ್ನು ತೋರಗೊಡದೆ "ಯಾವ ಮನೆ ಸಾರ್".

"ಆದೇ ಕಣೋ ಅಜ್ಜಿ ಮನೆ"

"ಯಾವುದು ಅಜ್ಜಿ ಮನೆ ಸಾರ್? "

ಅವನಿಗೆ ಇದನ್ನು ಗುರುತಿಸಲು ಏನು ಮಾಡುವುದು?

ನಮ್ಮಲ್ಲಿ ಒಂದು ಪದ್ದತಿ ಇದೆ. ನಮಗೆ ಬೇಕಾದ ಮನೆ ಬಹುಶಃ ಐದನೆಯದು ಆಗಿದ್ದರೆ ಅದರ ಹಿಂದಿನ ಮನೆಗಳ ಗುರುತುಗಳನ್ನು ಹೇಳಿಕೊಂಡು ಅವನಿಗೆ ಒಂದೊಂದಾಗಿ ನೆನಪಿಸುತ್ತಾ ಹೇಳಿಕೊಂಡು ಬರಬೇಕು. ಹಾಗೆ ನಾನು ಅವನಿಗೆ ಕೇಳಿದೆ.

ನಿನಗೆ ಆರನೇ ಮನೆ ಗೊತ್ತಿಲ್ಲವೇನೊ?

ಇಲ್ಲಾ ಸಾರ್,

ಸರಿ ಮೊದಲನೆ ಮನೆ ಹೇಳು ?

ಅವನು ಮನಸಿನಲ್ಲೇ ನೆನೆಸಿಕೊಂಡು, ಕನ್ನಡದಲ್ಲಿ ಮಗ್ಗಿ ಹೇಳುವಂತೆ ಗೊಣಗತೊಡಗಿದ.

ಪ್ರಜಾವಾಣಿ, ನಂತರ ನಾಯಿಮನೆ, ೩ನೇ ಮಹಡಿ ಟೈಮ್ಸ್ , ದೊಡ್ಡ ಗೇಟು ಕನ್ನಡಪ್ರಭ, ಹಸುಮನೆ, ಕಾವ್ಯ ಮನೆ...... ಸಾರ್ ಅದು ಕಾವ್ಯ ಮನೆ"

ಯಾವ ಕಾವ್ಯನೋ ?

ಅದೇ ಸಾರ್ ಹಸು ಮನೆ ಆದಮೇಲೆ ಸಿಗೋ ಮನೆ"

ಲೋ ಅದು ಅಜ್ಜಿ ಮನೆ ಅಲ್ಲವೇನೋ,

ಇಲ್ಲ ಸಾರ್, ಅದು ಕಾವ್ಯ ಮನೆ.

ಯಾರದು ಕಾವ್ಯ ?

ಕಾವ್ಯ ಆ ಮನೆ ಹುಡುಗಿ ಸಾರ್, ದಿನಾ ಆ ಹುಡುಗಿ ಕಾಲೇಜಿಗೆ ಹೊರಡೋದು ನಾನು ಪೇಪರ್ ಹಾಕೊ ಸಮಯದಲ್ಲೇ ಸಾರ್,

ನಿನಗೇಗೊ ಗೊತ್ತು ? ಆ ಹುಡುಗಿ ಹೆಸರು ಕಾವ್ಯ ಅಂತ ?

ಇದೇನ್ ಸಾರ್ ನೀವು ಹೀಗೆ ಕೇಳ್ತೀರಾ ? ಆ ಮನೆ ಕಾಂಪೊಂಡಲ್ಲಿ ಬರೆದಿದೆಯಲ್ಲ ! ಅದಲ್ಲದೇ ಅವರಮ್ಮ ಪ್ರತಿದಿನಾ ಆ ಹುಡುಗಿ ಹೊರಡೋ ಅವಸರದಲ್ಲಿ ಏನಾದರೂ ಬಿಟ್ಟು ಹೋಗುವಾಗ ಅವರಮ್ಮ " ಹೇ ಕಾವ್ಯ ಪೆನ್ನು ಬಿಟ್ಟಿದ್ದಿಯಲ್ಲೇ, ಬುಕ್ ಬಿಟ್ಟಿದ್ದಿಯಲ್ಲೇ" ಎಂದು ಕೂಗಿ ಹೇಳ್ತಾರೆ. ಅದರಿಂದ ನನಗೆ ಗೊತ್ತಾಯ್ತು ಅವಳ ಹೆಸರು ಕಾವ್ಯ ಅಂತ ! ಅಂತ ಹೇಳಿ ಹಲ್ಲು ಕಿರಿದ.

ಎಲಾ ಫಟಿಂಗನೇ ಎಷ್ಟು ಚೆನ್ನಾಗಿ ಎಲ್ಲಾ ಗಮನಿಸಿದ್ದಾನೆ ! ನಾನೇ ಒಂದು ದಿನವೂ ಆ ಹುಡುಗಿಯನ್ನು ನೋಡಿಲ್ಲ. ನಾನು ಹಣ ವಸೂಲಿಗೆ ಹೋದಾಗ ಆ ಮನೆಯ ವಯಸ್ಸಾದ ಅಜ್ಜಿ ಬಂದು ದುಡ್ಡು ಕೊಡುತ್ತಿದ್ದರು. ಆ ಕಾರಣಕ್ಕಾಗಿ ನಾನು ಅಜ್ಜಿ ಮನೆ ಎಂದು ಗುರುತಿಟ್ಟುಕೊಂಡಿದ್ದೆ. ಆದರೆ ಇವನಿಗೆ ಅಜ್ಜಿಮನೆಯೆಂದರೆ ಗೊತ್ತಾಗಲಿಲ್ಲವಲ್ಲ ! ಆ ಮನೆಯಲ್ಲಿ ಕಾಲೇಜಿಗೆ ಹೋಗುವ ಸುಂದರ ಹುಡುಗಿ ಕಾವ್ಯ ಇರುವಾಗ ಇವನಿಗೆ ಅಜ್ಜಿ ಏಕೆ ಬೇಕು ?

ಹೀಗೆ ನಾವು ಮನೆಯನ್ನು ಗುರುತಿಟ್ಟುಕೊಳ್ಳುವ ವಿಧಾನಗಳು ಚಾಲ್ತಿಯಲ್ಲಿರುತ್ತವೆ. ಇನ್ನು ಕೆಲವು ಬಲು ಮೋಜೆನಿಸುತ್ತವೆ.

ಮಂಜ ಅವತ್ತು ಬೇಗ ಬಂದಿದ್ದ ನನ್ನ ಒತ್ತಡಕ್ಕೆ. ಅವನು ಎದ್ದ ತಕ್ಷಣ ಟಾಯ್ಲೆಟ್ಟಿಗೆ ಹೋಗಬೇಕೆನ್ನುವುದು ಅವನ ಅಭ್ಯಾಸ. ಜೊತೆಗೆ ಅವನಿಗೆ ಅದು ಸಮಸ್ಯೆಯೂ ಕೂಡ. ಅವನು ಲೇಟಾಗಿ ಬಂದಾಗ ಯಾಕೋ ಲೇಟು ಅಂದರೆ " ಇಲ್ಲಾರಿ ನಾನು ಬೇಗನೆ ಎದ್ದಿದ್ದೆ. ಆದರೆ ಟಾಯ್ಲೆಟ್ಟಿಗೆ ಅವಸರವಾಯ್ತು. ಅಲ್ಲಿ ಕೂತವನು ಅಲ್ಲೇ ನಿದ್ದೆ ಮಾಡಿಬಿಟ್ಟಿದ್ದೆ" ಎಂದು ಹೇಳುತ್ತಿದ್ದ.

ಅವತ್ತು ಬೇಗ ಬಂದವನು "ರ್ರೀ ನನಗೆ ಬೇಗ ಬೀಟ್ ಪೇಪರ್ ಜೋಡಿಸಿಕೊಡಿ" ಅಂದ. ಯಾಕೋ ಅಂದೆ. ಅವನು "ಆ ತಾತ ಕಾಯ್ತಾ ಇರ್ತಾರೆ ಅಮೇಲೆ ಆನೆ ಗೇಟು, ಬ್ರೀಗೇಡ್ ಲಿಂಕ್ಸ್ ಕಾಂಪ್ಲೆಕ್ಸಿನಲ್ಲಿ ಅಜ್ಜಿ, ಬೆಕ್ಕು ಹೌಸ್[ ಆ ಮನೆಯಲ್ಲಿ ಮರಿಗಳ ಸಮೇತ ೧೨ ಬೆಕ್ಕುಗಳ ಸಂಸಾರವಿದೆ]ನಲ್ಲಿ ಮುಸ್ಲಿಮ್, ನಂತರ ಎಸ್.ಎಲ್. ಆಪಾರ್ಟ್‌ಮೆಂಟಿನಲ್ಲಿ ಮಲೆಯಾಳಿ ಅಂಟಿ, ಭೂತ ಬಂಗ್ಲೆ[ಹಳೇ ಕಾಲದ ಮನೆಗೆ ನಾವಿಟ್ಟ ಹೆಸರು]ಯಲ್ಲಿ ವಾತನ ಗಡ್ಡದ ಬುಡ್ಡ. ಶ್ರೀಪುರಂನಲ್ಲಿ ಪುರಿ ಮೂಟೆ ಆಂಟಿ, ಇವರೆಲ್ಲರೂ ಬೇಗ ಪೇಪರ್ ಕೇಳ್ತಾರೆ, ಇದೆಲ್ಲದಕ್ಕಿಂತ ಮೊದಲು ಅರ್ಜೆಂಟ್ ಅಪಾರ್ಟ್‌ಮೆಂಟ್[ಅದಕ್ಕೂ ನಾವಿಟ್ಟ ಹೆಸರು. ಪೂರ್ತಿ ಅಪಾರ್ಟ್‌ಮೆಂಟಿನವರೆಲ್ಲಾ ಬೆಳಿಗ್ಗೆ ಆರು ಗಂಟೆಗೆ ಎದ್ದು ಪೇಪರಿಗಾಗಿ ಕಾಯುತ್ತಾರೆ]ನಲ್ಲಿ ಮೊದಲ ಮಹಡಿಯ ಬಲಬಾಗದ ಬಾಗಿಲಲ್ಲಿ ಆರ್ಜೆಂಟ್ ಆಂಟಿ ಮತ್ತು ಅಂಕಲ್ ಕಾಯುತ್ತಿರುತ್ತಾರೆ. ಅವರಿಗೆಲ್ಲಾ ಅರ್ಜೆಂಟಾಗಿ ಪೇಪರ್ ಹಾಕಿ ನಾನು ಮನೆಗೆ ಹೋಗಿ ಅರ್ಜೆಂಟಾಗಿ ಟಾಯ್ಲೆಟ್ಟಿಗೆ ಹೋಗಬೇಕು, ಬೇಗ ಕೊಡಿ" ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದ್ದ. ಅವನ ಮಾತನ್ನು ಕೇಳಿ ನಾನು ಸೇರಿದಂತೆ ಉಳಿದ ಹುಡುಗರೆಲ್ಲಾ ಚೆನ್ನಾಗಿ ನಕ್ಕಿದ್ದೆವು.

ಒಂದಷ್ಟು ದಿವಸ ಈ ವಿಚಾರದಲ್ಲಿ ಅವನನ್ನು ಚೆನ್ನಾಗಿ ಗೇಲಿ ಮಾಡಿದ್ದೆವು. ಇಷ್ಟೆಲ್ಲಾ ಅಡ್ಡ ಹೆಸರಿನಲ್ಲಿ ಗುರುತಿಟ್ಟುಕೊಳ್ಳುವ ಮಂಜನಿಗೆ "ಮಚ್ಚುಕೊಟ್ಟೈ" [ಮಚ್ಚು ಕೊಟ್ಟೈ ಅಂದರೆ ತಮಿಳುಭಾಷೆಯಲ್ಲಿ ಸಿಪ್ಪೆ ಬಿಡಿಸಿದ ಅವರೆ ಕಾಯಿ] ಅಂತ ಆಡ್ಡ ಹೆಸರಿದೆ !

ಸೇಬುವಿನಂತೆ[ಶರತ್] ವಯಸ್ಸಾದವರನ್ನು ಬಿಟ್ಟು ಹುಡುಗಿಯರ ಮನೆಗಳನ್ನು ಗುರುತಿಟ್ಟುಕೊಳ್ಳುವಂತ ಹುಡುಗರು ಎಲ್ಲಾ ವಿತರಣಾ ಕೇಂದ್ರದಲ್ಲೂ ಹೆಚ್ಚಿಗೆ ಇರುತ್ತಾರೆ.

ನಾವು ಕೆಲವು ಬಾರಿ ನಮ್ಮ ಒಂದು ಬಡಾವಣೆಯ ಗಿರಾಕಿಗಳ ಮನೆಗಳು ದೂರವಿದ್ದರೆ ನಮಗೆ ಹತ್ತಿರವಿರುವ ಗಿರಾಕಿಗಳನ್ನು ಇತರ ವೃತ್ತಿಭಾಂದವರ ಜೊತೆ ಬದಲಿಸಿಕೊಳ್ಳುತ್ತೇವೆ. ಇದರಿಂದ ಇಬ್ಬರಿಗೂ ಅನುಕೂಲವಾಗುತ್ತದೆ. ನಮ್ಮ ದೂರದ ಗಿರಾಕಿಗಳು ಅವರಿಗೆ ಹತ್ತಿರ, ಹಾಗೂ ಅವರ ದೂರದ ಗಿರಾಕಿಗಳು ನಮಗೆ ಹತ್ತಿರ ಸಿಗುವಂತಾಗುತ್ತಾರೆ.

ಇಂಥ ಬದಲಾವಣೆಯ ಕೆಲಸದಲ್ಲಿ ತೊಡಗಿದ್ದ ನಾನು ಬಾಲ್ಡಿ ಮಂಜ ಇಬ್ಬರೂ ಕೂತು ಒಂದೊಂದು ಕಾಲಿ ಪೇಪರಿನಲ್ಲಿ ನಮ್ಮ ಗಿರಾಕಿಗಳ ಪಟ್ಟಿ ಮಾಡತೊಡಗಿದೆವು. ನಮ್ಮ ಭಾಷೆಯಲ್ಲಿ ಅವು ೧೦ ಮನೆಗಳಿದ್ದರೆ

೧. ಟೈಮ್ಸ್ - ಮೊದಲ ಮಹಡಿ.
೨. ಕನ್ನಡಪ್ರಭ- ಕಾರ್ನರ್ ಮನೆ
೩. ಪ್ರಜಾವಾನಿ - ಬ್ಲಾಕ್ ಗೇಟು
೪. ಡೆಕ್ಕನ್ - ಆಪಾರ್ಟ್‌ಮೆಂಟಿನ ಮೂರನೆ ಮಹಡಿ
೫. ಟೈಮ್ಸ್ - ಅಜ್ಜಿ ಮನೆ......

ಹೀಗೆ ಮುಂದುವರಿಯುತ್ತದೆ. ನಂತರ ಅವನ ಗಿರಾಕಿಗಳನ್ನು ನಮ್ಮ ಹುಡುಗರಿಗೆ ಹಾಗೂ ನನ್ನ ಗಿರಾಕಿಗಳನ್ನು ಅವನ ಹುಡುಗರಿಗೆ ತೋರಿಸಿದ ನಂತರ ಹುಡುಗರು ಅವರಿಗಷ್ಟ ಬಂದಂತೆ ಆ ಮನೆಗಳಿಗೆ ಆಡ್ಡ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ.

ಮುಂದೆ ನಮಗಲ್ಲದಿದ್ದರೂ ಅವರಿಗಾಗಿ ನಾವು ಬದಲಾಯಿಸಿಕೊಂಡ ಗಿರಾಕಿಗಳ ಮನೆಗಳನೆಲ್ಲಾ ಆಡ್ಡ ಹೆಸರುಗಳಿಗೆ ಬದಲಿಸಿಕೊಡಬೇಕು. ಈ ಮೂಲಕ ನಾವು ಬಹು [ಅಡ್ಡ ಹೆಸರಿನ] ಭಾಷಾ ತಜ್ಞರಾಗಬೇಕು !

ನಂತರ ಹೊಸ ಹಾಗೂ ಹಳೆಯ ಗಿರಾಕಿಗಳ ಪೇಪರುಗಳನ್ನು ಜೋಡಿಸಿ ಕಳಿಸಿದರೆ ಈ ರೀತಿ ಅಡ್ಡ ಹೆಸರು ಇಡುವುದರಲ್ಲಿ ಪ್ರವೀಣನಾದ ಚಂದ್ರ ರನ್ನ ಬೀಟಿನ ಒಂದು ಆಪಾರ್ಟ್‌ಮೆಂಟಿನಲ್ಲಿ ಹೊಸ ಗಿರಾಕಿಗಳಿಗೆಲ್ಲಾ ಹಾಕಿ ಅವರ ಪಕ್ಕದ ಮನೆಗಳಾದ ಹಳೆಯ ಗಿರಾಕಿಗೆ ಹಾಕದೆ ಮರೆತು ಬಂದಿದ್ದ ಭೂಪ !

ನಮ್ಮ ಹುಡುಗರು ಪ್ರತಿದಿನ ಒಂದಾದರೂ ಮನೆಗೆ ದಿನಪತ್ರಿಕೆ ತಪ್ಪಿಸುತ್ತಿರುತ್ತಾರೆ. "ಯಾಕೊ ಹೀಗೆ ಮರೆತುಹೋಗುತ್ತೀಯ ಅವರೇನು ಹೊಸಬರಲ್ಲವಲ್ಲ, ಹಳಬರಿಗೆ ಈ ರೀತಿ ತಪ್ಪಿಸುತ್ತೀಯಲ್ಲೋ" ಅಂದರೆ "ಮರೆತುಹೋಯ್ತು" ಅಂತಾರೆ.

ಅದ್ಯಾಗೋ ಸಾಧ್ಯ, ನೀನು ಊಟ ಮಾಡೋದು ಮರೆಯೊಲ್ಲ ತಾನೆ, ಹಾಗೆ ಇಲ್ಲೂ ನೀನು ಹಾಕೊ ಗಿರಾಕಿಗಳ ಮನೆಯನ್ನು ಹೇಗೆ ಮರೀತೀಯೋ ಎಂದು ಕೇಳಿದರೆ ಉತ್ತರ ನೀಡದೆ ನಗುತ್ತಾರೆ.

ನಿಜವಾಗಿ ಅವನು ತಪ್ಪಿಸಬಾರದೆಂದುಕೊಂಡರೂ ಒಂದೇ ಮನೆಗೆ ಅಗಾಗ ತಪ್ಪಿಸುತ್ತಿದ್ದರೆ ಆ ಮನೆಗೆ ಅಡ್ಡ ಹೆಸರಿಟ್ಟಿರುವುದಿಲ್ಲ. ಇದೇ ಕಾರಣಕ್ಕೆ ಆ ಹುಡುಗನಿಗೆ ಅದು ಚೆನ್ನಾಗಿ ಮನದಟ್ಟಾಗುವುದಿಲ್ಲ.

ದಿನತಂತಿ ಎಣಿಸಿಕೊಡುವ ಭಗಿನಾಳ ಶೆಟ್ಟಿಯಂತೂ "ಮಗ್ಗಿರಾಜ"ನೆಂದೇ ಪ್ರಸಿದ್ಧಿ. ಶೆಟ್ಟರೇ ೨೦ ದಿನ ತಂತಿ ಕೊಡಿ ಎಂದರೆ ಸಾಕು. "ಐದೊಂದಲ ಐದು, ಐದ್ ಎರಡ್ಲಾ ಹತ್ತು.......ಐದು ಮೂರ್ಲ ಹದಿನೈದು, ಐದು ನಾಲ್ಕಲಿ ಇಪ್ಪತ್ತು" ಹೀಗೆ ಎಣಿಸುತ್ತಾನೆ. ದುಡ್ಡು ಕೊಡಬೇಕಾದರೂ ಪಡೆಯಬೇಕಾದರೂ ಎರಡೊಂದಲಿ ಎರಡು............ಶುರುವಾಗುತ್ತದೆ.

ಶೆಟ್ಟರೆ ಒಂದು ಕ್ಯಾಲಿಕ್‌ಲೇಟರ್ ಇಟ್ಟುಕೊಳ್ಳೀ ಎಂದರೆ ಸಾಕು. ಆತನಿಗೆ ಸರ್ರನೇ ಕೋಪ ಬಂದು ಬಿಡುತ್ತದೆ. ಎದುರಿಗೆ ನಿಂತಿದ್ದವನನ್ನು ದುರ್ವಾಸ ಮುನಿಯಂತೆ ದಿಟ್ಟಿಸಿ "ನಾನು ಈ ಕೆಲಸದಲ್ಲಿ ನಲವತ್ತು ವರ್ಷದಿಂದ ಇದ್ದೀನಿ. ಒಂದು ದಿನ ಕೂಡ ಲೆಕ್ಕ ತಪ್ಪಿಲ್ಲ. ಇಲ್ಲಿ ಇರೋ ಯಾರನ್ನಾದ್ರೂ ಕೇಳಿಕೊಂಡು ಬಂದುಬಿಡು ನಾನೇನಾದ್ರು ಲೆಕ್ಕ ತಪ್ಪು ಹೇಳಿದ್ರೆ, ನೀನು ಕೇಳಿದ್ದು ಕೊಟ್ಟು ಬಿಡ್ತೀನಿ. ನಾನು ಈ ಲೈನಿಗೆ ಬಂದಾಗ ನೀನು ಹುಟ್ಟೇ ಇರಲಿಲ್ಲ. ನಿನ್ನ ವಯಸ್ಸಿಗಿಂತ ಜಾಸ್ತಿ ಸರ್ವಿಸ್ ನನಗೆ ಈ ಕೆಲಸದಲ್ಲಿ ಆಗಿದೆ.

ಅವತ್ತಿನಿಂದ ಕ್ಯಾಲಿಕ್‌ಲೇಟರ್ ಉಪಯೋಗಿಸಲಿಲ್ಲ ಗೊತ್ತಾ ! ಅದೆಲ್ಲಾ ನಿನ್ನಂತೋರಿಗೆ" ಮುಂಗೋಪಿಯು, ಸಂಪ್ರದಾಯವಾದಿಯೂ ಆದ ಶೆಟ್ಟಿ ಹೀಗೆ ಒಂದೇ ಸಮನೆ ದಬಾಯಿಸುತ್ತಿದ್ದ.

ನಮ್ಮಲ್ಲಿ ಯಾರಾದರೂ ಲೆಕ್ಕಚಾರದಲ್ಲಿ ತಪ್ಪು ಮಾಡಿದಾಗ "ಹೋಗು ಮಗ್ಗಿ ರಾಜನ ಹತ್ತಿರ ಮಗ್ಗಿ ಕಲಿತುಕೊಂಡು ಬಾ ಸರಿಯಾಗುತ್ತೀಯಾ " ಎಂದು ರೇಗಿಸುತ್ತಿದ್ದವು.

ಅವತ್ತೊಂದು ದಿನ ಬೆಳಗಿನ ಜಾವದಲ್ಲೇ ಈ ಮಗ್ಗಿರಾಜನ ೫೦ ಪೇಪರುಗಳಿರುವ ನಾಲ್ಕು ಬಂಡಲುಗಳು ಕಳುವಾಗಿಬಿಟ್ಟಿದ್ದವು. ಇದು ದೊಡ್ಡ ಸುದ್ಧಿಯಾಗಿಬಿಟ್ಟಿತ್ತು. ನಾವೆಲ್ಲಾ ಆತನಿಗೆ ಸಮಾಧಾನ ಮಾಡಲು, ಸಂತೈಸಲು ಆತ್ಮೀಯವಾಗಿ ಎಷ್ಟು ಹೋಗಿದೆ ಎಂದರೆ "ಐವತ್ತೊಂದು ಐವತ್ತು, ಐವತ್ತೆರಡಲಿ ನೂರು, ಐವತ್ತು ಮೂರ್ಲಿ ನೂರೈವತ್ತು, ಐವತ್ತು ನಾಲ್ಕಲಿ ಇನ್ನೂರು ಎನ್ನಬೇಕೆ !

ಇಷ್ಟಕ್ಕೆ ಮುಗಿಯುವುದಿಲ್ಲ ಈ ಅಡ್ಡ ಹೆಸರಿನ ಕತೆ. ಗಿರಾಕಿಗಳಿಗೆ ಮತ್ತು ಅವರ ಮನೆಗಳಿಗೆ ಇಟ್ಟಿರುವ ಅಡ್ಡ ಹೆಸರುಗಳು ಒಂದು ತೂಕವಾದರೆ ನಾವು ವೆಂಡರ್‌ಗಳು, ಹುಡುಗರು ಒಬ್ಬರಿಗೊಬ್ಬರು ಇಟ್ಟುಕೊಂಡಿರುವ ಅಡ್ಡ ಹೆಸರುಗಳು ಮತ್ತೊಂದು ತೂಕ. ಈ ವಿಚಾರದಲ್ಲೂ ನಾವು ಪಕ್ಕ ವೃತ್ತಿಪರರೆಂದೇ ಹೇಳಬಹುದು.

ನನ್ನ ಬಳಿ ಇರುವ ಹುಡುಗರಲ್ಲಿ ಬೆಳಿಗ್ಗೆ ಎದ್ದು ಬಂದು ಎಲ್ಲಾ ಕೆಲಸ ಮುಗಿದು ಒಂದೆರಡು ಗಂಟೆ ಕಳೆದರೂ ಕುಂಬಕರ್ಣನಂತೆ ನಿದ್ರೆ ಮೂಡಿನಲ್ಲಿರುವ ವೇಲು ಮುರುಗನ್ ಎನ್ನುವ "ನಿದ್ರಾ ರಾಜ", ಯಾವಾಗಲು ಮೂಗಿನ ಮೇಲೆ ಕೋಪವಿರುವ ಸುದೀರ್ ಎನ್ನುವ "ಷಾರ್ಟ್ ಟೆಂಪರ್", ಹೇಳದೆ ಕೇಳದೆ ರಜಾ ಹಾಕುವ ಸಿದ್ದ "ಚಕ್ಕರ್ ಮಲ್ಲ", ತೂಕ ಹಾಕಿದರೆ ೪೦ ಕೆಜಿ ತೂಗುವ ೬ ಆಡಿ ಎತ್ತರದ ಆನಂದ್ ಎನ್ನುವ "ಸ್ಟ್ರಾಂಗ್ ಮ್ಯಾನ್" ಪೇಪರ್ ಕೆಲಸ ಮುಗಿದ ತಕ್ಷಣ ಕಾಲೇಜಿನ ಹುಡುಗಿಯರನ್ನು ನೋಡಲು ಹಾ ತೊರೆಯುವ ಮಾದೇಶನೆಂಬ "ರೋಮಿಯೋ". ಸದಾ ಹಲ್ಲು ಗಿಂಜುತ್ತಾ ಬರುವ ಜಿಪುಣ ಇಂದರ್ ಎಂಬ "ಮಾರ್ವಾಡಿ" ಸಪ್ಲಿಮೆಂಟರಿ ಹಾಕದೆ ಕದ್ದು ಹೋಗಿ ಸಿಗರೇಟು ಸೇದುವ ಆಶೋಕ ಎಂಬ "ಸೋಂಬೈರಿ" ಇದ್ದಾರೆ.

ಇನ್ನು ಇತರ ವೃತ್ತಿ ಭಾಂದವರ ಹುಡುಗರ ಹೆಸರುಗಳು ಅವರವರ ಗುಣಗಳಿಗೆ ತಕ್ಕಂತೆ ಅಡ್ಡ ಹೆಸರು ಸದಾ ಚಾಲ್ತಿಯಲ್ಲಿರುತ್ತವೆ.

ಈ ವಿಚಾರದಲ್ಲಿ ನಾವು ತಪ್ಪಿಸಿಕೊಳ್ಳುವ ಆಗಿಲ್ಲ. ಸದಾ ಕಾಲ ಮತ್ತಿನಲ್ಲಿರುವ ಕೆ.ಸಿ.ರಾಜನಿಗೆ "ನೈಂಟಿ", ತಮಿಳು ಏಜೆಂಟ್ ಶರವಣನ್‌ಗೆ "ಕಾಟ್", ಈ ವೃತ್ತಿ ಜೊತೆಗೆ ಬಡ್ಡಿ ವ್ಯವಹಾರ ಮಾಡುವ ಬಾಲಕೃಷ್ಣನಿಗೆ "ಮೀಟರ್", ಚಿಕ್ಕ ಅಂಗಡಿ ಇಟ್ಟುಕೊಂಡು ಚಿಲ್ಲರೆ ಸಾಮಾನು ಜೊತೆಗೆ ದಿನಪತ್ರಿಕೆ ಮಾರುವ ನೂರಕ್ಕೂ ಹೆಚ್ಚು ಕೆಜಿ ತೂಗುವ ಗಿಡ್ಡ ಆಕಾರದ ಶಾಮಪ್ಪನಿಗೆ " ಉಪ್ಪಿನ ಮೂಟೆ". ಅಂತಲೂ, ಸದಾ ಸಿಗರೇಟು ಸೇದುತ್ತಾ ಹಿಂದೂ ದಿನಪತ್ರಿಕೆಯ ಇತರೆ ಪತ್ರಿಕೆಗಳನ್ನು ಸರಿಯಾಗಿ ಎಣಿಸಿಕೊಡುವ ೬೦ ವರ್ಷದ ರಾಧಕೃಷ್ಣರಿಗೆ "ಮಿ. ಕುಚೇಲನ್" ಅಂತಲೂ, ಕೆಲವೊಮ್ಮೆ ಗಡಿಬಿಡಿಯಿಂದಲೋ ಕೋಪದಿಂದಲೋ, ಕಡಿಮೆ ಎಣಿಸಿಕೊಟ್ಟುಬಿಟ್ಟರೆ "ತಾತ" ಅಂತಲೂ, ನಲವತ್ತು ವರ್ಷ ದಾಟಿದರೂ ಮದುವೆಯಾಗದ ಕೃಷ್ಣನಿಗೆ "ಬ್ಯಾಚುಲರ್", ರೇಸ್‌ಕೋರ್ಸಿನಲ್ಲಿ ಕೆಲಸ ಮಾಡುವ ಸುರೇಶನಿಗೆ "ಪಂಟರ್" ಇನ್ನೊಬ್ಬ ಕೆ. ಟಿ. ಕುಮಾರನಿಗೆ "ಜಾಕಿ" ಅಂತಲೂ, ಹಾಗೂ ಮತ್ತೊಬ್ಬ ರಮೇಶ್ ಎಣ್ಣೆ ಅಂಗಡಿ ಯಲ್ಲಿ ಕೆಲಸಮಾಡುವುದರಿಂದ ಆತನಿಗೆ "ಆಯಿಲ್ ರಾಜ" ಹೀಗೆ ಇನ್ನೂ ಅನೇಕ ಅಡ್ಡ ಹೆಸರುಗಳು ಬೆಳಗಿನ ಈ ನಮ್ಮ ಚಟುವಟಿಕೆಯಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ.

ಹಾಗೆ ನಾನು ಫೋಟೊಗ್ರಾಪರ್ ಕೂಡ ಆಗಿರುವುದರಿಂದ ನನ್ನನ್ನೂ "ಫೋಟೊದವನು" ಅಂತಲೇ ಅಡ್ಡ ಹೆಸರು ಚಾಲ್ತಿಯಾಗಿ ಜೊತೆಗೆ ಬ್ರಾಂಡೆಡ್ ನೇಮುಗಳಾದ "ಓಸಿ ರಾಜ, ಓಳು ಮುನಿಸ್ವಾಮಿ, ಟೆನ್ಷನ್ ಮ್ಯಾನ್, ಕಂಜೂಸ್, ಮುಂತಾದ ಅಡ್ಡ ಹೆಸರುಗಳು ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಶೇಕಡವಾರು ಲೆಕ್ಕ ಅಧಿಕವಾಗಿ ಇದ್ದೇ ಇರುತ್ತಾರೆ.

ಕಪ್ಪು ಬಣ್ಣದವನಿಗೆ ಕರಿಯಾ ಎಂದರೆ ಸಿಟ್ಟಾಗುತ್ತಾನೆಂದು ಅದನ್ನೇ ಮತ್ತಷ್ಟು ಮೇಲ್ದರ್ಜೆಗೇರಿಸಿ "ಬ್ಲಾಕಿ" ಅಂತಲೂ ಕರೆದಾಗ ಮುಖವರಳಿಸಿ ಓಗೊಡುವ ನನ್ನ ಗೆಳೆಯನ ಬೀಟ್ ಹುಡುಗ, ಹೀಗೆ ಅಡ್ಡ ಹೆಸರು ನಿರಂತರವಾಗಿ ಸಾಗುತ್ತದೆ. ಈ ಪ್ರತಿಯೊಂದು ಅಡ್ಡ ಹೆಸರಿನ ಹಿಂದೆ ಅದನ್ನು ಕರೆಸಿಕೊಂಡವರು ಹೆಸರಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆನ್ನುವುದು ಸತ್ಯ.

ಅಶ್ಲೀಲ ಪದಗಳ, ಏ ಸರ್ಟಿಫಿಕೇಟು, ಮರ್ಮಾಂಗಗಳ ತತ್ಸಮಾನ ಪದಗಳು, ಅವಾಚ್ಯ, ಪೋಲಿ ಹೆಸರುಗಳು ಅಡ್ಡ ಹೆಸರುಗಳಾಗಿ ಇಲ್ಲಿ ಬಹು ಚಾಲ್ತಿಯಲ್ಲಿರುತ್ತವೆ.

ಕೊನೆಯದಾಗಿ ಹಾಗೂ ಅತಿ ಮುಖ್ಯವಾಗಿ, ಬ್ಲೇಡ್, ಅನಾಸಿನ್, ಮೆಂಟಲ್ ಈ ಮೂರು ಬಹು ಮುಖ್ಯ ಬ್ರಾಂಡೆಡ್ ಅಡ್ಡ ಹೆಸರುಗಳನ್ನು ಹೊಂದಿರುವ ಪ್ರತಿಭಾವಂತರು ಎಲ್ಲಾ ವಿತರಣ ಕೇಂದ್ರಗಳಲ್ಲೂ ಸದಾ ಕಾಲ ಚಾಲ್ತಿಯಲ್ಲಿದ್ದೆ ಇರುತ್ತಾರೆ.
ಶಿವು.ಕೆ

Thursday, November 6, 2008

ಭ್ರಮಾಲೋಕದಲ್ಲಿ.

ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ, ಮತ್ತು ಗುರುವಾರ ದಿನಪತ್ರಿಕೆಗಳಲ್ಲಿ ಉಳಿದ ದಿನಗಳಿಗಿಂತ ಕಡಿಮೆ ಸಪ್ಲಿಮೆಂಟರಿ ಬರುವುದರಿಂದ ಸೇರಿಸುವುದು ಸುಲಬ. ಅದು ಹುಡುಗರಿಗೂ ಗೊತ್ತಿರುವುದರಿಂದ ಅವತ್ತು ಅವರು ಬೇಗ ಬಂದು, ಇರುವ ಕಡಿಮೆ ಕೆಲಸದಲ್ಲಿ ನಮಗೆ ಸಹಾಯಮಾಡಿ ಬಲು ದೊಡ್ಡ ಉಪಕಾರ ಮಾಡಿದೆವೆಂದು ಪೋಸು ಕೊಡುತ್ತಾರೆ.

ಇನ್ನಿತರ ದಿನಗಳಲ್ಲಿ ಸಪ್ಲಿಮೆಂಟರಿ ಹೆಚ್ಚಾಗಿ ಬರುತ್ತದೆ ಅಂತ ಅವರಿಗೆ ಗೊತ್ತಾಗಿ ಬೇಗ ಹೋದರೆ ಅದನ್ನೆಲ್ಲಾ ಹಾಕುವ ಕೆಲಸ ಪೂರ್ತಿ ನಮಗೇ ಹಚ್ಚಿಬಿಡುತ್ತಾರೆ ಅಂತ ಅವರಿಗೆ ಗೊತ್ತು.

ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ? ನಾವು ಏಜೆಂಟುಗಳೇ ಸಪ್ಲಿಮೆಂಟರಿ ಹಾಕಿ ಮುಗಿಸಿದ ಮೇಲೆ ಹೋದರೆ ಆಗ ಸುಲಭವಾಗಿ ನಮ್ಮ ಬೀಟ್ ಪೇಪರುಗಗಳನ್ನು ತಗೊಂಡು ಹೋಗಬಹುದು ಎನ್ನುವುದು ಲೆಕ್ಕಾಚಾರ. ಅದರಲ್ಲೂ ಶನಿವಾರ, ಭಾನುವಾರಗಳಂದು ಈ ರೀತಿ ಕಳ್ಳಬೀಳುತ್ತಾರೆ.

ಯಾಕ್ರೋ ಲೇಟಾಗಿ ಬರ್ತೀರಾ" ಎಂದು ಕೇಳಿದರೆ

ನೀವೊಂದು ಸುಮ್ಮನಿರಿ, ಇವತ್ತು ವಾರಕ್ಕೊಂದು ಭಾನುವಾರ ನಮ್ಮ ಗಿರಾಕಿಗಳೆಲ್ಲಾ ನೆಮ್ಮದಿಯಾಗಿ ಮಲಗಿರುತ್ತಾರೆ. ಎದ್ದೇಳೋದೆ ೮ ಗಂಟೆ-೯ ಗಂಟೆ ಆದಮೇಲೆ. ನಾವು ಪೇಪರನ್ನ ಅವರ ಬಾಗಿಲಿಗೆ ಬಿಸಾಕಿ ಶಬ್ದ ಮಾಡಿ, ಅವರಿಗೆ ಡಿಸ್ಟರ್ಬ್ ಮಾಡೋದು ಬೇಡ, ಆರಾಮವಾಗಿ ಹಾಕೋಣ ಬಿಡಿ ಬಾಸ್" ಎಂದು ಅಪರೂಪಕೊಮ್ಮೆ ನಮ್ಮ ಗ್ರಾಹಕರ ಪರವಾಗಿ ಮಾತಾಡಿದಾಗ ನಾವೆ ಬೆರಗಾಗಿ ಬೆಡಬೇಕು.

ಅವತ್ತು. ಮಂಗಳವಾರ. ಕೆಲಸ ಬೇಗ ಮುಗಿದಿತ್ತು. ಎಲ್ಲಾ ಏಜೆಂಟರ ಹುಡುಗರು ಅಂದು ಬೆಳಿಗ್ಗೆ ‍೬ ಗಂಟೆಗೆ ಮೊದಲೇ ಪೇಪರುಗಳನ್ನು ಸೈಕಲ್ಲಿಗೇರಿಸಿಕೊಂಡು ಹೋಗಿದ್ದರು. ನಾನು ಮತ್ತು ರಂಗನಾಥ ಮಾಮೂಲಿನಂತೆ ನಮ್ಮ ಪ್ರತಿದಿನದ ಅಡ್ಡವಾದ ಶ್ರೀಸಾಗರ್ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ, ಅವತ್ತಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆವು. ಲೋಕಾಭಿರಾಮವಾಗಿ ಅವತ್ತಿನ ಪತ್ರಿಕೆಯಲ್ಲಿ ಹೆಚ್ಚಾಗಿ ಕಳ್ಳತನದ ವಿಚಾರವೇ ಬಂದಿರುವುದರ ಬಗ್ಗೆ ಹರಟುತ್ತಿರುವಾಗ ನಮ್ಮ ವೃತ್ತಿಭಾಂಧವ ಬಾಲ್ಡಿ ಮಂಜ ಬಂದ.

ಅವನಿಗೆ ಮದುವೆಗೆ ಮೊದಲೇ ತಲೆಯ ಮುಂದಿನ ಅರ್ಧ ಭಾಗ ಕೂದಲು ಉದುರಿ ಮರಗಿಡಗಳಿಲ್ಲದ ರಾಮನಗರದ ಹೆಬ್ಬಂಡೆಗಳ ಹಾಗೆ ಮುಂಭಾಗ ಹಾಗೂ ಅಕ್ಕ ಪಕ್ಕ ಪೂರ್ತಿ ಬೋಳಾಗಿತ್ತು. ಹಿಂಭಾಗ ಮಾತ್ರ ಸ್ವಲ್ಪ ಕೂದಲಿದ್ದುದರಿಂದ ನಾವೆಲ್ಲಾ ಬಾಲ್ಡಿ ಮಂಜ ಅಂತಲೇ ಆಡ್ಡ ಹೆಸರು ಕರೆಯುವುದು ರೂಢಿ.

ಯಾವಾಗಲು ತನ್ನ ಮೋಟರು ಬೈಕಿನಲ್ಲಿ ಬರುತ್ತಿದ್ದವನು, ಇವತ್ತು ನಡೆದುಕೊಂಡು ಬರುತ್ತಿದ್ದಾನಲ್ಲ ಅನ್ನಿಸಿ ಇಬ್ಬರೂ ಅದನ್ನೇ ಮಾತಾಡಿಕೊಂಡೆವು.

"ಮಂಜ ಕಾಫಿ ಕುಡಿತಿಯೇನೋ?" ಮುಖದಲ್ಲಿ ಆತ್ಮೀಯತೆ ನಟಿಸುತ್ತಾ ರಂಗ ಕೇಳಿದ.

"ಬೇಡ ಕಣೋ ಈಗ ಆಯ್ತು, ಆದಿತ್ಯ ಹೋಟಲಿನಲ್ಲಿ ಕುಡಿದು ಬಂದೆ." ಬಾಲ್ಡಿ ಮಂಜನ ಉತ್ತರ. ಈ ಮಾತು ಅವನಿಗೆ ಪ್ರತಿದಿನದ ಬಾಯಿಪಾಠ. ಹಾಗಂತ ಕೊಡಿಸಿದರೇ ಕುಡಿದೇ ಕುಡಿಯುತ್ತಾನೆ.

"ಪರ್ವಾಗಿಲ್ಲ ಇಲ್ಲೊಂದು ಸ್ವಲ್ಪ ಕುಡಿಯೋ" ನಾನು ಮತ್ತಷ್ಟು ಅವನ ಕಡೆಗೆ ಕಾಳಜಿ ತೋರಿಸುವವನಂತೆ.

ಮತ್ತೊಂದು ಸುತ್ತು ಕಾಫಿ ಬಂತು. ಬಾಲ್ಡಿ ಮಂಜ ಯಾಕೋ ಮಂಕಾಗಿದ್ದಂತೆ ಕಂಡ.

ನಮ್ಮ ಚಟುವಟಿಕೆಯ ಸಮಯದಲ್ಲಿ ಯಾರಾದರೂ ಡಲ್ಲಾಗಿದ್ದರೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಆ ದಿನ ಬೀಟ್ ಹುಡುಗರು ಬರದೇ ಸರಿಯಾಗಿ ಕೈ ಕೊಟ್ಟು ಎಲ್ಲಾ ಕೆಲಸ ನಮ್ಮ ತಲೆ ಮೇಲೆ ಬಿದ್ದಿದೆಯಲ್ಲ ಅಂತಲೋ, ಅಥವ ಅವತ್ತಿನ ಕೆಲಸ ನಿಭಾಯಿಸಲು ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದ್ದಾಗ ಅವರ ಮುಖದ ಭಾವನೆಗಳು ಕೋಪ ಅಥವ ಚಿಂತೆಗೆ ಬದಲಾಗಿರುತ್ತವೆ.

ನನಗೆ ಹುಡುಗರು ತಪ್ಪಿಸಿಕೊಂಡಾಗ ಚಿಂತೆಗಿಂತ ಕೋಪವೇ ಹೆಚ್ಚಾಗಿ ಬರುವುದುಂಟು. ನನ್ನ ಮುಖ ನೋಡಿದವರು ಆ ಸಮಯದಲ್ಲಿ " ಯಾಕೋ ಹುಡುಗ್ರೂ ಬಂದಿಲ್ವಾ?" ಎಷ್ಟು ಜನ ಅಂತ ಪ್ರಶ್ನಿಸುತ್ತಾರೆ. ಅದೇ ರೀತಿ ಮಂಜ,ಸುರೇಶ, ಮಣಿ ರಂಗನಾಥ ಇನ್ನೂ ಕೆಲವರ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿರುತ್ತವೆ. ಆಗಲೂ ಇದೇ ಕಾರಣವನ್ನೇ ಅವರಿಗೂ ನಾವು ಕೇಳುವುದು. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ.

ಇಲ್ಲೂ ಮಂಜನ ಮುಖದಲ್ಲಿ ಚಿಂತೆ ಅವರಿಸಿರುವುದನ್ನು ಕಂಡು

"ಯಾಕೋ ಹುಡುಗ್ರೂ ಬಂದಿಲ್ವಾ? ಇಲ್ಲಾ ಇಂಡೆಂಟು ಕಟ್ಟಿಲ್ವಾ" ರಂಗ ಕೇಳಿದ.

ಅದ್ಯಾವುದಕ್ಕೂ ಇವತ್ತು ತೊಂದರೆ ಆಗಿಲ್ಲವೋ" ಬಾಲ್ಡಿ ಮಂಜ ಬೇಸರದ ಮುಖದಲ್ಲೇ ಹೇಳಿದ.

'ಮತ್ಯಾಕೊ ಮುಖ ಆಂಗೆ ಮಾಡಿಕೊಂಡಿದ್ದೀಯಾ? ಮನೆಯಲ್ಲಿ ಏನಾದರೂ ತೊಂದರೆನಾ?' ನಾನು ಕೇಳಿದೆ.

"ಏನು ಇಲ್ವೋ"

ಮತ್ಯಾಕೆ ಇಂಗಿದ್ದೀಯಾ ಬೆಳಿಗ್ಗೆ ಬೆಳಿಗ್ಗೆ"

ನಮ್ಮ ಹುಡುಗ ಗೋಫಿ ಕೈಯಲ್ಲಿ ನನ್ನ ಬೈಕ್ ಕೊಟ್ಟು "ಒಬ್ಬ ಕಸ್ಟಮರ್ ಆರ್ಜೆಂಟ್ ಮಾಡುತ್ತಾರೆ ಹೋಗಿ ಅವರ ಮನೆಗೆ ಪೇಪರ್ ಹಾಕಿ ಬಾ ಅಂತ ಕಳಿಸಿದ್ದೆ. ಇನ್ನೂ ಬಂದಿಲ್ಲ ಕಣೋ"

"ಅಯ್ಯೋ ಅದಕ್ಯಾಕೆ ಚಿಂತೆ ಮಾಡ್ತೀಯಾ ಬರ್ತಾನೆ ಬಿಡು"

" ಅದಲ್ಲ ಕಣೋ, ಅವನು ಹೋಗಿ ಒಂದು ಗಂಟೆ ಆಯ್ತು"

"ಆ ಕಷ್ಟಮರ್ ಮನೆ ದೂರ ಏನೋ?'

ಹೇ ಇಲ್ಲಾ ಕಣೋ ಇಲ್ಲೇ ಕುಮಾರಪಾರ್ಕಲ್ಲಿ".

"ಹತ್ತಿರದ ಕುಮಾರ ಪಾರ್ಕಲ್ಲಿ ಒಂದು ಪೇಪರ ಹಾಕಿ ಬರೋದಕ್ಕೆ ಒಂದು ಗಂಟೆ ಬೇಕೇನೋ, ಐದೇ ನಿಮಿಷ ಸಾಕಪ್ಪ"

ಆದೇ ಕಣೋ ನನಗೂ ಚಿಂತೆ ಆಗಿರೋದು, ಐದು ನಿಮಿಷದ ಕೆಲಸಕ್ಕೆ ಒಂದು ಗಂಟೆಯಾದ್ರು ಬರಲಿಲ್ಲವಲ್ಲ!

ನಾವು ಮೂವರು ಈ ವಿಚಾರ ಮಾತಾಡುತ್ತಿರುವಾಗಲೇ ಮಂಜನ ಇನ್ನಿಬ್ಬರು ಹುಡುಗರು ಬೀಟ್ ಮುಗಿಸಿ ಅಲ್ಲಿಗೆ ಬಂದರು. ತಕ್ಷಣ

"ಲೋ ನಿಮ್ಮ ಪ್ರೆಂಡು ಗೋಪಿನೇನಾದ್ರು ನೋಡಿದ್ರೇನೋ?'

"ಇಲ್ಲಾ ಯಾಕಣ್ಣ?"

ಒಂದು ಪೇಪರ್ ಹಾಕಿ ಬರಲಿಕ್ಕೆ ನಿಮ್ಮ ಓನರ್ ಬೈಕ್ ಕೊಟ್ಟು ಕಳಿಸಿದ್ರೆ ಇನ್ನೂ ಬಂದಿಲ್ಲ ಕಣೋ, ಹೋಗಿ ಒಂದು ಗಂಟೆ ಮೇಲಾಯ್ತು.

ಇಬ್ಬರು ಹುಡುಗರು ಮುಖ ಮುಖ ನೋಡಿಕೊಂಡರು. ನಂತರ

ಆಣ್ಣಾ ಅವನ ಕೈಲಿ ಯಾಕಣ್ಣ ಗಾಡಿ ಕೊಟ್ರೀ?

ಯಾಕ್ರೋ ಏನಾಯ್ತು?"

ಅವನು ಸರಿ ಇಲ್ಲಣ್ಣಾ, ಯಾರಾದ್ರು ಅವನಿಗೆ ಬೈಕ್ ಕೊಟ್ರೆ ಆಷ್ಟೇ ಮುಗೀತು. ಇರೋ ಪೆಟ್ರೋಲೆಲ್ಲಾ
ಖಾಲಿಯಾಗೋವರೆಗೂ ವಾಪಸು ಬರೋಲ್ಲ.

ಆ ಹುಡುಗರ ಮಾತು ಕೇಳಿ ರಂಗ ಮತ್ತು ನನಗೂ ಇದು ನಿದಾನವಾಗಿ ಗಂಭೀರ ರೂಪ ಪಡೆದುಕೊಳ್ಳುತ್ತಿರುವ ವಿಚಾರವೆನಿಸಿತ್ತು. ಆ ಹೋಟಲಿಂದ ಹೊರಬಂದು ನಮ್ಮ ಮಾತುಕತೆ ಮುಂದುವರಿಯುತ್ತಿದ್ದಾಗ ನನ್ನ ಇಬ್ಬರೂ ಹುಡುಗರು, ರಂಗನ ಹುಡುಗರು ಅಲ್ಲಿಗೆ ಬಂದರು. ಅವರಿಗೂ ಮತ್ತೊಮ್ಮೆ ಎಲ್ಲಾ ವಿಚಾರ ತಿಳಿಸಿದ ಮೇಲೆ ಅವರಲ್ಲೇ ಗುಸು ಗುಸು ಪ್ರಾರಂಭವಾಯಿತು.

"ರ್ರೀ ನೀವು ಅವನಿಗೆ ಗಾಡಿ ಕೊಡಬಾರದಿತ್ತು.! ನನ್ನ ಬೀಟ್ ಹುಡುಗ ಮಾದೇಶ ಹೇಳಿದ ಮಾತಿಗೆ ಬಾಲ್ಡಿ ಮಂಜನ ಮುಖದಲ್ಲಿ ಮತ್ತಷ್ಟು ಆತಂಕ ಹೆಚ್ಚಾಯಿತು.

ಇದ್ಯಾಕೋ ಇಲ್ಲದ ವಿಕೋಪಕ್ಕೆ ಹೋಗುತ್ತದೆ ಅಂತ ನನಗನ್ನಿಸಿ ಗೋಪಿಯ ಆಪ್ತಗೆಳೆಯನಾದ ನಾಣಿಗೆ " ನೀನು ಗೋಪಿಗೆ ಕ್ಲೋಸ್ ಪ್ರಂಡ್ ಅಲ್ಲವೇನೋ?" ಅವನ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. ನೀನೇ ಹೇಳು." ಕೇಳಿದೆ.

ಆಣ್ಣಾ ಅವನು ಮೊದಲು ಕ್ಲೋಸ್ ಪ್ರಂಢು ಆಗಿದ್ದ. ಇವಾಗ ಅವನು ತುಂಬಾ ಕೆಟ್ಟು ಹೋಗಿದ್ದಾನೆ, ಸಿಗರೇಟು ಸೇದ್ತಾನೆ, ಡ್ರಿಂಕ್ಸ್ ಮಾಡ್ತಾನೆ ತುಂಬಾ ಕೆಟ್ಟುಹೋಗಿದ್ದಾನೆ. ಅವಾಗಿಂದ ನನಗೂ ಅವನಿಗೂ ಆಷ್ಟಕಷ್ಟೇ"

ನಾಣಿ ಗೋಪಿಯ ಇತ್ತೀಚಿನ ಕ್ಯಾರೆಕ್ಟರ್ ಸರ್ಟಿಫಿಕೇಟು ಕೊಡುವುದರ ಜೊತೆಗೆ ತಾನು ಒಳ್ಳೇ ಹುಡುಗ ಅಂತಲೂ ಪರೋಕ್ಷವಾಗಿ ತಿಳಿಸಿ ಈ ವಿಚಾರದಲ್ಲಿ ಜಾರಿಕೊಂಡುಬಿಟ್ಟ.

"ಅಯ್ಯೋ ಹೋದವಾರ ಯಾರದೋ ಬೈಕ್ ತಗೊಂಡು ಕುಣಿಗಲ್ಲಿಗೆ ಹೋಗಿಬಿಟ್ಟಿದ್ದನಂತೆ ವಾಪಸು ಬಂದಾಗ ಮದ್ಯಾಹ್ನ ಆಗಿತ್ತು." ಮಾದೇಶ ನಾಣಿಯ ಮಾತಿನ ಪರವಾಗಿ ಪರೋಕ್ಷವಾಗಿ ಈ ರೀತಿ ಹೇಳಿ ಗೋಪಿ ವಿರುದ್ಧ ಪ್ರಬಲ ಸಾಕ್ಷಿ ನೀಡಿದ.

ರಂಗನಿಗೆ ಈ ಹುಡುಗರ ಮಾತು ಕೇಳಿ ನಿದಾನವಾಗಿ ಗೋಪಿಯ ಮೇಲೆ ಸಂಶಯ ಬರತೊಡಗಿತು. ಬೈಕನ್ನೇನಾದರೂ ಕದ್ದು ತಗೊಂಡುಹೋಗಿ ಯಾರಿಗಾದ್ರೂ ಗುಜರಿಯವರಿಗೆ ಕೊಟ್ಟು ಬಿಟ್ರೆ, ಅದರ ಪಾರ್ಟುಗಳನ್ನೆಲ್ಲಾ ಬೇರೆ ಬೇರೆ ಮಾಡಿ ಮಾರಿಬಿಡ್ತಾರೆ. ಯಾರಿಗೂ ಗೊತ್ತಾಗೋದೆ ಇಲ್ಲ. ರಂಗನ ಈ ರೀತಿಯ ಅಲೋಚನೆಗೆ ಅವತ್ತಿನ ಪೇಪರಿನ ತುಂಬಾ ಬಂದಿರುವ ಬರೀ ಕಳ್ಳತನದ ವಿಷಯಗಳು ಅವನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಾರಂಭಿಸಿದವು.

ನನಗೂ ಇದೇ ರೀತಿಯ ಹಳೆಯ ಘಟನೆಗಳು ನೆನಪಾಗತೊಡಗಿದವು. ನನ್ನ ಸ್ಕೂಟಿಯನ್ನು ನಮ್ಮ ಹುಡುಗರು ೫ ನಿಮಿಷ ಎಂದು ಹೇಳಿ ತೆಗೆದುಕೊಂಡು ಹೋಗಿ ಮರೆತು ಅವರ ಮನೆಗೆ ಹೋಗಿ ಅರ್‍ಆಮವಾಗಿ ಇದ್ದು ಬಿಡುವುದು, ಅಥವಾ ಅವರ ಮನೆಯ ಕೆಲಸಕ್ಕೆ ಅಂತ ಬಳಸುವುದು, ಗೆಳೆಯರು ಸಿಕ್ಕಾಗ ಹೀರೊಗಳಂತೆ ಮೈಮರೆತು ಎಲ್ಲೋ ಹರಟೆಹೊಡೆಯುತ್ತಾ ನಿಂತುಬಿಡುವುದು, ಇವರೆಲ್ಲರ ವಯಸ್ಸು ೧೬-೨೦ ರವರೆಗೆ ಇರುವುದರಿಂದ ಅವರವರ ಓನರುಗಳ ಟೂ ವೀಲರುಗಳು, ಮೋಟರ್ ಬೈಕನ್ನು ಐದೇ ನಿಮಿಷದಲ್ಲಿ ಬರುತ್ತೇನೆ ಎಂದು ಕೇಳಿ ಪಡೆದುಕೊಂಡು ಎಲ್ಲರೂ ಒಟ್ಟಾಗಿ ಕಾಲೇಜು ಹುಡುಗಿಯರ ನೋಡುತ್ತಾ ನಿಲ್ಲುವುದು, ನಾವೆಲ್ಲಾ ಇವರು ಎಲ್ಲಿ ಹೋದರು ಅಂತ ಚಿಂತೆಗೊಳಗಾಗುವುದು, ಇವೆಲ್ಲಾ ನೆನಪಾಗಿ, ಮಂಜನಿಗೆ ಇದೆಲ್ಲಾ ಹೇಳಿ ಈ ರೀತಿ ಏನಾದ್ರೂ ಆಗಿರಬಹುದು ನೋಡು" ಎಂದೆ.

"ಸಾರ್ ನೀವೊಂದು ಅವನಿಗೆ ಕಾಲೇಜಿನ ಮುಂದೆ ನಿಲ್ಲೋ ಸೋಕಿ ಇಲ್ಲ, ಯಾಕಂದ್ರೇ ಅವನು ಸೇರೋ ಹುಡುಗ್ರಾ ಸಹವಾಸ ಸರಿಯಿಲ್ಲ. ಎಲ್ಲಾ ಕೆಟ್ಟ ಕೆಲಸ ಕಲಿತಿದ್ದಾನೆ ಗೊತ್ತಾ! ನಾಣಿ ಖಚಿತವಾಗಿ ನೋಡಿರುವವನಂತೆ ಹೇಳಿದ.

"ನೀನು ಸುಮ್ಮನಿರೋ" ಎಂದು ಅವನ ಬಾಯಿ ಮುಚ್ಚಿಸಿ "ರಂಗ ನಿನ್ನ ಗಾಡಿನ ಇವನ ಕೈಯಲ್ಲಿ ಕಳಿಸು ಗೋಪಿ ಮನೆಗೆ ಹೋಗಿ ನೋಡಿಕೊಂಡು ಬರಲಿ, ರವಿ ನೀನು ನನ್ನ ಗಾಡಿ ತಗೊಂಡು ಹೋಗಿ ಕಾಲೇಜು, ಅಕ್ಕ ಪಕ್ಕ ಹೋಟಲ್ ಎಲ್ಲಾ ನೋಡಿಕೊಂಡು ಬಾ, ಮಾದೇಶ ನೀನು ನಿನ್ನ ಸೈಕಲ್ಲಲ್ಲಿ ಅವನು ಪೇಪರ್ ಹಾಕಿಲಿಕ್ಕೆ ಹೋಗಿದ್ದಾನಲ್ಲ ಆ ಆಪಾರ್ಟುಮೆಂಟು ಒಳಗೆ ನೋಡಿ ಬಾ ಮೂವರನ್ನು ಕಳುಹಿಸಿದೆವು.

ಆಷ್ಟರಲ್ಲಿ ಈ ವಿಚಾರ ದೊಡ್ಡದಾಗಿ ಮೊಬೈಲು ಫೋನು ಮುಖಾಂತರ ಎಲ್ಲಾ ಏಜೆಂಟರಿಗೂ, ಬೀಟ್ ಬಾಯ್ಸುಗಳಿಗೂ ಹರಡಿತ್ತು. ಮತ್ತಷ್ಟು ನಮ್ಮ ಗೆಳೆಯರು ಕೆಲವು ಹೊರಗಿನವರು ಅಲ್ಲಿಸೇರಲಾರಂಭಿಸಿದರು. ಕೆಲವರು ಬಾಲ್ಡಿ ಮಂಜನಿಗೆ ಫೋನ್ ಮಾಡಿ ಈ ವಿಚಾರವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಅವನಿಗೆ ಮತ್ತಷ್ಟು ದಿಗಿಲು ಹುಟ್ಟಿಸಿದರು.

ಮಂಜ ಈ ವಿಚಾರದಲ್ಲಿ ಅದೆಷ್ಟು ಭಾವುಕನಾದನೆಂದರೆ, "ತನ್ನ ಮೋಟರ್ ಬೈಕನ್ನು ಗೋಪಿ ಕದ್ದುಕೊಂಡು ಹೋಗಿಬಿಟ್ಟಿದ್ದಾನೆ. ಮುಂದೆ ಅವನು ಯಾರಿಗೂ ಕಾಣುವುದಿಲ್ಲ ಅನಂತರ ಯಾರಿಗೋ ಗುಜರಿಯವರಿಗೆ ಮಾರಿಬಿಡುತ್ತಾನೆ. ತೆಗೆದುಕೊಂಡವರು ನಂತರ ಅವರು ಅರ್ಧಗಂಟೆಯಲ್ಲಿ ಒಬ್ಬ ಬೈಕಿನ ಎಲ್ಲಾ ಭಾಗಗಳನ್ನು ಬಿಡಿ ಬಿಡಿ ಮಾಡಿದ ಮೇಲೆ ಯಾರ್ಯಾರೋ ಬಂದು ದುಡ್ಡು ಕೊಟ್ಟು ತಮಗೆ ಬೇಕಾದ ಭಾಗಗಳನ್ನು ತಗೊಂಡು ಹೋದಂತೆ ಸಿನಿಮಾ ರೀತಿಯ ದೃಶ್ಯಗಳು ಕಾಣಲಾರಂಭಿಸಿದವು.

ಹತ್ತು ನಿಮಿಷ ಕಳೆಯಿತು. ನಾವು ಗೋಪಿಯನ್ನು ಹುಡುಕಿಕೊಂಡು ಬರಲು ಕಳುಹಿಸಿದ್ದ ಎಲ್ಲಾ ಹುಡುಗರು ಅವನು ಸಿಗಲಿಲ್ಲವೆಂದು ವಾಪಸ್ಸು ಬಂದರು. ಮಾದೇಶನೂ ಅಪಾರ್ಟುಮೆಂಟಿನ ಪಾರ್ಕಿಂಗ್ ಜಾಗದಲ್ಲಿ ಯಾವ ಮಂಜನ ಬೈಕು ಕಾಣಲಿಲ್ಲವೆಂದು ಹೇಳಿದ.

"ಮಂಜು ನೀನು ಈಗಲೆ ಇನ್ಸೂರೆನ್ಸಿಗೆ ಕ್ಲೈಮ್ ಮಾಡು, ಈ ವಿಚಾರದಲ್ಲಿ ತಡ ಮಾಡಬೇಡ!"
ಹತ್ತಿರದಲ್ಲೇ ನಿಂತಿದ್ದ ಸುರೇಶ ತನ್ನ ಆಮೂಲ್ಯ ಸಲಹೆ ಕೊಟ್ಟ.

"ಹೌದು ಗುಡ್ ಐಡಿಯಾ!" ಸುರೇಶನ ಪಕ್ಕದಲ್ಲಿದ್ದ ಲೋಕಿ ಆಶ್ಚರ್ಯಚಕಿತನಾಗಿ ಹೇಳಿದ.

" ಮಂಜು ಆಕ್ಷಿಡೆಂಟ್ ರಿಲೀಫ್ ಫಂಡ್ ಮಾಡಿಸಿದ್ದಾನಾ?" ಯಾರೋ ಕೇಳಿದರು.

"ಹೇ ಅವನು ಅದನ್ನು ಮಾಡಿಸಿದ್ರು ಅದು ಮಂಜುಗೆ ಆಕ್ಷಿಡೆಂಟ್ ಆದ್ರೆ ಮಾತ್ರ ಕೊಡೋದು, ಯಾಕೆಂದ್ರೆ ಅವನು ಫಸ್ಟ್ ಪಾರ್ಟಿ, ಅವನ ಹುಡುಗ ಗೋಪಿ ಯಾರೊ ಥರ್ಡ್ ಪಾರ್ಟಿಯಾಗ್ತಾನಾದ್ದರಿಂದ ಈ ಐಡಿಯಾ ವರ್ಕ್ ಹೌಟ್ ಆಗೊಲ್ಲ" ಮತ್ತೊಬ್ಬರು ಕೇಳಿದವನಿಗೆ ಸಮಾಧಾನದ ಉತ್ತರ ನೀಡಿದರು.

"ಪೋಲಿಸ್ ಕಂಪ್ಲೆಂಟ್ ಕೊಟ್ಟರೆ ಹೇಗೆ?" ಮತ್ತೊಬ್ಬನ ಮಾತು

"ಹೌದು ಕರೆಕ್ಟ್!" ಮಗದೊಬ್ಬನಿಗೆ ಜ್ಜಾನೋದಯವಾಯಿತು.

"ಹೇ ಹೋಗೊ ಅದೆಲ್ಲಾ ವೇಷ್ಟು"

"ಯಾಕೋ? "

"ಮತ್ತೇನು, ಇವನು ಹೋಗಿ ಕಂಪ್ಲೆಂಟು ಕೊಟ್ಟರೂ ಅವರು ಆಯ್ತು ಹೇಳಿ ಕಳಿಸುತ್ತೀವಿ ಅಂತಾರೆ ಆಷ್ಟೇ"

ಮತ್ತೇನು ಮಾಡುವುದು? ಎಲ್ಲರೂ ತಮ್ಮ ತಮ್ಮ ಆಲೋಚನೆಯಲ್ಲಿ ಮುಳುಗಿದರು. ನನಗೂ ಇದೇ ರೀತಿಯ ನಾನ ಯೋಚನೆಗಳು ತಲೆಯಲ್ಲಿ ಹರಿದಾಡಿದವು.

ಮಂಜನಂತೂ ಎಲ್ಲಾರ ಮಾತುಗಳನ್ನೂ ಕೇಳಿ ಅವರು ಹೇಳಿದ್ದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ಮತ್ತಷ್ಟು ತನ್ನ ಮೋಟರು ಬೈಕು ತನ್ನ ಕಣ್ಣಳತೆಯಿಂದ ನಿದಾನವಾಗಿ ದೂರ ಸಾಗಿ ಶೂನ್ಯದಲ್ಲಿ ಮರೆಯಾಗಿ ಹೋಗುತ್ತಿರುವಂತೆ ಮತ್ತೆಂದು ತನ್ನ ಕೈಗೆ ಸಿಗುವುದಿಲ್ಲವೆನ್ನುವುದನ್ನು ಗಾಢವಾಗಿ ಕಲ್ಪಿಸಿಕೊಳ್ಳತೊಡಗಿದ.

ಆಷ್ಟು ಹೊತ್ತಿಗಾಗಲೇ ನಾವೆಲ್ಲರೂ ಸೇರಿ ೨ ಗಂಟೆ ಕಳೆದಿತ್ತು.

"ಗೋಪಿ ಹತ್ರ ಮೊಬೈಲ್ ಫೋನಿದ್ರೆ ಅವನಿಗೆ ಫೋನ್ ಮಾಡಿ" ಯಾರೊ ಐಡಿಯಾ ಕೊಟ್ಟ.

ಅರೇರೆ... ಹೌದಲ್ವ! ನಮಗೆ ಇದು ಹೊಳೆಯಲಿಲ್ಲವಲ್ಲ" ಎಲ್ಲರಿಗೂ ಅನ್ನಿಸಿತು. ಐಡಿಯಾ ಕೊಟ್ಟವನನ್ನು ಹೊಗಳಿದರು. ಈ ಮಾತು ಕೇಳಿ ಮಂಜನ ಮುಖ ಸ್ವಲ್ಪ ಗೆಲುವಾಯಿತು. ತನ್ನ ಮೊಬೈಲಿಂದ ಗೋಪಿಗೆ ಪೋನ್ ಮಾಡಿದ.

ಆ ಕಡೆಯಿಂದ ಸ್ವಿಚ್ ಆಫ್!!

ಯಾರೋ ಕೊಟ್ಟ ಐಡಿಯಾದ ಪಠಾಕಿ ಟುಸ್ಸಾಗಿತ್ತು.

ಎಲ್ಲರೂ ಕೊನೆಗೆ ತಮ್ಮದೇ ಬೈಕು ಕಳೆದುಹೋಯಿತೇನೋ ಎಂಬಂತೆ ಶೋಕದ ಕಳೆಹೊತ್ತು ಒಬ್ಬರಿಗೊಬ್ಬರೂ ಸಾಂತ್ವಾನ ಹೇಳುತ್ತಾ ಕೊನೆಯಲ್ಲಿ ಬಾಲ್ಡಿ ಮಂಜನಿಗೆ ಸಾಂತ್ವಾನ ಹೇಳಿ ವಿಷಾದ ಭಾವವನ್ನು ಮುಖದಲ್ಲಿ ನಟಿಸುತ್ತಾ ಗಂಭೀರವದನರಾಗಿ ಒಬ್ಬೊಬ್ಬರಾಗಿ ಜಾಗ ಕಾಲಿ ಮಾಡಿದರು.

ಕೊನೆಗೆ ಉಳಿದಿದ್ದು ಮಂಜ ನಾನು ಮತ್ತು ರಂಗ.
ನಾವಿಬ್ಬರೂ ಕೊನೆಯದಾಗಿ ಮಂಜನಿಗೆ ಸಮಾಧಾನ ಹೇಳುತ್ತಾ ಚಿಂತೆ ಮಾಡಬೇಡ ಹೋಗಿದ್ದು ಗಾಡಿ ತಾನೆ, ಜೀವವೇನು ಹೋಗಿಲ್ಲವಲ್ಲ. ನೀನು ಚೆನ್ನಾಗಿದ್ರೆ ಇಂಥ ನೂರು ಬೈಕ್ ತಗೋಬಹುದು, ಇನ್ನು ವಯಸ್ಸಿನ ಹುಡುಗ ನೀನು ಹೆದರಬೇಡವೆಂದು ಹೇಳಿ ಅವನ ಯವ್ವೌನವನ್ನು ನೆನಪಿಸಿ {ನಮಗೆ ಅವನಿಗಿಂತ ಹೆಚ್ಚಾಗಿ ಜೀವನಾನುಭವವಿದೆ ಎಂದು ನಟಿಸಿ} ಚಿಂತೆಯನ್ನು ಮರೆತು ಹೊಸ ಹುಮ್ಮಸ್ಸು ತುಂಬಿ ಅವನನ್ನು ಕಳುಹಿಸಿಕೊಟ್ಟೆವು.

ಮರುದಿನ ನಮಗೆಲ್ಲಾ ಆಶ್ಚರ್ಯ ಕಾದಿತ್ತು.

ಹಿಂದಿನ ದಿನದ ಚರ್ಚೆಗಳೆಲ್ಲವನ್ನೂ ಸಗಣಿಯಿಂದ ಸಾರಿಸಿ, ನಂತರ ಕಸಪೊರಕೆಯಿಂದ ಗುಡಿಸಿ ಹೊರಗೆಸೆಯುವಂತೆ ಬಾಲ್ಡಿ ಮಂಜ ನಾವೆಲ್ಲರೂ ಕಳುವಾಯಿತೆಂದುಕೊಂಡ ಬೈಕಿನಲ್ಲಿ ಬಂದಿದ್ದ. ನಿನ್ನೆಯಲ್ಲಾ ಅಷ್ಟೊಂದು ಗೊಂದಲ ಆತಂಕ ಸೃಷ್ಟಿಸಿದ್ದ ಹುಡುಗ ಗೋಪಿಯು ಅಲ್ಲೇ ಅವನ ಪಕ್ಕದಲ್ಲಿ ಕುಳಿತು ಸಪ್ಲಿಮೆಂಟರಿ ಹಾಕುತ್ತಿದ್ದಾನೆ!!

ಕೊನೆಗೆ ನಿಜವಾಗಿ ನಡೆದದ್ದು ಏನೆಂದರೇ, ಬೆಳಿಗೆ ೬ ಗಂಟೆಗೆ ಗೋಪಿ ಅವನ್ ಓನರ್ ಬಾಲ್ಡಿಮಂಜ ಹೇಳಿದಂತೆ ಕುಮಾರಪಾರ್ಕಿನಲ್ಲಿರುವ ಆಪಾರ್ಟುಮೆಂಟಿಗೆ ಒಂದು ಪೇಪರ್ ಹಾಕಲು ಹೋಗಿದ್ದಾನೆ. ಆಪಾರ್ಟುಮೆಂಟಿನಲ್ಲಿ ಲಿಫ್ಟ್ ಒಳಗೆ ಹೋಗಿ ಐದನೇ ಮಹಡಿಯ ಬಟನ್ ಒತ್ತಿದ್ದಾನೆ. ಮೇಲೆ ಹೋಗುತ್ತಿದ್ದ ಲಿಫ್ಟ್ ತಕ್ಷಣ ಕರೆಂಟು ಹೋದ ಪರಿಣಾಮ ೩ ಮತ್ತು ೪ ನೇ ಮಹಡಿಯ ಮದ್ಯೆ ನಿಂತುಬಿಡಬೇಕೆ!. ಮತ್ತೊಂದು ವಿಷಯವೆನೆಂದರೆ ಸರ್ವ ಸಾಮಾನ್ಯವಾಗಿ ಆಪಾರ್ಟುಮೆಂಟುಗಳಲ್ಲಿ ಲಿಫ್ಟು ವ್ಯವಸ್ಥೆಗೆ ಜನರೇಟರ್ ಇಟ್ಟಿರುತ್ತಾರೆ. ಇಲ್ಲಿ ಗೋಪಿಯ ದುರಾದೃಷ್ಟಕ್ಕೇ ಅದು ಹೊಸ ಆಪಾರ್ಟುಮೆಂಟು ಆಗಿದ್ದರಿಂದ ಇನ್ನೂ ಜನರೇಟರ್ ವ್ಯವಸ್ಥೆ ಮಾಡಿರಲಿಲ್ಲವಂತೆ. ಆ ತಕ್ಷಣ ಗಲಿಬಿಲಿಗೊಂಡ ಗೋಪಿ ಏನು ಮಾಡೋದು ತಿಳಿಯದೆ ಹೋದನಂತೆ. ಮೊಬೈಲಿಂದ ಫೋನ್ ಮಾಡೋಣವೆಂದರೇ ಅವನ ಲಡಕಾಶಿ ಫೋನ್ ಹಿಂದಿನ ದಿನ ಬ್ಯಾಟರಿ ಚಾರ್ಜ್ ಮಾಡಿಲ್ಲದ ಕಾರಣ ಡೆಡ್ ಆಗಿಬಿಟ್ಟಿದೆ!. ಎಲ್ಲಾ ವಿಷಯದಲ್ಲೂ ಅತಿ ಬುದ್ಧಿವಂತಿಕೆ ತೋರಿಸುತ್ತಿದ್ದ ಗೋಪಿಗೆ ಆ ಕ್ಷಣದಲ್ಲಿ ಏನು ತಿಳಿಯದೆ ಕೊನೆಗೆ ಜೋರಾಗಿ ಕಿರುಚಿದ್ದಾನೆ. ಮೊದಲೇ ಹೊಸ ಆಪಾರ್ಟುಮೆಂಟು ಅಲ್ಲೊಂದು ಇಲ್ಲೊಂದು ಪ್ಲಾಟುಗಳಿಗೆ ಮಾತ್ರ ಜನ ವಸತಿಗೆ ಬಂದಿದ್ದಾರೆ. ಜೊತೆಗೆ ಪ್ಲಾಟುಗಳಲ್ಲಿ ಎದುರುಮನೆಯವರಿಗೋ ಅಥವಾ ಪಕ್ಕದ ಮನೆಯವರಿಗೋ ಏನಾದರೂ ತೊಂದರೆಯಾದರೂ ಗಮನಿಸುವುದಿಲ್ಲ. ಪಕ್ಕದಲ್ಲಿ ಭೂಕಂಪವಾದರೆ ಅಥವ ಎದುರುಮನೆಯಲ್ಲಿ ಯಾರಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅದು ಇವರಿಗೆ ತಿಳಿಯುವುದು ಮರುದಿನ ಪೇಪರ್ ನ್ಯೂಸಿನಲ್ಲೋ ಅಥವಾ ಸಂಜೆ ಟಿ.ವಿ. ನ್ಯೂಸ್ ನಲ್ಲಿ ನೋಡಿದಾಗ ಮಾತ್ರ. ಅಂತದ್ದರಲ್ಲಿ ಇವನು ಕೂಗಿದರೆ, ಕಿರುಚಿದರೆ ಬಂದು ನೋಡುತ್ತಾರೆಯೇ? ಕೊನೆಗೆ ಗೋಪಿಗೆ ಇನ್ನು ಕರೆಂಟು ಬರುವವರೆಗೂ ನಾನಿಲ್ಲಿ ಬಂಧಿಯಾಗಿರುವುದು ಖಚಿತವೆನಿಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ವಿದ್ಯುತ್ ಕೇಳಬೇಕೆ! ಲೋಡ್ ಸೆಡ್ಡಿಂಗ್ ಅನ್ನೋ ಹೆಸರಿನಲ್ಲಿ ಯಾವಾಗ ಬೇಕೋ ಆವಾಗ ವಿದ್ಯುತ್ ತೆಗೆದುಹಾಕುತ್ತಾರೆ.

ಅವತ್ತು ೨ ಗಂಟೆಗಿಂತ ಹೆಚ್ಚಾಗಿ ಕರೆಂಟು ಇರಲಿಲ್ಲವಾದ್ದರಿಂದ ಗೋಪಿಗೆ ಜೈಲಿನಲ್ಲಿದ್ದೇನೆ ಎನ್ನುವ ಭ್ರಮೆಗೆ ಒಳಗಾಗಿ ಮಂಕಾಗಿ ಹೆದರೆಕೆಗೆ ಅಲ್ಲೇ ನಿದ್ದೆ ಮಾಡಿದ್ದಾನೆ. ಎಚ್ಚರವಾದಾಗ ಕರೆಂಟು ಬಂದು ಲಿಫ್ಟ್ ಕೆಳಹೋಗುವುದು ಅರಿವಾಗಿದೆ. ಕೊನೆಗೆ ಅವನು ಲಿಫ್ಟಿನಲ್ಲಿ ೨ ಗಂಟೆ ಬಂದಿಯಾಗಿದ್ದು ಪ್ಲಾಟಿನವರಿಗೆಲ್ಲಾ ಗೊತ್ತಾಗಿ ಆಶ್ಚರ್ಯವಾಯಿತಂತೆ!

ಈ ಮಧ್ಯೆ ಹುಡುಗ ಗೋಪಿ ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡನಲ್ಲ ಅದೇ ಸಮಯಕ್ಕೆ ಆ ಪ್ಲಾಟಿನ ವಾಚ್ ಮೆನ್ ಗೋಪಿ ತಂದಿದ್ದ ಟೂ ವೀಲರನ್ನು ಅದೇ ಫ್ಲಾಟಿನವರ ಕಾರಿಗೆ ದಾರಿ ಮಾಡಿ ಕೊಡಲು ತೆಗೆದು ಪಕ್ಕಕ್ಕೆ ಕಾಣದ ಜಾಗಕ್ಕೆ ನಿಲ್ಲಿಸಿದ್ದಾನೆ ಬೇರೆ ಹುಡುಗರು ಇಲ್ಲಿ ಬಂದು ನೋಡಿದಾಗ ಬೈಕ್ ಕಾಣಸಿದದಿರುವುದು ನೋಡಿ ಗೋಪಿ ಇಲ್ಲಿಲ್ಲವೆಂದುಕೊಂಡು ಹೋಗಿದ್ದಾರೆ.

ಅಲ್ಲಿಂದ ಹೊರಬಂದರೂ ಅವನಿಗೆ ಆ ಭ್ರಮೆಯಿಂದ ಹೊರಬರಲಿಕ್ಕೆ ಸುಮಾರು ಹೊತ್ತೇ ಆಗಿದೆ. ನಂತರ ಪಬ್ಲಿಕ್ ಕಾಯಿನ್ ಬೂತಿನಿಂದ ತನ್ನ ಬಾಲ್ಡಿ ಮಂಜನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಬೈಕನ್ನು ತನ್ನ ಓನರಿಗೆ ತಲುಪಿಸಿ ಮೇಲೆ ಅವನಿಗೆ ಯಾವುದೋ ಹುಲಿ ಗುಹೆಯಿಂದ ಹೊರಬಂದಂತೆ ಅನ್ನಿಸಿತಂತೆ.

ಇದು ಯಾವುದು ತಿಳಿಯದೆ ಹಿಂದಿನ ದಿನ ನಾನು ಸೇರಿದಂತೆ ರಂಗ, ಅವನ ಹುಡುಗರು ಸೇರಿದಂತೆ ಎಲ್ಲರೂ ಗೋಪಿಯ ಹಿಂದಿನ ತರಲೆ ಆಟ, ಬೇಜವಾಬ್ದಾರಿ ಗುಣ, ಸ್ವಲ್ಪ ಹುಡುಗು ಬುದ್ದಿಯ ಸ್ವಭಾವಕ್ಕೆ ತಾಳೆ ಹಾಕಿ, ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಆ ಸಮಯದಲ್ಲಿ ಪ್ರತಿಯೊಬ್ಬರೂ ಆಡಿದ ಮಾತುಗಳ ಪ್ರಭಾವಕ್ಕೆ ಸಿಲುಕಿ, ಒಂದು ರೀತಿಯ ಸಮೂಹ ಸನ್ನಿಗೆ ಒಳಗಾಗಿ ಗೋಪಿಯ ವಿರುದ್ಧದ ಭ್ರಮೆಗೊಳಗಾಗಿದ್ದು ನಿಜ.
ಶಿವು.ಕೆ.