Friday, September 26, 2008

ರಬ್ಬರ್ ಬ್ಯಾಂಡ್ ಮತ್ತು ದಾರ

ಎಂದಿನಂತೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮುಖ ತೊಳೆಯುತ್ತಿದ್ದೆ. ಆದೇ ಸಮಯಕ್ಕೆ ನನ್ನ ಮೊಬೈಲ್ ರಿಂಗ್ ಆಯಿತು. ಮೊದಲೇ ನಿದ್ದೆಗಣ್ಣಿನಲ್ಲಿದ್ದ ನನಗೆ ಆ ಸಮಯದಲ್ಲಿ ಮೊಬೈಲ್ ರಿಂಗ್ ಆದರೆ ಸಂಪೂರ್ಣ ಅಲರ್ಟ್ ಆಗಿಬಿಡುತ್ತೇನೆ. ನನ್ನ ನಿದ್ದೆಯೆಲ್ಲಾ ಮಾಯವಾಗಿಬಿಡುತ್ತದೆ.

ಏಕೆಂದರೆ ಅ ಸಮಯದಲ್ಲಿ ಫೋನ್ ಬಂದರೆ ಒಂದೋ ಹುಡುಗರು "ನಾನು ಇವತ್ತು ಬರುವುದಿಲ್ಲ" ಎಂದು ಹೇಳಲಿಕ್ಕೆ ಫೋನ್ ಮಾಡುತ್ತಾರೆ. ಅಥವ ನನ್ನ ಬಳಿ ಸೈಕಲಿಲ್ಲ ನೀವು ಬರುವ ದಾರಿಯಲ್ಲಿ ಕಾಯುತ್ತಿದ್ದೇನೆ. ನನ್ನ ಪಿಕಪ್ ಮಾಡಿ ಎಂದು ಹೇಳಲು ಫೋನ್ ಮಾಡುತ್ತಾರೆ. ಈ ರೀತಿ ಹೇಳುವವರೆಲ್ಲಾ ನನ್ನ ಪ್ರಕಾರ ಒಳ್ಳೆಯ ಹುಡುಗರು[ನನ್ನ ಕೆಲಸದ ದೃಷ್ಟಿಯಿಂದ]. ನಾವೇ ಫೋನ್ ಮಾಡಿ ಕೇಳಿದಾಗ ನಾನು ಬರುವುದಿಲ್ಲ ರಜಾ ಬೇಕು ಅಂತಲೋ ಅಥವಾ ಸ್ವಿಚ್-ಆಫ್ ಮಾಡಿ ನಾನು ಇವತ್ತು ನಿಮ್ಮ ಕೆಲಸಕ್ಕೆ ಬರುವುದಿಲ್ಲ ಎಂದು ನಾವೇ ಅರ್ಥಮಾಡಿಕೊಳ್ಳುವಂತೆ ಮಾಡುವ ಹುಡುಗರು ಬೇಜವ್ಬಾರಿ ಬಾಯ್ಸ್.

ಈ ಹುಡುಗ ರಮೇಶ ಹಾಗೆ ಫೋನ್ ಮಾಡಿದಾಗ ನನಗೆ ಪೂರ್ತಿ ನಿದ್ರೆಯಿಂದ ಎಚ್ಚೆತ್ತ ಹಾಗಾಯಿತು. " ಸಾರ್ ನನ್ನ ಸೈಕಲ್ ಪಂಚರ್ ಆಗಿದೆ, ಇಲ್ಲಿ ಕಾಯುತ್ತಿದ್ದೇನೆ ಎಂದ. ಸರಿ ನಾನು ಬರುತ್ತೇನೆ ಇರು, ನಿನ್ನ ಪಿಕಪ್ ಮಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದೆ. ನಾನು ಪೇಪರ್ ಏಜೆನ್ಸಿ ಸೆಂಟರಿಗೆ ಹೋಗುವ ದಾರಿಯಲ್ಲಿಯೇ ಆ ಹುಡುಗನ ಮನೆ ಇತ್ತು.

ಅವನು ಕಾಯುತ್ತಿದ್ದ. ನನ್ನ ಸ್ಕೂಟಿಯಲ್ಲಿ ಅವನನ್ನು ಹಿಂದೆ ಕೂರಿಸಿಕೊಂಡು ಹೊರಟೆ. ಹಾಗೆ ನೋಡಿದರೆ ಈ ಹುಡುಗ ಪ್ರಾಮಾಣಿಕ ಹಾಗೂ ಬುದ್ಧವಂತ, ಅದೆಲ್ಲಕ್ಕಿಂತ ಇತರರಿಗಿಂತ ಒಳ್ಳೆಯವನು. ಅವತ್ತು ನಾನು ಮತ್ತು ಆ ಹುಡುಗ ಇಬ್ಬರೇ ಇದ್ದೆವು. ನನ್ನ ಇತರೆ ಹುಡುಗರು ಇನ್ನೂ ಬಂದಿರಲಿಲ್ಲ. ಸರಿ ಅವರಿಗೆ ಕಾಯುವುದಕ್ಕಿಂತ ನಾವಿಬ್ಬರೇ ಎಲ್ಲಾ ಪತ್ರಿಕೆಗಳನ್ನು ತಗೊಂಡು ಸಪ್ಲಿಮೆಂಟರಿಗಳನ್ನು ಹಾಕಿ ರೆಡಿ ಮಾಡೋಣ ಎಂದುಕೊಂಡು ಕೆಲಸ ಶುರುಮಾಡಿದೆವು.

ಇದ್ದಕ್ಕಿದ್ದಂತೆ ಆ ಹುಡುಗ "ಸಾರ್ ನಾನೊಂದು ಐಡಿಯಾ ಕೊಡಲಾ" ಎಂದ. ನಾನು ತಕ್ಷಣ "ಬೇಡಪ್ಪ ನಿನ್ನ ಐಡಿಯ ನನಗೆ ಗೊತ್ತು ಚಳಿಯಾಗ್ತಿದೆ, ಕಾಫಿ ತರಿಸಿ ಅಂತೀಯ ಅಲ್ಲವೆ" ಅವನ ಮಾತಿಗೆ ಉತ್ತರಿಸಿದೆ. ನನ್ನ ಉಳಿದ ತರಲೇ ಬೀಟ್ ಬಾಯ್ಸ್ ಕಾಫಿ ತರಿಸಲು ಇದೇ ರೀತಿ ಪೀಠಿಕೆ ಹಾಕುತ್ತಿದ್ದುದ್ದು ಸಹಜವಾಗಿದ್ದುದರಿಂದ, ಇವನು ಹಾಗೆ ಪೀಠಿಕೆ ಹಾಕುತ್ತಿರಬಹುದೆಂದು ನಾನು ಊಹಿಸಿದ್ದೆ.

"ಅಲ್ಲ ಸಾರ್ ನನ್ನ ಮಾತು ಒಂದು ನಿಮಿಷ ಕೇಳಿ, ಈಗ ನೀವು ನಮಗೆಲ್ಲಾ ಪೇಪರ್ ಹಾಕಲು ರಬ್ಬರ್ ಬ್ಯಾಂಡ್ ಯಾಕೆ ತಂದುಕೊಡಬಾರದು? ಕೇಳಿದ.

ನನಗೆ ಅವನು ಏನು ಹೇಳುತ್ತಿದ್ದಾನೆಂದು ತಿಳಿಯದೆ ಕೋಪದಿಂದ "ಬೇರೇನು ಕೆಲಸವಿಲ್ವ ನಿನಗೆ, ರಬ್ಬರ್ ಬ್ಯಾಂಡ್ ಯಾಕೊ ಬೇಕು ನಿನಗೆ ಅದು ಹುಡುಗಿಯರಿಗೆ ತಲೆಗೂದಲಿಗೆ ಹಾಕ್ಕೊಳಕ್ಕೆ ಇರೋದು ಅದರಿಂದ ನಿನಗೇನು ಉಪಯೋಗ?' ರೇಗಿದೆ.

"ಸಾರ್ ನನ್ನ ಮಾತು ಕೇಳಿ ಸ್ವಲ್ಪ ತಾಳ್ಮೆಯಿಂದ ಕೇಳಿ, ಈಗ ನೀವು ನನಗೆ ನಾಳೆ ಒಂದತ್ತು ರಬ್ಬರ್ ಬ್ಯಾಂಡ್ ತಂದುಕೊಡಿ, ಆಮೇಲೆ ನೋಡಿ ನಾನು ಏನು ಮಾಡ್ತೀನಂತ, ಹಾಗೆ ಅದರಿಂದ ನಿಮಗೂ ತುಂಬಾ ಉಪಯೋಗ ಆಗುತ್ತೆ. ಬೇಕಾದರೆ ನೀವೇ ಪರೀಕ್ಷೆ ಮಾಡಬಹುದು" ಎಂದ.

ಅವನ ಮಾತಿನಲ್ಲಿ ನನಗೆ ಆತ್ಮವಿಶ್ವಾಸ ಕಾಣಿಸಿತು. ಹಾಗೂ ನನಗೂ ಕುತೂಹಲ ಉಂಟಾಯಿತು. ನೋಡೋಣ ಇವನೇನು ಮಾಡುತ್ತಾನೆ ಎಂದುಕೊಂಡು ಮರುದಿನವೇ ನನ್ನ ಶ್ರೇಮತಿಯ ಬಳಿ ಕೇಳಿ ಪಡೆದುಕೊಂಡಿದ್ದ ರಬ್ಬರ್ ಬ್ಯಾಂಡುಗಳನ್ನು ಅವನ್ ಕೈಗೆ ಕೊಟ್ಟೆ. ಅದನ್ನು ಪಡೆದುಕೊಂಡ ಆ ಹುಡುಗ "ನಿಮ್ಮ ಕೈಗಡಿಯಾರದಲ್ಲಿ ಟೈಮೆಷ್ಟು" ಎಂದ.

ನಾನು ಕೈ ಗಡಿಯಾರ ನೋಡಿ ೬-೦೫ ಎಂದೆ. "ಸರಿ ಸಾರ್ ಎಂದವನೇ ತನ್ನ ಬೀಟ್ ಪೇಪರಗಳನ್ನು ತನ್ನ ಸೈಕಲ್ಲಿನ ಕ್ಯಾರಿಯರ್ರಿಗೆ ಜೋಡಿಸಿಕೊಂಡು ಹೊರಟೇ ಬಿಟ್ಟ.

ನಾನು ಉಳಿದ ಹುಡುಗರ ಬೀಟ್[ಒಬ್ಬ ಹುಡುಗ ಒಂದು ಬಡಾವಣೆಯ ಅನೇಕ ರಸ್ತೆಗಳಲ್ಲಿರುವ ೫೦-೬೦ ಮನೆಗಳಿಗೆ ದಿನಪತ್ರಿಕೆ ಹಾಕುವುದಕ್ಕೆ ಒಂದು ಬೀಟ್ ಎನ್ನುತ್ತೇವೆ]ಪೇಪರ್ ಜೋಡಿಸಿ ಕಳುಹಿಸುವ ಹೊತ್ತಿಗೆ ೬ -೧೫ ದಾಟಿತ್ತು. ಕೊನೆಗೂ ಎಲ್ಲಾ ಹುಡುಗರು ಹೋದರಲ್ಲ ಎಂದುಕೊಂಡು ಉಳಿದ ಪತ್ರಿಕೆಗಳಲ್ಲೊಂದನ್ನು ತೆಗೆದುಕೊಂಡು ಆರಾಮವಾಗಿ ಓದತೊಡಗಿದೆ. ಒಂದಿಪ್ಪತ್ತು ನಿಮಿಷ ಕಳೆದಿರಬಹುದು., "ಸಾರ್ ನನ್ನ ಕೆಲಸ ಮುಗೀತು, ಈಗ ಟೈಮೆಷ್ಟು?"

ಎಂದು ೬-೦೫ ಕ್ಕೆ ಟೈಮ್ ಕೇಳಿ ಹೋದ ಹುಡುಗ ವಾಪಸ್ಸು ಬಂದು ಕೇಳಿದಾಗಲೇ ನನ್ನ ಪೇಪರ್ ಓದುವ ಗಮನದಿಂದ ಅವನ್ ಕಡೆಗೆ ಹರಿದಿದ್ದು. ನಾನು ನನ್ನ ಕೈಗಡಿಯಾರ ನೋಡಿ "೬-೪೦" ಎಂದೆ. ಆ ಹುಡುಗ ಖುಷಿಯಿಂದ " ನೋಡಿದ್ರಾ ನಾನು ಇವತ್ತು ೧೦ ನಿಮಿಷ ಉಳಿಸಿದೆ. ಪ್ರತಿದಿನ ನಾನು ನನ್ನ ಬೀಟನ್ನು ಮುಗಿಸಲು ೫೦-೫೫ ನಿಮಿಷ ತೊಗೊತಿದ್ದೆ. ಇವತ್ತು ನೀವು ರಬ್ಬರ್ ಬ್ಯಾಂಡ್ ಕೊಟ್ಟಿದ್ದರಿಂದ ೧೦ ನಿಮಿಷ ಬೇಗನೇ ಮುಗಿಸಿ ಬಂದೆ". ಎಂದ.

ಅವನ ಮುಖದಲ್ಲಿ ಏನೋ ಹೊಸ ಸಾಧನೆ ಮಾಡಿದ ಖುಷಿ ಕಾಣಿಸುತ್ತಿತ್ತು. ನನಗೂ ಅವನ್ ಮಾತು ಕೇಳಿ " ಹೌದಲ್ಲವಾ!" ಎನಿಸಿತು. ಹಾಗೂ ಕುತೂಹಲ ಸಹಜವಾಗಿಯೇ ಹೆಚ್ಚಾಯಿತು.

"ಲೋ ಇದು ಹೇಗೆ ಸಾಧ್ಯ" ಎಂದೆ ನಾನು ಆಶ್ಚರ್ಯದಿಂದ. ಅದಕ್ಕವನು,

"ನೋಡಿ ಸಾರ್ ನಾನು ನನ್ನ ರೂಟಿನ ಬೀಟ್ ಮುಗಿಸಲು ೫೦ ನಿಮಿಷ ಆಗುತ್ತಿತ್ತು. ನೀವು ಒಂದತ್ತು ರಬ್ಬರ್ ಬ್ಯಾಂಡ್ ಕೊಟ್ಟಿದ್ದರಿಂದ ನಾನು ಒಂದನೇ -ಎರಡನೇ ಮಹಡಿ ಮನೆಗಳಿಗೆಲ್ಲಾ ಮೆಟ್ಟಿಲೇರಿ ಹೋಗದೇ, ನೀವು ಕೊಟ್ಟ ರಬ್ಬರ್ ಬ್ಯಾಂಡಿನಿಂದ ನ್ಯೂಸ್ ಪೇಪರನ್ನು ಮಸಾಲೆದೋಸೆಯಂತೆ ಸುರುಳಿ ಸುತ್ತಿ ಆದಕ್ಕೆ ರಬ್ಬರ್ ಬ್ಯಾಂಡ್ ಹಾಕಿ ಸರಿಯಾಗಿ ಎಸ್ತ್ದೆ. ಇದರಿಂದ ನಾನು ಮೆಟ್ಟಿಲು ಹತ್ತುವ-ಇಳಿಯುವ ಪ್ರಮೇಯವೇ ಬರಲಿಲ್ಲ. ಅದರಿಂದ ಒಂದತ್ತು ನಿಮಿಷ ಉಳಿಯಿತು" ಎಂದ. ನನಗೆ ಅವನ್ ಮಾತು ಕೇಳಿ ಖುಷಿಯಾಯಿತು.

ಅವನು ಹೇಳುತ್ತಿರುವುದು ನಿಜ ಎನಿಸಿತು. ಈ ರೀರಿ ಸಮಯ ಉಳಿಯುವುದರಿಂದ ನನ್ನ ಗ್ರಾಹಕರು ನನ್ನ ಪತ್ರಿಕೆ ವಿತರಣೆ ಲೇಟು ಎಂದು ಹೇಳುವುದು ತಪ್ಪುತ್ತಲ್ಲ ಎನಿಸಿತು.

ಇದೇ ರೀತಿ ನನ್ನ ಉಳಿದೆಲ್ಲಾ ಹುಡುಗರಿಗೂ ಸ್ವಲ್ಪ ರಬ್ಬರ್ ಬ್ಯಾಂಡ್ ತಂದು ಕೊಟ್ಟರೆ ಅವರು ಕೂಡ ದಿನಪತ್ರಿಕೆ ಹಂಚುವ ಕೆಲಸವನ್ನು ಸರಾಗವಾಗಿ ಬೇಗನೇ ಮುಗಿಸಲು ಸಾಧ್ಯವಾಗುತ್ತದಲ್ಲ ಎನಿಸಿತ್ತು.

"ಸಾರ್ ಏನು ಯೋಚ್ನೇ ಮಾಡ್ತಿದ್ದೀರಿ ದಿನಾ ರಬ್ಬ ಬ್ಯಾಂಡ್ ತಂದು ಕೊಟ್ಟರೆ ಖರ್ಚು ತುಂಬಾ ಆಗಬಹುದು ಅಂತ ಚಿಂತೆ ಮಾಡಬೇಡಿ, ನನಗೆ ದಿನ್ ಹತ್ತು ರಬ್ಬರ್ ಬ್ಯಾಂಡ್ ಬೇಕು. ಹಾಗೆ ಉಳಿದ ನಮ್ಮ ೮ ಜನ್ ಬೀಟ್ ಹುಡುಗರಿಗೆ ತಲಾ ೧೦-೧೨ ರಬ್ಬರ್ ಬ್ಯಾಂಡ್ ಕೊಟ್ಟರೇ ಅವರು ಇದೇ ರೀತಿ ನನ್ನ ಹಾಗೆ ಬೀಟ್ ಬೇಗ ಮುಗಿಸುತ್ತಾರೆ, ಸಮಯ ಉಳಿಯುತ್ತೇ ಸಾರ್" ಎಂದ.

"ಅದು ಸರಿಯಪ್ಪ ನಾನೇನೋ ನೀನು ರಬ್ಬರ್ ಬ್ಯಾಂಡ್ ಏತಕ್ಕೋ ತಮಾಷೆಗೆ ಕೇಳ್ತೀದ್ದೀಯ, ನೋಡೋಣ ಏನು ಮಾಡ್ತೀಯ ಎನ್ನುವ ಕುತೂಹಲಕ್ಕೆ ನನ್ನ ಶ್ರೀಮತಿ ಕಡೆಯಿಂದ ಕೇಳಿ ತಗೊಂಡು ಬಂದೆ. ಈಗ ನೋಡಿದ್ರೆ ನೀನು ನನ್ನ ಉಳಿದ ಬೀಟ್ ಹುಡುಗರಿಗೂ ತಂದುಕೊಡಿ, ಪ್ರತಿದಿನ ಸರಾಸರಿ ೮೦-೯೦ ರಬ್ಬರ್ ಬ್ಯಾಂಡ್ ಬೇಕು ಅಂತ ನೀನೆ ಲೆಕ್ಕಚಾರ ಮಾಡಿ ಹೇಳಿದ್ದೀಯ, ಖಂಡಿತವಾಗಿ ನನ್ನ ಎಲ್ಲಾ ಹುಡುಗರು ನೀನು ಹೇಳಿದಂತೆ ಮೊದಲಿಗಿಂತ ಸ್ವಲ್ಪ ಬೇಗ ಮನೆಗಳಿಗೆ ಪತ್ರಿಕೆ ಹಂಚುತ್ತಾರೆನ್ನುವುದು ಸತ್ಯ. ಆದರೆ ಈ ರಬ್ಬರ್ ಬ್ಯಾಂಡ್ ಸಿಗೋದ್ ಎಲ್ಲಿ? ಈಗ ನೀನು ಹೇಳೋ ಪ್ರಕಾರ ನನಗೆ ಈಗ ಕೇಜಿಗಟ್ಟಲೆ ರಬ್ಬರ್ ಬ್ಯಾಂಡ್ ಬೇಕಾಗಬಹುದು ಆಲ್ವೇನೋ" ಎಂದೆ.

ಇಲ್ಲ ಸಾರ್ ನೀವೇನ್ ಚಿಂತೆ ಮಾಡಬೇಡಿ ೨ ರೂಪಾಯಿ ಪ್ಯಾಕೆಟ್ಟಿನಲ್ಲಿ ನೂರು ರಬ್ಬರ್ ಬ್ಯಾಂಡ್ ಇರಬಹುದು. ಅದು ಒಂದು ದಿನಕ್ಕೆ ಸಾಕಾಗುತ್ತೆ. ಆದೇ ೧೦ ರೂಪಾಯಿನ ಪ್ಯಾಕೆಟ್ ತಗೊಂಡ್ರೆ ಅದನ್ನು ೧೦ ದಿನ ಉಪಯೋಗಿಸಬಹುದು. ಕಾರಣ ಸ್ವಲ್ಪ ಹೋಲ್ ಸೇಲ್ ಆಗಿ ಜಾಸ್ತಿ ಇರುತ್ತೆ. ಇನ್ನು ನೀವು ಬೇಕಾದರೆ ಚಿಕ್ಕಪೇಟೆಗೆ ಹೋಗಿ ಹೋಲ್ ಸೇಲಾಗಿ ಒಂದು ಕೆಜಿ ತಂದರೆ ಅದು ಕೊನೆಪಕ್ಷ ನಾಲ್ಕು ತಿಂಗಳು ಬರುತ್ತೆ ಸಾರ್!"

ನಾನು ಅವನು ಹೇಳುತ್ತಿರುವುದನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದೆ. ಒಬ್ಬ ಸಾಮಾನ್ಯ, ಕೆಲವು ಮನೆಗಳಿಗೆ ಪತ್ರಿಕೆ ಹಂಚುವ ಹುಡುಗನಿಗೆ ಇಷ್ಟೊಂದು ಲೆಕ್ಕಚಾರ ಗೊತ್ತಿದೆಯಾ? ಕುತೂಹಲ ತಡೆಯಲಾಗದೆ ಕೇಳಿಯೇಬಿಟ್ಟೆ. ಇದೆಲ್ಲಾ ನಿನಗೆ ಹೇಗೆ ಗೊತ್ತು? ೨ ರೂಪಾಯಿ ಪ್ಯಾಕೆಟ್ಟಿನಲ್ಲಿ ಸರಾಸರಿ ನೂರು ಇರುತ್ತೆ ಎಂದು ನಿನಗೆ ಹೇಗೆ ಗೊತ್ತು? ಮತ್ತೆ ೧೦ ರೂಪಾಯಿ ಪ್ಯಾಕೆಟ್ಟಿನಲ್ಲಿ ನಿನ್ನ ಪ್ರಕಾರ ಒಂದು ಸಾವಿರ್ ರಬ್ಬರ್ ಬ್ಯಾಂಡ್ ಇರಬೇಕಲ್ವ? ಅದು ಹೇಗೆ ಗೊತ್ತು ನಿನಗೆ ಆಷ್ಟೇ ಇದೆ ಅಂತ?

ಅದಕ್ಕೆ ಅವನು ಕೊಟ್ಟ ಉತ್ತರ ಸ್ವಾರಸ್ಯವಾಗಿತ್ತು.

" ಒಂದು ದಿನ ನನ್ನ ಅಕ್ಕ ೨ ರೂಪಾಯಿ ಕೊಟ್ಟು ರಬ್ಬರ್ ಬ್ಯಾಂಡ್ ತರಲು ಹೇಳಿದಳು. ಅಂಗಡಿಯಿಂದ ಮನೆಗೆ ಬರುವ ದಾರಿಯಲ್ಲಿ ಪ್ಯಾಕೆಟ್ಟಿನಿಂದ ಅವನ್ನು ಕೈಗೆ ಸುರಿದುಕೊಂಡು ಒಂದೊಂದೇ ಎಣಿಸುತ್ತಿದ್ದೆ, ಆಗ ಅದರಲ್ಲಿ ೯೫ ಇತ್ತು. ಅದೇ ರೀತಿ ನನ್ನಕ್ಕ ಮತ್ತೊಂದು ದಿನ ೧೦ ರೂಪಯಿ ಕೊಟ್ಟು ಆಷ್ಟಕ್ಕೂ ರಬ್ಬರ್ ಬ್ಯಾಂಡ್ ತರಲು ಹೇಳಿದಳು. ನಾನು ಮತ್ತೆ ಆದೇ ಅಂಗಡಿಗೆ ಹೋದಾಗ ಅಲ್ಲಿ ೨ ರೂಪಾಯಿ, ೫ ರೂಪಾಯಿ, ೧೦ ರೂಪಾಯಿ ಹಾಗೂ ೬೦ ರುಪಾಯಿನ ೧ ಕೆಜಿ ಪ್ಯಾಕೆಟ್ಟುಗಳನ್ನು ನೇತುಹಾಕಿದ್ದರು. ಅವನ್ನೆಲ್ಲಾ ಕಣ್ಣಳತೆಯಲ್ಲೇ ಅಂದಾಜುಮಾಡಿದಾಗ, ೧೦ ರೂಪಾಯಿ ಪಾಕೆಟ್ ಒಂದನ್ನೇ ತಗೊಂಡ್ರೆ ಅದನ್ನು ೨ ರೂಪಾಯಿ ಪಾಕೆಟ್ಟಿನ ೧೦ ಪಾಕೆಟ್ ಮಾಡಬಹುದುದೆಂದುಕೊಂಡೆ. ಸರಿ ೧೦ ರೂಪಾಯಿಯ ಒಂದು ಪಾಕೆಟ್ ಕೊಂಡುಕೊಂಡೆ ೨ ರುಪಾಯಿಯ ಪಾಕೆಟ್ಟಿನ ಹತ್ತು ಕವರಿನೊಳಗೆ ತುಂಬಿ ನನ್ನ ಅಕ್ಕನಿಗೆ ೫ ಕವರ್ ಕೊಟ್ಟು ಉಳಿದ ೫ ಕವರುಗಳನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಮತ್ತೊಂದು ದಿನ ೧೦ ರೂಪಾಯಿ ಕೊಟ್ಟು ರಬ್ಬರ್ ಬ್ಯಾಂಡ್ ತರಲು ಹೇಳಿದಾಗ ನಾನು ಎತ್ತಿಟ್ಟಿದ್ದ ೫ ಕವರುಗಳನ್ನು ಅಕ್ಕನಿಗೆ ಕೊಟ್ಟು ೧೦ ರೂಪಾಯಿಗಳನ್ನು ಜೇಬಿಗಿಳಿಸಿದೆ. ಇದೇ ರೀತಿ ಒಂದು ಕೇಜಿ ತಂದ್ರೆ ಕೊನೆಪಕ್ಷ ಅದರಲ್ಲಿ ೯೦ ಸಾವಿರ ರಬ್ಬರ್ ಬ್ಯಾಂದುಗಳಿದ್ದರೆ ನಮಗೆ ಅದು ಮೂರು ತಿಂಗಳಿಗೆ ಬರುಬಹುದು ಅಲ್ವೇ ಸಾರ್"

ಅವನು ಹುರುಪಿನಿಂದ ಹೇಳುತ್ತಿದ್ದರೆ ನಾನು ಆ ಕ್ಷಣ ದಂಗಾಗಿದ್ದೆ. "ನಾನು ಮನೆಗೆ ಹೋಗ್ತೀನಿ " ಎಂದು ಹೇಳಿ ಅವನು ನನ್ನ ಪ್ರತಿಕ್ರಿಯೆಗೂ ಕಾಯದೇ ವೇಗವಾಗಿ ಹೊರಟೇ ಹೋದ.

ಆಷ್ಟೇ ವೇಗವಾಗಿ ನನ್ನ ತಲೆಯೊಳಗೊಂದು ಲೆಕ್ಕಚಾರದ ಹುಳುವೊಂದನ್ನು ಬಿಟ್ಟು ಹೋಗಿದ್ದ. " ಕೇವಲ ಒಬ್ಬ ಸಾಮಾನ್ಯ ಹುಡುಗ ಓಂದು ರಬ್ಬರ್ ಬ್ಯಾಂಡಿನ ಬಗ್ಗೇ ಇಷ್ಟೊಂದು ಚೆನ್ನಾಗಿ ಲೆಕ್ಕ ಮಾಡುವಾಗ ನಾನು ಅವನ್ ಏಜೆಂಟ್ ಆಗಿ ಅವನದೇ ಲೆಕ್ಕಾಚಾರವನ್ನು ಇನ್ನೂ ಚೆನ್ನಾಗಿ ಮಾಡಿ ನೋಡಬೇಕೆನಿಸಿತ್ತು.

ಮನೆಗೆ ಬಂದ ಮೇಲೆ ಒಂದು ಪೆನ್ನು ಪೇಪರ್ ಹಿಡಿದು ಕುಳಿತೆ. ೬೦ ರೂಪಾಯಿಯ ಒಂದು ಕೆಜಿ ರಬ್ಬರ್ ಬ್ಯಾಂಡಿನಿಂದ ೩ ತಿಂಗಳು ಹುಡುಗರಿಗೆ ಅವರ ಪತ್ರಿಕೆ ಹಂಚುವ ಸಮಯದಲ್ಲಿ ಕೊನೆಪಕ್ಷ ೧೦ ನಿಮಿಷ ಉಳಿಯುತ್ತದೆ. ಇದರಿಂದ ನನ್ನ ಗ್ರಾಹಕರಿಗೂ ದಿನಪತ್ರಿಕೆ ಬೇಗ ಬರುತ್ತದೆ ಎಂದು ಸಂತೋಷವಾಗುತ್ತದೆ. ಆ ಉಳಿಸಿದ ೧೦ ನಿಮಿಷಗಳಲ್ಲಿ ಮತ್ತೆ ೧೦-೧೫ ಮನೆಗಳಿಗೆ ಹೆಚ್ಚುವರಿಯಾಗಿ ಪತ್ರಿಕೆ ತಲುಪಿಸಬಹುದು. ಇದರಿಂದಾಗಿ ಅನ್ನ ಅದಾಯವು ಕೊನೆಪಕ್ಷ ೫ ರಿಂದ ೧೦ ಏರಿಕೆಯಾಗುತ್ತಲ್ವೇ" ಅನ್ನಿಸಿತು.

ಮರುದಿನವೇ ಚಿಕ್ಕಪೇಟೆಗೆ ಹೋಗಿ ಒಂದು ಕೆಜಿ ರಬ್ಬರ್ ಬ್ಯಾಂಡ್ ತಂದು ನನ್ನ ಬೀಟ್ ಹುಡುಗರಿಗೆ ಪ್ರತಿದಿನ ಕೊಡಲಾರಂಬಿಸಿದೆ. ನನ್ನ ಹುಡುಗ ಹೇಳಿದಂತೆ ಮೂರು ತಿಂಗಳವರೆಗೆ ಬಂತು. ಅದರಿಂದ ನನ್ನ ಆದಾಯವೂ ಹೆಚ್ಚಿತ್ತು.

ದುರಾದೃಷ್ಟವಶಾತ್, ಇದು ಹೆಚ್ಚು ದಿನಗಳವರೆಗೆ ಸಾಗಲಿಲ್ಲ. ನಾನು ಈ ರೀತಿ ರಬ್ಬರ್ ಬ್ಯಾಂಡ್ ತಂದಿರುವ ಸುದ್ದಿ ನನ್ನ ವೃತ್ತಿಭಾಂಧವರಿಗೂ ನಿದಾನವಾಗಿ ಗೊತ್ತಾಗತೊಡಗಿತು. ಪ್ರಾರಂಭದಲ್ಲಿ ಇದು ಅವರಿಗೆ ತಮಾಷೆ ಎನಿಸಿದರೂ, ನಂತರ ಅವರಿಗೂ ಇದೊಂದು ರೀತಿ ಚೆನ್ನಾಗಿದೆಯೆಲ್ಲಾ ಅನಿಸಿ, ನನ್ನ ಬಳಿ ಬಂದು ರಬ್ಬರ್ ಬ್ಯಾಂಡ್ ತೆಗೆದುಕೊಳ್ಳತೊಡಗಿದರು. ನನ್ನ ಹುಡುಗರ ದಿನಪತ್ರಿಕೆ ವಿತರಣೆಯ ಸಮಯ ಉಳಿಸಲು ತಂದ ಇವನ್ನು ನನ್ನ ವೃತ್ತಿಭಾಂದವರು ಅವರ ಬೀಟ್ ಬಾಯ್ಸ್ ಗಳು ತೆಗೆದುಕೊಂಡು ಹೋಗುವುದು ಜಾಸ್ತಿಯಾಯಿತು.

ನಾನು ತಂದ ಒಂದು ಕೆಜಿ ರಬ್ಬರ್ ಬ್ಯಾಂಡುಗಳು ಮೂರು ತಿಂಗಳು ಬರುವುದಿರಲಿ, ಒಂದು ತಿಂಗಳು ಬರದೇ ಹೋಯಿತು. ನಾನು ಕೊಡೊಲ್ಲವೆಂದಾಗ ನನ್ನ ಗೆಳೆಯರ ಹುಡುಗರು ನಾನಿಲ್ಲದಾಗ ನನ್ನ ದಿನಪತ್ರಿಕೆಯ ಬ್ಯಾಗಿನಿಂದ ರಬ್ಬರ್ ಬ್ಯಾಂಡ್ ತೆಗೆದುಕೊಳ್ಳತೊಡಗಿದರು. ನಾನು ಇದ್ದರೆ ಗೆಳೆಯರು ನನ್ನನ್ನು ಈ ವಿಚಾರದಲ್ಲಿ ಹೊಗಳಿ ಮರಹತ್ತಿಸುತ್ತಿದ್ದರು. ಕೊನೆಗೊಂದು ದಿನ್ ನನಗೂ ಈ ರಬ್ಬರ್ ಬ್ಯಾಂಡ್ ನಂಟು ಸಾಕೆನಿಸಿ ಅದನ್ನು ತರುವುದನ್ನು ನಿಲ್ಲಿಸಿದೆ.

ಶಿವು.ಕೆ

1 comment:

ಉಉನಾಶೆ said...

ಶಿವು:
ಯಂಡಮೂರಿ ಕಾದಂಬರಿ ಓದಿದ ಹಾಗಾಯ್ತು..
ನಿಮ್ಮ ಬರಹ್ದ ಶೈಲಿ ಚೆನ್ನಾಗಿದೆ.
ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಬರಹಗಾರರೋ, ಕತೆ/ಕಾದಂಬರಿಕಾರರೋ ಆಗಬಹುದು..
ಹಾಗೇ, ನಿಮ್ಮ ಆ ಹುಡುಗನಿಗೆ ಉಜ್ವಲ ಭವಿಷ್ಯವಿದೆ.
ಇನ್ನು ನಿಮ್ಮ ಐಡಿಯಾ ವಿಫಲವಾಯ್ತು ಅಂತ ಅಲ್ಲಿಗೆ, ಬಿಡದೆ ಅದನ್ನು ಉತ್ತಮ ಪಡಿಸಲು ಪ್ರಯತ್ನಿಸಿ.. (ಉದಾಹರಣೆಗೆ, ಎಲ್ಲರೂ ಸೇರಿ ದುಡ್ಡೂ ಹಾಕಿ ಇಂತಹ ವಸ್ತುಗಳನ್ನು ಖರೀದಿಸುವುದು)
ಹಾಗೆಯೆ, ಮಹಡಿ ಮನೆಯಲ್ಲಿ ಹೂಕುಂಡಗಳನ್ನು ಇಟ್ಟವರ ಬಗ್ಗೆ ಯೋಚಿಸಬೇಕು, ನೀವು.
ಮತ್ತೊಂದು ವಿಚಾರ: ಮಳೆಗಾಲ್ದಲ್ಲಿ ಪತ್ರಿಕೆ ಒದ್ದೆಯಾಗದ ಹಾಗೆ ಏನು ಮಾಡಬಹುದು ಅಂತ ಯೋಚಿಸೋದು..
ಒಂದು ಉತ್ತಮ "ಓದುವ ಅನುಭವ ಕೊಟ್ಟಿದ್ದಕ್ಕೆ, ಮತ್ತೊಮ್ಮೆ ನನ್ನಿ.