Wednesday, December 31, 2008

ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !

ಮಣಿ ಹೊಸದಾಗಿ ದಿನಪತ್ರಿಕೆ ವಿತರಣೆಯ ಏಜೆನ್ಸಿ ಕೊಂಡಿದ್ದನಾದ್ದರಿಂದ ಅವನಿಗೆ ಈ ಕೆಲಸ ಹೊಸತು. ಜೊತೆಗೆ ತುಂಬು ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನು ಇಬ್ಬರು ಹುಡುಗರನ್ನು ತನ್ನ ವಿತರಣೆಯ ಕೆಲಸಕ್ಕೆ ಇಟ್ಟುಕೊಂಡಿದ್ದ. ಪ್ರತಿದಿನ ಹುಡುಗರ ಜೊತೆಯೇ ಬರುತ್ತಿದ್ದನು.


ಮೊದಲು ಟೈಮ್ಸ್ ಪತ್ರಿಕೆಯ ನೂರರ ಬಂಡಲ್ಲುಗಳನ್ನು ಹಾಗೂ ಅದರ ಸಪ್ಲಿಮೆಂಟರಿಗಳನ್ನು ತಂದು ಫುಟ್ ಪಾತಿನ ಒಂದು ಮೂಲೆಯಲ್ಲಿ ಇಟ್ಟು ತನ್ನ ಹುಡುಗರಿಗೆ ಆ ಸಪ್ಲಿಮೆಂಟರಿಗಳನ್ನು ಮೈನ್ ಶೀಟಿಗೆ ಸೇರಿಸಲು ಹೇಳಿ ಸ್ವಲ್ಪದೂರದಲ್ಲಿ ಇದ್ದ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಗ್ರೂಪಿನ ಪತ್ರಿಕೆಗಳನ್ನು ತರಲು ಹೋಗಿದ್ದ.


ಸಪ್ಲಿಮೆಂಟರಿ ಹಾಕುತ್ತಿದ್ದ ಹುಡುಗರು ಪಾಂಪ್ಲೆಟ್ಸ್ ಬಂದಿದೆ ಎಂದು ಯಾರೋ ಕೂಗಿದ್ದರಿಂದ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಆ ಕಡೆ ಓಡಿದರು.[ನಮ್ಮ ಹುಡುಗರಿಗೆ ಸಪ್ಲಿಮೆಂಟರಿ ಹಾಕುವುದಕ್ಕಿಂತ ಈ ರೀತಿ ಪಾಂಪ್ಲೆಟ್ಸ್ ಹಾಕುವುದಕ್ಕೆ ಇಷ್ಟ. ಇವನ್ನು ನೂರು ಪತ್ರಿಕೆಗಳಿಗೆ ಸೇರಿಸಿದರೆ ೧೦-೧೫ ರೂಪಾಯಿ ಕೊಡುತ್ತಾರೆ. ಆ ಕಾರಣಕ್ಕಾಗೆ ನಮ್ಮ ಬೀಟ್ ಹುಡುಗರಿಗೆ ಈ ಪಾಂಪ್ಲೆಟ್ಟಿನ ಮೇಲೆ ವಿಶೇಷ ಒಲವು].


ಅದುವರೆಗೂ ಎಲ್ಲಿತ್ತೋ ಆ ನಾಯಿ, ಎಲ್ಲಿ ಕುಳಿತು ಕಾಯುತ್ತಿತ್ತೋ, ಮತ್ತೆ ಎಷ್ಟು ಹೊತ್ತಿನಿಂದ ತಡೆದುಕೊಂಡು ಕುಂತಿತ್ತೋ ಮಣಿ ತಂದಿರಿಸಿದ್ದ ಅನಾಥವಾಗಿ ಪುಟ್ ಪಾತ್ ಮೇಲೆ ಬಿದ್ದಿದ್ದ ಟೈಮ್ಸ್ ಪತ್ರಿಕೆಯ ಸಪ್ಲಿಮೆಂಟರಿಗಳ ಮೇಲೆ ತನ್ನ ಹಿಂದಿನ ಒಂದು ಕಾಲೆತ್ತಿ ಮೂತ್ರವನ್ನು ಸುರಿಸಿಯೇ ಬಿಟ್ಟಿತ್ತು. ಮರುಕ್ಷಣದಲ್ಲಿ ದೂರದಲ್ಲಿ ಹೋಗಿ ಮರೆಯಾಗಿ ಯಾರಿಗೂ ಕಾಣದ ಹಾಗೆ ಕುಳಿತುಕೊಂಡುಬಿಟ್ಟಿತು.

[ಶಿವು ರಚಿಸಿದ ಮೊದಲ ರೇಖಾ ಚಿತ್ರ]

ಬೇರೆ ದಿನಪತ್ರಿಕೆ ತರಲು ಹೋಗಿದ್ದ ಮಣಿ ತಂದಿದ್ದ ಪೇಪರುಗಳನ್ನು ಕೆಳಗಿಟ್ಟು ಕೂತ. ಆ ಕತ್ತಲಲ್ಲಿ ಮೂಗಿಗೆ ಕೆಟ್ಟ ಮೂತ್ರದ ವಾಸನೆ ಬಡಿಯಿತು. "ಯಾರೋ ಬೋಳಿಮಗ ನಾವು ಇಲ್ಲಿ ಕೂತುಕೊಳ್ಳೋ ಜಾಗದಲ್ಲೇ ಗಲೀಜು ಮಾಡಿದ್ದಾನೆ" ಅಂತ ಬೈಯ್ಯುತ್ತಾ ಪಕ್ಕದಲ್ಲಿ ಕುಳಿತುಕೊಂಡ.


ತಕ್ಷಣ ಅವನಿಗನ್ನಿಸಿದೇನೆಂದರೆ ಈಗ್ಗೆ ೧೦ ನಿಮಿಷದ ಹಿಂದೆ ಬಂದಾಗ ಇಲ್ಲಿ ಯಾವ ಕೆಟ್ಟವಾಸನೆಯೂ ಇರಲಿಲ್ಲ. ಆದರೆ ಈಗ ನೋಡಿದರೆ ಈ ದರಿದ್ರ ಮೂತ್ರದ ವಾಸನೆ ಬರುತ್ತಿದೆಯಲ್ಲ.! ಅನ್ನುತ್ತಾ ಆ ಕತ್ತಲೆಯಲ್ಲೇ ಟೈಮ್ಸ್ ಪತ್ರಿಕೆಗೆ ಸಪ್ಲಿಮೆಂಟರಿ ಹಾಕಲು ಕೈಯಿಟ್ಟ! ಕೈಗೆ ದ್ರವರೂಪದ ಸ್ವಲ್ಪ ಆಂಟಾದ ನೀರು ಕೈಗೆ ತಾಗಿ ಅಸಹ್ಯವೆನಿಸಿತ್ತು.

[ಪ್ರಮೋದ್ ರಚಿಸಿದ ರೇಖಾ ಚಿತ್ರ]

ಇದು ಯಾರ ಕೆಲಸವೆಂದು ಅವನಿಗೆ ಗೊತ್ತಾಯಿತು.[ನಾಯಿಗಳು ಹಾಗಾಗ ಎಲ್ಲಾ ದಿನಪತ್ರಿಕೆ ವಿತರಣೆಯ ಸ್ಥಳಗಳಲ್ಲೂ ಈ ರೀತಿ ತಮ್ಮ ಪ್ರಸಾದ ಹಾಕಿ ಹೋಗುತ್ತಿರುತ್ತವೆ.] ಸುತ್ತಲು ನೋಡಿದ ಯಾವ ನಾಯಿಯೂ ಕಾಣಲಿಲ್ಲ.

"ಥೂ ಸೂಳೆಮಗಂದು ನಾಯಿ, ನನ್ನ ಪೇಪರುಗಳೇ ಬೇಕಾಗಿತ್ತ ಇದಕ್ಕೆ, ಸಿಕ್ಕಲಿ ನನಮಗಂದು ಕೈ ಕಾಲು ಮುರಿದುಹಾಕ್ತೀನಿ ಎಂದು ಜೋರಾಗಿ ಬೈಯ್ಯುತ್ತಾ ಸುತ್ತಮುತ್ತ ನೋಡಿದ. ಇನ್ನು ಬೆಳಕಾಗಿಲ್ಲವಾದ್ದರಿಂದ ಅವನ ಕಣ್ಣಿಗೆ ಆ ನಾಯಿ ಕಾಣಿಸಲಿಲ್ಲ.


ಸುತ್ತಲು ನೋಡಿದ! ತನ್ನ ಇಬ್ಬರು ಬೀಟ್ ಹುಡುಗರು ಕಾಣಿಸಲಿಲ್ಲ. ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ ಎನ್ನುವ ಹಾಗೆ ಮೂತ್ರ ಮಾಡಿದ ನಾಯಿಯ ಮೇಲಿನ ಕೋಪ ತನ್ನ ಬೀಟ್ ಹುಡುಗರ ಕಡೆ ತಿರುಗಿತ್ತು. ಆ ರೀತಿ ಆಗಲು ಕಾರಣವೂ ಇದೆ. ಆ ಹುಡುಗರು ಇಲ್ಲಿಯೇ ಇದ್ದು ನೋಡಿಕೊಂಡಿದ್ದರೇ ಆ ನಾಯಿ ಈಗೆ ಪೇಪರ್ ಮೇಲೆ ಗಲೀಜು ಮಾಡಿ ಹೋಗಲು ಸಾಧ್ಯವಿರಲಿಲ್ಲ.


ಆಷ್ಟರಲ್ಲಿ ಕೈ ತುಂಬಾ ಪಾಂಪ್ಲೆಟ್ಸ್ ಹಿಡಿದುಕೊಂಡು ಖುಷಿಯಿಂದ ಬರುತ್ತಿದ್ದ ಹುಡುಗರು ಕಾಣಿಸಿದರು.


"ಲ್ರೋ ಹೋಗಿದ್ರಿ?"


"ಅಣ್ಣಾ ಅಲ್ಲಿ ಪಾಂಪ್ಲೇಟ್ಸ್ ಕೊಡ್ತಾ ಇದ್ರು, ನಾವು ತಗೊಂಡು ಬರೋಣ ಅಂತ ಹೋಗಿದ್ವಿ".


"ನಿಮ್ಮ ಮುಂಡಾ ಮೋಚ್ತು, ಆ ಪಾಂಪ್ಲೆಟ್ಸ್ ಮನೆ ಹಾಳಾಗ, ನೋಡ್ರೋ ಇಲ್ಲಿ ಏನಾಯ್ತು ಅಂತ, ಟೈಮ್ಸ್ ಸಪ್ಲಿಮೆಂಟರಿ ಮೇಲೆಲ್ಲಾ ಯಾವುದೋ ನಾಯಿ ಉಚ್ಚೇ ಉಯ್ದು ಹೋಗಿದೆಯಲ್ರೋ, ನೀವು ಇಲ್ಲಿದ್ದು ಈ ಸಪ್ಲಿಮೆಂಟರಿ ಹಾಕ್ಕೊಂಡು ಕೂತಿದ್ರೆ, ಆ ನಾಯಿ ಇಲ್ಲಿಗೆ ಬಂದು ಈ ರೀತಿ ಮಾಡ್ತಿತ್ತೇನ್ರೋ? ನೋಡ್ರೋ ಈಗ ಏನು ಮಾಡೋದು ಇದನ್ನ ಹೇಗೋ ಮನೆಗಳಿಗೆ ಕಳಿಸೋದು?"


ಮಣಿ ಕೋಪದಿಂದ ಒಂದೇ ಸಮನೆ ಬೈಯ್ಯುತ್ತಿದ್ದ.


ತಮ್ಮ ಓನರ್ ತಮ್ಮನ್ನು ಉದ್ದೇಶಿಸಿ ಬೈಯ್ಯುತ್ತಿರುವುದು ಗೊತ್ತಾದರೂ, ಅದಕ್ಕೆ ಕಾರಣ ತಿಳಿದು ಆ ಇಬ್ಬರು ಹುಡುಗರಿಗೂ ನಗು ಬಂತು. ಆದರೆ ನಗುವಂತಿಲ್ಲ. ಮೊದಲೇ ಚಿಕ್ಕ ಹುಡುಗರು ಇನ್ನೂ ವಯಸ್ಸು ಹದಿನೈದು ದಾಟಿರಲಿಲ್ಲ, ಹುಡುಗುಬುದ್ಧಿ. ಈ ರೀತಿ ನಾಯಿ ದಿನಪತ್ರಿಕೆ ಮೇಲೆ ಉಚ್ಚೆ ಉಯ್ದು ಹೋಗಿದೆ ಇನ್ನುವುದು ಒಂದು ತಮಾಷೆ! ಅಂತದ್ದರಲ್ಲಿ ಈ ಹುಡುಗರನ್ನು ಕೇಳಬೇಕೆ! ನಗು ಹೊಟ್ಟೆಯೊಳಗಿಂದ ಒತ್ತರಿಸಿಕೊಂಡಿ ನುಗ್ಗು ಬಂದಾಗಲೂ ತಡೆದುಕೊಳ್ಳಲಿಕ್ಕೆ ಸಾಧ್ಯವೇ?

ಮಣಿ ಬೈಯ್ಯುತ್ತಿದ್ದರೂ ಕೂಡ ಆ ಹುಡುಗರಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಜೋರಾಗಿ ನಗಲಾರಂಭಿಸಿದರು.

ನಾನು ಬೈಯ್ಯುತ್ತಿದ್ದರೂ ನನ್ನ ಮಾತಿಗೆ ಬೆಲೆ ಕೊಡದೆ ನಗುತ್ತಿದ್ದಾರಲ್ಲ, ಮಣಿಗೆ ಮತ್ತಷ್ಟು ಸಿಟ್ಟು ಬಂತು.


"ತೊಲಗ್ರೋ, ನನ್ನ ಕಣ್ಣ ಮುಂದೆ ನಿಲ್ಲಬೇಡಿ" ಎಂದ. ಅವನ ಕೋಪವಿನ್ನು ಕಡಿಮೆಯಾಗಿರಲಿಲ್ಲ.


ಮರುಕ್ಷಣವೇ ಆ ಇಬ್ಬರೂ ಹುಡುಗರು ಕಣ್ಣಂಚಿನಲ್ಲೆ ಮಾತಾಡಿಕೊಂಡರು. ಇನ್ನು ಇಲ್ಲೇ ಇದ್ದರೇ ನಮಗೆ ಮತ್ತಷ್ಟು ಮಂಗಳಾರತಿ ಗ್ಯಾರಂಟಿ ಎಂದುಕೊಂಡು ಅವನ ಕಣ್ಣಿಂದ ಕೂಡಲೇ ಮರೆಯಾದರು.

ಮಣಿಯ ಕೋಪ ನಿದಾನವಾಗಿ ಕಡಿಮೆಯಾಯಿತು. ನಿದಾನವಾಗಿ ನಡೆದ ಘಟನೆಯನ್ನೆಲ್ಲಾ ಮತ್ತೊಮ್ಮೆ ಮೆಲುಕುಹಾಕಿದ. ನಾನು ಹುಡುಗರಿಗೆ ಬೈಯ್ದಿದ್ದು ತಪ್ಪೆಂದು ಅವನಿಗೆ ಅನಿಸಿತ್ತು. ಈ ನಾಯಿ ಹೀಗೆ ಮಾಡುತ್ತದೆ ಅಂತ ಅವರಿಗೇನು ಗೊತ್ತು? ಗೊತ್ತಿದ್ದರೇ ಈ ರೀತಿ ಬಿಟ್ಟುಹೋಗುತ್ತಿರಲಿಲ್ಲವಲ್ಲ ಎಂದುಕೊಂಡ.

ಇದು ನನಗಾಗದೆ ಬೇರೆಯವರಿಗೆ ಆಗಿದ್ದರೆ ಅಂದುಕೊಂಡ. ಅವನ ಸಿಟ್ಟೆಲ್ಲಾ ಮಾಯವಾಗಿ ನಗುಬಂತು. ತನ್ನ ಹುಡುಗರು ನಗುತ್ತಿದ್ದುದ್ದು ನಿನಪಾಗಿ ಮತ್ತಷ್ಟು ನಗು ಬಂತು. ದೂರದಿಂದ ನಿಂತು ನೋಡುತ್ತಿದ್ದ ಹುಡುಗರು ಈಗ ತನ್ನ ಓನರ್ ಕೋಪ ಇಳಿದಿರಬಹುದೆಂದುಕೊಂಡು ನಿದಾನವಾಗಿ ಮಣಿ ಬಳಿ ಬಂದು ಸಪ್ಲಿಮೆಂಟರಿ ಹಾಗೂ ಪಾಂಪ್ಲೆಟ್ಸ್ ಹಾಕತೊಡಗಿದರು.


ಮಣಿಯ ಇಬ್ಬರು ಹುಡುಗರಲ್ಲಿ ಒಬ್ಬನ ಹೆಸರು ವೇಲು. ಮತ್ತೊಬ್ಬನ ಹೆಸರು ವೇಡಿ. ವೇಡಿಯಂತೂ ಮಹಾನ್ ತರಲೇ. ಒಳ್ಳೇ ಕೆಲಸಗಾರನಾದರೂ ಏನಾದರೂ ತರಲೇ ಮಾತಾಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಅದರಲ್ಲೂ ಇಂಥ ಘಟನೆಗಳು ಆದಾಗ ಬಿಡುತ್ತಾನೆಯೇ? !


ತನ್ನ ಓನರ್ ಮುಖ ನೋಡಿದ. ಮಣಿ ನಗುತ್ತಿರುವುದು ಕಾಣಿಸಿತ್ತು.

"ಅಣ್ಣಾ ನಾನೊಂದು ಮಾತು ಹೇಳಲಾ" ವೇಡಿ ಕೇಳಿದ.

"ಹೂ ಹೇಳು: ಮಣಿ ಅವನೆಡೆಗೆ ತಿರಸ್ಕಾರ ನೋಟದಿಂದ.

" ನೀನು ಮತ್ತೇ ಬಯ್ಯಲ್ಲಾ ಅಂತಂದ್ರೇ ಹೇಳ್ತೀನಿ"

ಮಣಿ ಮತ್ತೊಮ್ಮೆ ಅವನ ಮುಖವನ್ನು ನೋಡಿದ ಈ ಬಾರಿ ಬೈಯಬೇಕೆನಿಸಲಿಲ್ಲ.

"ಸರಿ ಬೈಯ್ಯಲ್ಲ ಹೇಳು"

ನಾವು ಸಂಬಳ ಕೇಳಿದಾಗಲೆಲ್ಲಾ ಸರಿಯಾಗಿ ಕಲೆಕ್ಷನ್ ಆಗಿಲ್ಲ, ಆ ಗಿರಾಕಿ ಕೊಟ್ಟಿಲ್ಲ, ಈ ಗಿರಾಕಿ ಕೊಟ್ಟಿಲ್ಲಾ ಅಂತಾ ಹೇಳ್ತಿರುತ್ತೀಯಲ್ಲವಾ?


" ಹೌದು. ಕೆಲವರಿರುತ್ತಾರೆ, ನಾವು ಇಷ್ಟು ಬೇಗ ಎದ್ದು ಹೀಗೆ ಕಷ್ಟಪಟ್ಟು ಚಳಿಯಲ್ಲಿ ಕೆಲಸಮಾದಿ ಬೆಳಿಗ್ಗೆ ೬ ಗಂಟೆಗೆ ೬-೩೦ರ ಒಳಗೆ ಅವರಿಗೆ ಪೇಪರ್ ಹಾಕಿಸಿದ್ರೂ, ಹಣ ವಸೂಲಿಗೆ ಹೋದ್ರೆ, " ಈಗ ಬಾ ಆಗ ಬಾ. ನಾಳೆ ಬಾ, ಸ್ನಾನ ಮಾಡ್ತೀದ್ದಾರೆ, ಪೂಜೆ ಆಗ್ತಿದೆ, ಟಾಯ್ಲೆಟ್ಟಿನಲ್ಲಿದ್ದಾರೆ ಅಂತ ಹತ್ತಾರು ಕಾರಣ ಹೇಳಿ ಕೇವಲ ನೂರಕ್ಕೂ ಕಡಿಮೆ ಹಣಕ್ಕೆ ಐದಾರು ಸಲ ಹೋಗಬೇಕು, ನಮ್ಮ ಬಗ್ಗೆ ಅವರು ಯೋಚನೆಯನ್ನೇ ಮಾಡೊಲ್ಲ, ಕೆಲವರು ತುಂಬಾ ಬೇಜಾರು ಮಾಡಿಬಿಡುತ್ತಾರೆ.

"ಅಣ್ಣಾ ಆಂತ ಕಷ್ಟಮರುಗಳು ಯಾರ್ಯಾರು ಹೇಳಿ"

"ಯಾಕೊ"

ಈ ನಾಯಿ ಉಚ್ಚೆ ಉಯ್ದಿರುವ ಸಪ್ಲಿಮೆಂಟರಿಗಳನ್ನು ಮೈನ್ ಸೀಟಿನಲ್ಲಿ ಹಾಕಿ ಅಂತವರ ಮನೆಗಳಿಗೆಲ್ಲಾ ಹಾಕಿಬಿಡೋಣ. ಆಗ ಅವರಿಗೆ ಬುದ್ದಿ ಬರುತ್ತೇ ಅಲ್ವ" ನಗುತ್ತಾ ಹೇಳಿದ.

ಹೌದು ಕಣೋ ಹಾಗೆ ಮಾಡಬೇಕು" ವೇಡಿಯ ಮಾತನ್ನು ವೇಲು ಸಮರ್ಥಿಸಿದ.

ಅವರ ಮಾತನ್ನು ಕೇಳಿ ಮಣಿಗೆ ನಗು ಬಂತು. ಇವರು ಹೇಳುವುದು ಸರಿಯಷ್ಟೇ. ಕೆಲವೊಂದು ಗಿರಾಕಿಗಳ ಮೇಲೆ ನಮಗೆ ಭಯಂಕರ ಸಿಟ್ಟು ಬಂದು ಬಿಡುತ್ತದೆ. ಅವರು ತಿಂಗಳಿಗೊಮ್ಮೆ ಕೊಡುವ ಹಣದಲ್ಲಿಯೇ ನಮ್ಮ ಜೀವನ ನಡೆಯುವುದು, ನಮ್ಮ ಬೀಟಿನ ಹುಡುಗರ ಸಂಬಳ ಕೊಡಲಿಕ್ಕಾಗುವುದು.


ನಮ್ಮ ಕಷ್ಟದ ಅರಿವಿಲ್ಲದೇ ಈ ರೀತಿ ಸತಾಯಿಸುವ ಗಿರಾಕಿಗಳಿಗೆ ಇಂಥ ಪೇಪರ್ ಕೊಡುವುದು ತಪ್ಪೇನಿಲ್ಲವೆಂದು ಅವನಿಗೂ ಅನ್ನಿಸಿದರೂ, ಮರುಕ್ಷಣವೇ ಛೇ ನಾನು ಆ ರೀತಿ ಯೋಚಿಸಬಾರದು, ನಮ್ಮ ಗ್ರಾಹಕರು ಎಂಥವರೇ ಆಗಿರಲಿ, ಅವರು ದೇವರಿದ್ದ ಹಾಗೆ, ದಿನಪತ್ರಿಕೆಯನ್ನು ಅವ್ರು ಕೊಂಡು ಓದದೇ ಇದ್ದಿದ್ದಿರೇ ನಮಗೆ ಈ ಪತ್ರಿಕೆ ಹಂಚುವ ಕೆಲಸವೇ ಸಿಗುತ್ತಿರಲಿಲ್ಲ. ಆ ಕೆಲಸದಿಂದಾಗಿಯೇ ನಮ್ಮ ಜೀವನ ಈಗ ತಕ್ಕ ಮಟ್ಟಿಗೆ ನಡೆಯುತ್ತಿದೆಯಲ್ಲ ಎಂದು ಮಣಿಗೆ ಅನಿಸಿತೇನೋ?

" ಲೋ ವೇಡಿ, ನೋಡೊ ಇಲ್ಲಿ ನಾವು ಆಗೆಲ್ಲಾ ಮಾಡಬಾರದು. ಅವ್ರು ನಮಗೆ ದೇವರಿದ್ದ ಹಾಗೆ. ಅವರ ಮನೆಗೆ ನೀನು ಪೇಪರ್ ಹಾಕುತ್ತಿಯಲ್ಲವ ಅದನ್ನು ಖುಷಿಯಿಂದ ಓದಿ, ನಾನು ಹಣ ವಸೂಲಿಗೆ ಹೋದಾಗ ಅವರು ಖುಷಿಯಿಂದ ಹಣಕೊಡುತ್ತಾರೆ. ಆದೇ ಖುಷಿಯಿಂದಲೇ ನಾನು ನಿನಗೆ ಸಂಬಳ ಕೊಡಲಿಕ್ಕೆ ಸಾಧ್ಯ! ಅದರ ಬದಲು ಈ ಗಲೀಜು ಪೇಪರ್ ಅವರಿಗೆ ಹಾಕಿದರೆ, ಅವರಿಗೆ ಗೊತ್ತಾಗದಿದ್ದರೂ, ನಮ್ಮಲ್ಲಿ ಒಂದು ರೀತಿ ಅಪರಾಧಿ ಮನೋಭಾವನೆ ಬಂದುಬಿಡುತ್ತದೆ, ಆಲ್ವೇ? ಎಂದು ಬುದ್ದಿವಾದ ಹೇಳಿದ ಮಣಿ,


" ನೋಡು ಆದಷ್ಟು ಪೇಪರನ್ನು ಬಿಸಾಡಿ ಬೇರೆ ಪೇಪರ್ ತಗೊಂಡು ಬಾ ಹೋಗು. ತಗೋ ದುಡ್ಡು ಎಂದು ಜೇಬಿನಿಂದ ದುಡ್ಡು ಕೊಟ್ಟು ಕಳಿಸಿದ. ಅವತ್ತು ನಾಯಿಯಿಂದಾಗಿ ಅಂದಾಜು ನೂರು ರೂಪಾಯಿ ಮಣಿಯ ಜೇಬಿನಿಂದ ಕೈ ಬಿಟ್ಟಿತ್ತು.


ಮರುದಿನವೂ ಮಣಿಯ ದುರಾದೃಷ್ಟಕ್ಕೇ ಆ ನಾಯಿ ಎಲ್ಲಿತ್ತೋ? ಅವರು ಯಾರು ಇಲ್ಲದಾಗ ಮತ್ತೆ ಉಚ್ಚೇ ಉಯ್ದು ಹೋಗಿತ್ತು. ಅ ನಂತರ ಮಾಯವಾಗಿಬಿಡುತ್ತಿತ್ತು ಆ ನಾಯಿ. ಈ ನಾಯಿಯ ಕಾರ್ಯಕ್ರಮ ಆಗಾಗ್ಗೆ ಮಣಿಯ ಪೇಪರಿನ ಮೇಲೆ ಆಗುತಿದ್ದರಿಂದ ಒಂದು ದಿನ ಮಣಿ ಮತ್ತು ಅವನ ಹುಡುಗರು ಕೈಗೆ ಸಿಕ್ಕಿದ ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ಹಿಡಿದು ಮರೆಯಲ್ಲಿ ಕಾಯುತ್ತಿದ್ದರು.


ಮತ್ತೇ ಬಂತಲ್ಲ ಅದೇ ನಾಯಿ! ತನ್ನ ಹಿಂದಿನ ಕಾಲೆತ್ತಿ ಇನ್ನೇನು ತನ್ನ ಜಲಭಾದೆ ತೀರಿಸಬೇಕು! ಅಷ್ಟರಲ್ಲಿ ವೇಡಿ "ಆಣ್ಣ ಬಂತು ನೋಡು ಎಂದು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಅದರೆಡೆಗೆ ಗುರಿಯಿಟ್ಟು ಬೀಸಿದ. ಹಿಂದೆಯೇ ವೇಲು ಎಸೆದ ಕಲ್ಲು ಗುರಿತಪ್ಪದೇ ನಾಯಿಯ ಸೊಂಟಕ್ಕೆ ಬಿದ್ದು ಕುಯ್ಯೋ ಮರ್ರೋ ಎಂದು ಓಡಿಹೋಯಿತು.


ಮೂವರು ಖುಷಿಯಿಂದ ಸದ್ಯ ಕಳ್ಳನನ್ ಮಗಂದು ಸರಿಯಾಗಿ ಬುದ್ಧಿ ಕಲಿಸಿದೆವು ಎನ್ನುತ್ತಾ ತಮ್ಮ ತಮ್ಮ ಗುರಿಗಳ ಬಗ್ಗೆ ವೇಲು ಮತ್ತು ವೇಡಿ ಒಬ್ಬರಿಗೊಬ್ಬರು ಪ್ರಶಂಸಿಸಿಕೊಳ್ಳುತ್ತಾ ಆ ನಾಯಿ ಮತ್ತೆಂದು ಈ ಕಡೆ ಬರುವುದಿಲ್ಲವೆಂದುಕೊಂಡು ತಮ್ಮ ಪಾಡಿಗೆ ಕೆಲಸ ಮುಂದುವರಿಸಿದರು.


ಮರುದಿನ ನಾಯಿ ಇವರು ಹೊಡೆದ ಕಲ್ಲಿನ ಏಟಿಗೆ ಸಿಟ್ಟಿನಿಂದ ಮೊಂಡುಬಿದ್ದಿತೆಂದು ಕಾಣುತ್ತದೆ. ಹೇಗೋ ಇವರ ಕಣ್ಣು ತಪ್ಪಿಸಿ ಮತ್ತೆರಡು ಆದೇ ಕೆಲಸವನ್ನು ಮಾಡಿ ಮಾಯವಾಗಿತ್ತು.


ಈ ಪ್ರತಿನಿತ್ಯ ಮಣಿ ದಿನಪತ್ರಿಕೆಯ ಮೇಲೆ ನಾಯಿ ತನ್ನ ಜಲಭಾದೆ ತೀರಿಸಿಕೊಳ್ಳುವ ಸುದ್ಧಿ ನಮಗೆಲ್ಲರಿಗೂ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತು ಈ ರೀತಿ ಮಣಿಯ ದಿನಪತ್ರಿಕೆಗಳಿಗೆ ಮೂತ್ರ ಮಾಡುತ್ತಿದ್ದ ನಾಯಿ ಯಾವುದೆಂದು ಹುಡುಕಿದಾಗ ಬೇರೊಂದು ವಿಚಾರ ನಮಗೆ ತಿಳಿಯಿತು.


ನಮ್ಮ ದಿನಪತ್ರಿಕೆ ವಿತರಣೆಗಳ ಚಟುವಟಿಕೆಗಳು ನಡೆಯುವುದು ಮಾಮೂಲಿ ಫುಟ್ ಪಾತಿನಲ್ಲಿ. ನಾವು ನಾಲ್ಕು ಗಂಟೆಗೆ ಹೋಗುವಾಗ ಆ ಫುಟ್ ಪಾತಿನಲ್ಲಿ ಕೆಲವು ನಾಯಿಗಳು ಮಲಗಿರುತ್ತವೆ. ನಾವು ನಮ್ಮ ಕೆಲಸಕ್ಕಾಗಿ ಅವುಗಳನ್ನು ಅಲ್ಲಿಂದ ಓಡಿಸಿ ಆ ಜಾಗದಲ್ಲೇ ನಮ್ಮ ಕೆಲಸ ಮಾಡುತ್ತಿರುತ್ತೇವೆ. ಕೆಲವು ದಿನ ನಮ್ಮ ವಿತರಕರು ಹಾಗೂ ಹುಡುಗರ ಕಾಟ ತಾಳಲಾರದೆ, ಬೊಗಳುವುದರ ಮೂಲಕ್ ಪ್ರತಿಭಟಿಸಿದವು. ಅದಕ್ಕೆ ಕೇರ್ ಮಾಡದೆ ಇದ್ದಾಗ ಅವು ನಮ್ಮ ದಿನಪತ್ರಿಕೆಗಳ ಮೇಲೆ ಮೂತ್ರ ಮಾಡುವುದರ ಮೂಲಕ ಸೇಡು ತೀರಿಸಿಕೊಳ್ಳಲಾರಂಭಿಸಿದವು.


ನಾವು ಒಂದು ಪತ್ರಿಕೆ ಬಂಡಲ್ ತಂದಿಟ್ಟು ಮತ್ತೊಂದು ತರಲಿಕ್ಕೆ ಹೋದಾಗ ಯಾವ ಮಾಯದಲ್ಲೋ ಬಂದು ತಮ್ಮ ಕೆಲಸ ಮುಗಿಸಿಬಿಟ್ಟು ಓಡುತ್ತಿದ್ದವು. ಪ್ರತಿದಿನವೂ ಯಾರ ಪತ್ರಿಕೆಗಳ ಮೇಲಾದರೂ ಅವುಗಳ ಸ್ಟಾಂಪ್ ಇದ್ದೇ ಇರುತ್ತಿತ್ತು. ನಾವು ಅವುಗಳನ್ನು ಓಡಿಸಲು ಮಾಡಿದ ಎಲ್ಲಾ ಉಗ್ರ ಪ್ರಯತ್ನಗಳು ವಿಫಲವಾಗಿ ಕೊನೆಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಕೊನೆಯ ಅಸ್ತ್ರವಾಗಿ ನಾವೇ ಒಂದು ಉಪಾಯ ಕಂಡು ಕೊಂಡೆವು.

ಶಿವು ರಚಿಸಿದ ಎರಡನೇ ರೇಖ ಚಿತ್ರ]


ಗೆಳೆಯರಾಗಿ ಅವುಗಳ ಜೊತೆ ಹೊಂದಿಕೊಂಡು ಅವುಗಳಿಗೆ ಪ್ರತಿದಿನ ಬಿಸ್ಕೆಟ್ಟು, ಬನ್ನು ಎಲ್ಲವನ್ನು ತಂದು ಹಾಕಿ ಅವುಗಳನ್ನು ಓಲೈಸಿ ಗೆಳೆಯರನ್ನಾಗಿ ಮಾಡಿಕೊಂಡೆವು. ಅದಾದ ನಂತರ ಮುಂದೆಂದು ಅವು ತಮ್ಮ ನಾಯಿ ಬುದ್ದಿ ತೋರದೆ ನಮಗೆ ನಿಯತ್ತಾಗಿದ್ದವು.

ಅದರೆ ಮಣಿಯ ಮೇಲೇಕೆ ಆ ನಾಯಿಯ ಕೆಟ್ಟ ದೃಷ್ಟಿ ಬಿತ್ತೆಂದು ನಾವೆಲ್ಲರೂ ಯೋಚಿಸಿದಾಗ ನಮಗೆ ಗೊತ್ತಾದದ್ದು ಏನೆಂದರೆ, ಮಣಿ ಇತ್ತೀಚೆಗೆ ಹೊಸದಾಗಿ ಏಜೆನ್ಸಿ ತೆಗೆದುಕೊಂಡಿದ್ದರಿಂದ ಅವನಿಗೆ ಇವೆಲ್ಲಾ ಗೊತ್ತಿರಲಿಲ್ಲ. ಪತ್ರಿಕೆಯ ಏಜೆನ್ಸಿ ನಡೆಸಲು ಈ ರೀತಿಯ ಕಷ್ಟ-ಕೋಟಲೆಗಳು ನಾಯಿಗಳಿಂದ ಬರುತ್ತದೆಂದು ಅರಿಯದ ಹೋದ ಅಮಾಯಕನಾಗಿದ್ದ. ಕೊನೆಗೆ ಅವನಿಗೆ ನಾವು ಮಾಡಿದಂತೆ ಒಂದಷ್ಟು ದಿನ ಬ್ರೆಡ್ಡು, ಬನ್ನು, ಬಿಸ್ಕೆಟ್ಟುಗಳನ್ನು ಹಾಕಿ ಅ ನಾಯಿಯ ಜೊತೆ ಗೆಳೆತನ ಮಾಡಿಕೊ ಎಲ್ಲಾ ಸರಿಹೋಗುತ್ತದೆ ಎಂದು ಬುದ್ಧಿವಾದ ಹೇಳಿದೆವು.


ಮಣಿ ನಾವು ಹೇಳಿದಂತೆ ಕೆಲವು ದಿನ ಮಾಡಿದ ನಂತರ ಅವನಿಗೆ ಪ್ರತಿದಿನ ಆಗುವ ನಷ್ಟವು ತಪ್ಪಿಹೋಗಿ ಮತ್ತಷ್ಟು ಹುರುಪು ಉಲ್ಲಾಸದಿಂದ ಕೆಲಸ ಮಾಡುತ್ತಿದ್ದಾನೆ.


[ಈ ಮೊದಲು ಈ ಲೇಖನವನ್ನು ಬ್ಲಾಗಿಗೆ ಹಾಕಿದಾಗ ನಾನು ಬ್ಲಾಗ್ ಲೋಕಕ್ಕೆ ಹೊಸಬನಾದ್ದರಿಂದ ಒಂದಿಬ್ಬರು ಬಿಟ್ಟರೆ ಯಾರು ಬಂದು ನೋಡಿರಲಿಲ್ಲ. ಮತ್ತು ನಾನು ಮತ್ತು ನನ್ನ ಮತ್ತೊಬ್ಬ ಬ್ಲಾಗ್ ಗೆಳಯ ಪ್ರೀತಿಯಿಂದ ನನ್ನ ಈ ಲೇಖನಕ್ಕೆ ರಚಿಸಿಕೊಟ್ಟ ರೇಖಾಚಿತ್ರಗಳ ಜೊತೆಗೆ ಮತ್ತೆ ಇದೇ ಲೇಖನವನ್ನು ತಿದ್ದಿ ತೀಡಿ ಚಿಕ್ಕ ಮತ್ತು ಚೊಕ್ಕ ಮಾಡಿ ಹಾಕಿದರೆ ಚೆನ್ನಾಗಿರುತ್ತದೆ ಎನಿಸಿತ್ತು. ಇದೊಂದು ಹೊಸ ಪ್ರಯತ್ನವೆನಿಸಿ ಇಲ್ಲಿ ಹಾಕಿದ್ದೇನೆ. ಮೊದಲು ನೋಡಿದವರೂ ಸಹಕರಿಸಿ. ]

ರೇಖಾ ಚಿತ್ರಗಳು : ಶಿವು ಮತ್ತು ಪ್ರಮೋದ್.

ಲೇಖನ :ಶಿವು.

Friday, December 26, 2008

ಕರೆಂಟ್ ಷಾಕ್ !!

ಡಿಸೆಂಬರ್ ಮೊದಲ ವಾರ ಬೆಳಗಿನ ಸಮಯ ಚಳಿ ಹೆಚ್ಚು. ಅವತ್ತು ಬೆಳಿಗ್ಗೆ ೯ ಗಂಟೆಯಾದರೂ ಸೂರ್ಯ ಮುಖ ತೋರಿಸಿರಲಿಲ್ಲ. ನಾನಂತೂ ಚಳಿಯಿಂದ ನನ್ನನ್ನು ಕಾಪಾಡಿಕೊಳ್ಳಲು ಸ್ವೆಟರು ಮತ್ತು ಚಳಿ ಟೋಪಿ ಹಾಕಿದ್ದೆ.


ಅದೊಂದು ಆಧುನಿಕ ಸುಂದರ ಆಪಾರ್ಟ್‌ಮೆಂಟು. ಮೂರನೆ ಮಹಡಿಯ ಮಾರ್ವಾಡಿ ಮನೆ. ಕಾಲಿಂಗ್ ಬೆಲ್ ಒತ್ತಿದೆ. ಕಿಟಕಿ ತೆರೆದು


"ಕೌನ್ ಹೈ " ಹೆಣ್ಣಿನ ದ್ವನಿ.


"ಪೇಪರ್ ವಾಲ ಮೇಡಮ್, ನ್ಯೂಸ್ ಪೇಪರ್ ಬಿಲ್ " ಕೇಳಿದೆ.


"ವೇಟ್ ಕರೋ, ಯಜಮಾನ್ ಹಾತಾಹೇ " ಹೇಳಿ ಒಳಗೋದಳು ಆಕೆ.


ಎರಡು ನಿಮಿಷದಲ್ಲಿ ಬಾಗಿಲು ತೆರೆಯಿತು. ಆತನಿಗೆ ಕನ್ನಡ ಬರುತ್ತದೆ. ಬಿಲ್ ಕೈಗೆ ಕೊಟ್ಟೆ. ಅವನು ಎಂದಿನಂತೆ ಒಂದಷ್ಟು ನನ್ನ ಹುಡುಗನ ಮೇಲೆ ಕಂಪ್ಲೆಂಟು ಹೇಳುವುದು, ಪೇಪರ್ ಇಂಥ ದಿನ ಬಂದಿಲ್ಲ ಎನ್ನುವುದು, ಅವನ ಮಾತಿಗೆಲ್ಲಾ "ಸರಿ ಸಾರ್, ಆಯ್ತು ಸಾರ್, ಹೇಳ್ತೀನಿ ಸಾರ್, ನಾಳೆಯಿಂದ ಸರಿಹೋಗತ್ತೆ ಸಾರ್" ನಾನು ಉತ್ತರಿಸಿ ರಾಜಕೀಯದವರ ತರ ಭರವಸೆ ನೀಡುವುದು, ಇದು ಪ್ರತಿ ತಿಂಗಳು ಚಾಲ್ತಿಯಲ್ಲಿರುತ್ತದೆ.


ಈ ವಿಚಾರದಲ್ಲಿ ಕಳೆದ ಐದು ವರ್ಷದಿಂದ ಇಬ್ಬರಲ್ಲೂ ಸ್ವಲ್ಪವೂ ಬದಲಾವಣೆಗಳಾಗಿಲ್ಲ, ಅದೇ ಪರಿಸ್ಥಿತಿ.


ನಮ್ಮಿಬ್ಬರ ನಡುವೆ " ಈ ಸಂಭಾಷಣೆ..........ನಮ್ಮ ಈ ಪ್ರೇಮ ಸಂಭಾಷಣೆ.............." ನಡೆಯುತ್ತಿರುವ ಸಮಯದಲ್ಲಿ ಅವನ ಐದು ವರ್ಷದ ಮಗ ಓಡಿ ಬಂದ.


ಕೈಯಲ್ಲಿ ಎಂಥದೊ ಸಿಗರೇಟ್ ಪ್ಯಾಕಿನ ಆಕಾರದ ಆಟದ ಸಾಮಾನು ಹಿಡಿದಿದ್ದ. ಹುಡುಗ ಮುದ್ದಾಗಿದ್ದ. ಮಾರ್ವಾಡಿ ಅಪ್ಪ ಮಗನನ್ನು ನೋಡಿ,


"ಅಂಕಲ್‌ಗೆ ಗುಡ್ ಮಾರ್ನಿಂಗ್ ಹೇಳು"


"ಹಲೋ ಗುಡ್ ಮಾರ್ನಿಂಗ್ ಆಂಕಲ್"


ಬಾಯಿಂದ ಮುತ್ತುಗಳು ಉದುರಿದಂತೆ ಬಂತು ತೊದಲು ಮಾತುಗಳು.


ನನಗೆ ಖುಷಿಯಾಗಿತ್ತು. ಪರ್ವಾಗಿಲ್ಲ, ಮಕ್ಕಳಿಗೆ ಹೊರಗಿನವರನ್ನು ಕಂಡರೆ ಗೌರವದಿಂದ ಮಾತಾಡಿಸುವುದನ್ನು ಕಲಿಸಿದ್ದಾರಲ್ಲ ಅಂತ.


"ಹಾಯ್ ಪುಟ್ಟ ಗುಡ್ ಮಾರ್ನಿಂಗ್, ಏನು ನಿನ್ನ ಹೆಸರು ? "

ಮಗು ಅಪ್ಪನ ಮುಖ ನೋಡಿತು.


"ಅಂಕಲ್‌ಗೆ ಹೆಸರು ಹೇಳು " ಮಗು ಹೇಳಿತು.


"ಶ್ರೇಯಸ್ ಮರ್ಲೇಚ... "


ತೊದಲು ನುಡಿ ಮುದ್ದಾಗಿ ಬಂತು. ಕೇಳಿ ಖುಷಿಯಾಯಿತು. ಮಗುವಿಗೆ ದೈರ್ಯ ಬಂತೇನೋ ,


"ಅಂಕಲ್ ಚಾಕ್‌ಲೇಟ್ ತಗೊಳ್ಳಿ"


ನನ್ನೆಡೆಗೆ ತನ್ನ ಪುಟ್ಟ ಕೈ ನೀಡಿತು. ಅದರಲ್ಲಿ ಸಿಗರೇಟ್ ಪ್ಯಾಕಿನಂತಿದ್ದ ಬಾಕ್ಸ್‌ನೊಳಗೆ ಉದ್ದದ್ದವಾಗಿ ಚಾಕ್‌ಲೇಟ್‌ಗಳು ಇದ್ದವು.


"ಬೇಡ ಮರಿ ನೀನೇ ತಿನ್ನು ಥ್ಯಾಂಕ್ಸ್"


" ಅಂಕಲ್ ಒಂದೇ ಒಂದು ತಗೊಳ್ಳಿ "


ಅದರ ಪ್ರೀತಿಯ ಮಾತಿಗೆ ಮನಸೋತರು ಮತ್ತೆ ಬೇಡವೆಂದೆ.


ನಮ್ಮಿಬ್ಬರನ್ನು ನೋಡುತ್ತಿದ್ದ ಮಾರ್ವಾಡಿ ನನಗೆ ದಿನಪತ್ರಿಕೆ ಹಣ ಕೊಡುತ್ತಾ,


" ಮಗು ಪಾಪ ಪ್ರೀತಿಯಿಂದ ಕೊಡುತ್ತಿದೆ ತೊಗೊಳ್ಳಿ" ಅಂದ.


ನನಗೆ ಮೊದಲಬಾರಿಗೆ ತುಂಬಾ ಖುಷಿಯಾಗಿತ್ತು. ಇಂಥ ಆಪಾರ್ಟ್‌ಮೆಂಟ್‌ಗಳಲ್ಲಿ ನಮ್ಮಂಥ ಆರ್ಡಿನರಿ ದಿನಪತ್ರಿಕೆಯವರಿಗೆ ಇವರು ಇಷ್ಟೊಂದು ಗೌರವ ಕೊಡುತ್ತಿದ್ದಾರಲ್ಲ! ಮತ್ತು ಮಗುವಿಗೂ ಅದೇ ಸಂಸ್ಕಾರ ಕಲಿಸಿದ್ದಾರೆ......... ಜನರಲ್ಲಿ ಇನ್ನೂ ಒಳ್ಳೆಯತನವಿದೆ ಅಂದುಕೊಂಡೆ.


" ತಗೊಳ್ಳಿ ಮಗು ಕೊಡ್ತಾ ಇದೆ, ಬೇಡ ಅನ್ನಬಾರದು "


ನಾನು ಮಾರ್ವಾಡಿಯ ಮುಖ ನೋಡಿದೆ. ಪ್ರೀತಿ ತುಂಬಿ ತುಳುಕುತ್ತಿದೆ. ಮಗುವಿನ ಕಡೆಗೆ ನೋಡಿದೆ. ಮುಗ್ದತೆಯ ಪ್ರತಿರೂಪವೇ ಆಗಿ ನನ್ನ ಕಡೆಗೆ ಕೈ ಚಾಚಿದೆ.


ಇಷ್ಟೆಲ್ಲಾ ಪ್ರೀತಿ ಗೌರವ ಇಬ್ಬರೂ ತೋರಿಸುತ್ತಿರುವಾಗ ನಾನು ಅದನ್ನು ತೆಗೆದುಕೊಳ್ಳದಿದ್ದಲ್ಲಿ ನನ್ನದೇ ಆಹಾಂಕಾರವೆನಿಸಬಹುದು. ಸರಿ ಆ ಚಾಕಲೇಟ್ ತೆಗೆದುಕೊಳ್ಳೋಣವೆಂದು ಕೈ ಚಾಚಿದೆ ಆಷ್ಟೇ,


ಹೊಡೆಯಿತು ಕರೆಂಟ್ ಷಾಕ್ !!


ಅಂತ ಚಳಿಯಲ್ಲಿ ಒಂದು ಕ್ಷಣ ಮೈಯಲ್ಲಾ ಜುಮ್ಮೆಂದಿತು.


ಮನೆಯಲ್ಲಿ ಗೊತ್ತಿಲ್ಲದೆ ಯಾವುದಾದರೂ ವಿದ್ಯುತ್ ತಂತಿ ಮುಟ್ಟಿದಾಗ ಅಥವಾ ಪ್ಲಗ್‌ಗಳನ್ನು ಮುಟ್ಟಿದಾಗ ಎಲೆಕ್ಟ್ರಿಕ್ ಷಾಕ್ ಆದರೆ ಹೇಗಾಗುತ್ತೋ ಆ ರೀತಿ ಆಗಿತ್ತು ನನ್ನ ಪರಿಸ್ಥಿತಿ.


ವಾಸ್ತವಕ್ಕೆ ಬರವಷ್ಟರಲ್ಲಿ ೫-೬ ಸೆಕೆಂಡುಗಳೇ ಬೇಕಾಯಿತು. ಎದುರಿಗಿದ್ದ ಅಪ್ಪ ಮಗನನ್ನು ನೋಡಿದೆ. ಕೇಕೆ ಹಾಕಿ ಜೋರಾಗಿ ನಗುತ್ತಿದ್ದರು !


" ಡ್ಯಾಡಿ ಎಂಗೆ " ಅಪ್ಪನತ್ತ ಕೈಚಾಚಿದ ಮಗ.


"ಸೂಪರ್ ಬೇಟ " ಅಪ್ಪ ಮಗನ ಪುಟ್ಟ ಕೈ ಕುಲುಕಿದ.

ಅದೊಂದು ರೀತಿಯ ಹೊಸ ಆಟದ ಸಾಮಾನು. ಹಿಂಭಾಗದಿಂದ ಹಿಡಿದುಕೊಂಡು ಹಿಂದಿನಿಂದ ಒಂದೆರಡು ಪೆನ್ಸಿಲ್ ಆಕಾರದ ಚಾಕ್‌ಲೇಟ್‌ಗಳನ್ನು ಮುಂದೆ ತಳ್ಳಿದ ಮೇಲೆ ಆ ಚಾಕ್‌ಲೇಟ್‌ಗಳನ್ನು ತೆಗೆದುಕೊಳ್ಳಲು ಯಾರು ಮುಟ್ಟುತ್ತಾರೋ ಅವರಿಗೆ ಕರೆಂಟ್ ಷಾಕ್ ಹೊಡೆಯುತ್ತದೆ !!


"!!ಮಾಡುವವರಿಗೆ ಅದು ಬಲು ಮಜ. ಮುಟ್ಟಿದವರಿಗೆ ಇಂಗು ತಿಂದ ಮಂಗನ ಸ್ಥಿತಿ ! "


ಒಂದು ನಿಮಿಷದ ಹಿಂದೆ ಮುಗ್ದತೆಯ ಪ್ರತಿರೂಪದಂತಿದ್ದ ಐದು ವರ್ಷದ ಮಗ, ಸಂಸ್ಕಾರದ ತದ್ರೂಪಿನ ಅಪ್ಪ ಇಬ್ಬರು ಇನ್ನೂ ನಗುತ್ತಿದ್ದರು........


ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.

ಪ್ರೀತಿಯಿರಲಿ
ಶಿವು.

Saturday, December 20, 2008

ಟ್ರಿಣ್....ಟ್ರಿಣ್....ಟ್ರಿಣ್.......

ನನ್ನಾಕೆಯ ಮೊಬೈಲ್ ಬೆಳಗಿನ ಜಾವ ನಾಲ್ಕು ಗಂಟೆಗೆ ಅಲರಾಂ ಸದ್ದು ಮಾಡಿದಾಗ ನಿರೀಕ್ಷೆಯಂತೆ ಎಚ್ಚರವಾಯಿತು.

ಅರೆರೆ......ಇಷ್ಟು ಸುಲಭವಾಗಿ ಅಂತ ಗಾಡನಿದ್ರೆಯನ್ನು ನಿರಾಕರಿಸಿ ಎದ್ದುಬಿಟ್ಟೆ ಎಂದುಕೊಳ್ಳಬೇಡಿ. ಅದು ನನಗೂ ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿನಿತ್ಯ ಕಷ್ಟದ ಹಿಂಸೆಯ ಕೆಲಸ. ಆದರೇನು ಮಾಡುವುದು ನಾನು ಪ್ರತಿದಿನ ಮುಂಜಾವಿನಲ್ಲಿ ನನ್ನ ಕಾಯಕವಾದ ದಿನಪತ್ರಿಕೆ ವಿತರಣೆಗೆ ಹೋಗಲೇಬೇಕಲ್ಲ.!

ಅದಕ್ಕೆಂದೆ ನಾನು ಒಂದು ವಿಭಿನ್ನ ತಂತ್ರ ಕಂಡುಕೊಂಡಿದ್ದೇನೆ. ನನ್ನ ಮೊಬೈಲಿನಲ್ಲಿ ಬೆಳಗಿನ ಮೂರು ಗಂಟೆಗೆ ಅಲರಾಂ ಇಟ್ಟುಕೊಂಡು ನನ್ನ ಮಡದಿಯ ಮೊಬೈಲಿನಲ್ಲಿ ೪ ಗಂಟೆಗೆ ಅಲರಾಂ ಇಟ್ಟುಕೊಳ್ಳುತ್ತೇನೆ, ಅದು ನಂಬಿಕಸ್ತನಂತೆ ತಪ್ಪದೇ ಅಲರಾಂ ಹೊಡೆದು ನನ್ನನ್ನು ಎಚ್ಚರಗೊಳಿಸುತ್ತದೆ ಎನ್ನುವ ನಂಬಿಕೆ.

ಮೊದಲು ನನ್ನ ಮೊಬೈಲ್ ಮೂರು ಗಂಟೆಗೆ ಅಲರಾಂ ಹೊಡೆದಾಗ ನಿಜವಾಗಿ ಅವಾಗಲೇ ಸರಿಯಾದ ಗಾಢನಿದ್ರೆ. ಎದ್ದು ನನ್ನ ಮೊಬೈಲ್ ಆಲರಾಂ ಬಂದ್ ಮಾಡಿ ಮತ್ತೆ ಮಲಗುತ್ತೇನೆ. ಈಗ ಮೂರು ಗಂಟೆಯಿಂದ ನಾಲ್ಕು ಗಂಟೆಗೆ ಗಾಢನಿದ್ರೆಯ ಬದಲಾಗಿ ಸರಳ ನಿದ್ರೆ ಮಾಡುತ್ತೇನೆ.[ಮಾಡುತ್ತೇನೆ ಅಂದು ಕೊಳ್ಳುತ್ತೇನೆ.] ನಂತರ ನನ್ನಾಕೆಯ ಮೊಬೈಲ್ ನಾಲ್ಕು ಗಂಟೆಗೆ ಅಲಾರಾಂ ಹೊಡೆದಾಗ ಸರಳ ನಿದ್ರೆಯಲ್ಲಿರುವ ನನಗೆ ಎಚ್ಚರಗೊಳ್ಳುವುದು ಸುಲಭ.

ನಮಗೆ ಗಾಢನಿದ್ರೆ ಎಂದು ತಿಳಿಯುವುದು ಯಾವಾಗ ?

ಮೂರು ಗಂಟೆಗೆ ಹೊಡೆದ ಅಲಾರಾಂನಿಂದಾಗಿ ಗಾಢನಿದ್ರೆಯಿಂದ ಎದ್ದು ಎಂಥ ಗಾಢನಿದ್ರೆ ಎಂದುಕೊಂಡು ಹತ್ತೇ ಸೆಕೆಂಡುಗಳಲ್ಲಿ ಅಲಾರಾಂ ಬಂದ್ ಮಾಡಿ ಮತ್ತೆ ನಿದ್ರೆ ಹೋಗುವ ಸುಖ ! ಆಹಾ!! ಅದನ್ನು ಅನುಭವಿಸಿಯೋ ತೀರಬೇಕು.[ನಮಗೆ ಗಾಢನಿದ್ರೆ ಎಂದು ಅರಿವಾಗುವುದು ಯಾವಾಗ ? ನಾವು ಅಂಥ ನಿದ್ರೆಯಿಂದ ಎಚ್ಚರಗೊಂಡು ಮತ್ತೆ ಮಲಗಿದಾಗಲೇ ಅಲ್ಲವೆ ?] ]

ಬೇಕಾದರೆ ನೀವು ಈ ಪ್ರಯೋಗ ಮಾಡಬಹುದು.

ಬೆಳಗಿನ ಜಾವ ೭ ಗಂಟೆಗೋ ಅಥವಾ ೮ ಗಂಟೆವರೆಗೆ ಪೂರ್ತಿ ನಿದ್ರೆ ಮಾಡಿ ಎದ್ದುಬಿಟ್ಟರೆ ಏನು ಮಜಾ? ನಮಗೆ ನಿಜವಾದ ಗಾಢನಿದ್ರೆ ಯಾವ ಸಮಯದಲ್ಲಿತ್ತು ಎಂದು ತಿಳಿಯುವುದು ಹೇಗೆ ? ಅದಕ್ಕಾಗಿಯೇ ೩ ಗಂಟೆಗೋ, ನಾಲ್ಕು ಗಂಟೆಗೋ ಆಲಾರಾಂ ಹೊಡೆಸಿ ಎಚ್ಚರವಾಗಿ "ಎಂಥಾ ಗಾಢನಿದ್ರೆ" ಎಂದುಕೊಂಡು ಮತ್ತೆ ಮಲಗುವುದಿದೆಯಲ್ಲ ಅದು ನನ್ನಂತೆ ಅನುಭವಿಸಿದವರಿಗೆ ಗೊತ್ತು ಅದೆಂಥ ಸ್ವರ್ಗ ಸುಖ ಎಂದು.

ನಂತರ ಹಾಸಿಗೆಯಿಂದ ಮೇಲೆದ್ದು ಕೈಕಾಲು ಮುಖ ತೊಳೆದು ರೆಡಿಯಾಗಿ ಮೊದಲು ನನ್ನ ಸಹಾಯಕರಿಬ್ಬರಿಗೆ ಫೋನ್ ಮಾಡುತ್ತೇನೆ. ನಾನು ಫೋನ್ ಮಾಡಿದಾಗ ಅವರ ಮೊಬೈಲಿನಲ್ಲಿ ನನ್ನ ನಂಬರ್ ಮತ್ತು ಹೆಸರು ಬರುವುದು ಸಹಜ.

ಮೊದಲನೆಯವನಿಗೆ ರಿಂಗ್ ಮಾಡಿದಾಗ ಅವನ ಮೊಬೈಲ್ ರಿಂಗ್ ಟೋನ್

"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.......

ಹಾಡೋಣ ನಾನು ನೀನು ಕುಚ್ಚಿ ಕುಚ್ಚಿ.........

ಹಾಡಿನ ಮಧುರ ಪಲ್ಲವಿ ಕಿವಿಗೆ ಬಿದ್ದು ನನಗೂ ಇನ್ನೊಂದಷ್ಟು ಹೊತ್ತು ಗುಬ್ಬಚ್ಚಿಯ ಹಾಗೆ ಗೂಡಿನಲ್ಲಿ ಮಲಗೋಣ ಎನಿಸಿ ಹಾಗೇ ಕಲ್ಪನಾ ಲೋಕದಲ್ಲಿ ತೇಲುತ್ತೇನೆ. ಮರುಕ್ಷಣವೇ ಎಚ್ಚೆತ್ತು ವಾಸ್ತವಕ್ಕೆ ಬಂದು ಕಾಯಕದ ಕರೆ ಬಂದಂತಾಗುತ್ತದೆ.

ಐದು ನಿಮಿಷ ಕಳೆದು ಮತ್ತೊಬ್ಬನಿಗೆ ರಿಂಗ್ ಮಾಡಿದಾಗ

"ಕನಸು ಕೇಳಲೆಂತೋ.........

ಮನಸು ಮಾಯವೆಂತೋ........

ಆಹಾ ಒಂಥರಾ..ತರಾ.....

ಹೇಳೊಲೊಂತರಾ....ತರಾ.....

ಕೇಳಲೊಂತರಾ....ತರಾ.....

ಮತ್ತೊಂದು ಮಧುರ ಹಾಡಿನ ಪಲ್ಲವಿ ಕಿವಿಗೆ ಇಂಪೆನಿಸಿ ಆ ತಂಪು ವಾತಾವರಣದಲ್ಲಿ ಕನಸಿನ ಲೋಕಕ್ಕೆ ಇಳಿಯಬೇಕೆನಿಸಿ ಮತ್ತೆ ಸಣ್ಣ ನಿದ್ರೆಗೆ ಜಾರಬೇಕೆನಿಸುತ್ತದೆ.

ಈ ರೀತಿಯಲ್ಲಾ ಆ ಬೆಳಗಿನ ಜಾವ ಅನ್ನಿಸುವುದಕ್ಕೆ ಅವರಿಗೆ ಧನ್ಯವಾದ ಹೇಳಬೇಕೆನಿಸುತ್ತದೆ. ಆದರೆ ಕೆಲವೊಮ್ಮೆ ಅವರಿಬ್ಬರ ಮೊಬೈಲುಗಳಿಂದ

" ದಿ ಏರ್‌ಟೆಲ್ ನಂಬರ್ ಯೂ ಆರ್ ಟ್ರೈಯಿಂಗ್ ಟು ರೀಚ್ ಇಸ್ ಟೆಂಪರೆರಿಲಿ ಔಟ್ ಆಫ್ ಸರ್ವೀಸ್" ಅಂತಲೋ ಅಥವಾ

"ನೀವು ಕರೆ ಮಾಡಿರುವ ಚಂದದಾರರು ಸ್ವಿಚ್ ಆಪ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಪ್ರಯತ್ನಿಸಿ"

ಎಂದು ಕೇಳಿಸಿದಾಗ ಮಗ್ಗುಲಿಗೆ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ಕಾರಣ ಯಾರ ಮೊಬೈಲಿನಿಂದ ಈ ಕರೆ ಕೇಳಿಸುವುದೋ ಆತ ಇಂದು ಬರುವುದಿಲ್ಲವೆಂದು ನಾನು ಅರ್ಥೈಸಿಕೊಳ್ಳುವಾಗ ಆ ತಂಪು ವಾತಾವರಣವೆಲ್ಲಾ ಬಿಸಿಯಾಗುತ್ತಿದೆಯೆನಿಸಿ, ಆತನ ಮೇಲೆ ಸಿಟ್ಟು ಬಂದು ಮೈ ಪಚಿಕೊಳ್ಳುವಂತಾಗುತ್ತದೆ.

ಇದೆಲ್ಲಾ ಮೊಬೈಲ್ ಆಟ ಮುಗಿಯುವ ಹೊತ್ತಿಗೆ ಸಮಯ ೪-೩೦ ಆಗಿರುತ್ತದೆ.[ಈಗ ಎಲ್ಲಾ ಕಡೆ ಮೊಬೈಲು ದರ್ ಕಾಡಿಮೆ ಇರುವುದರಿಂದ ನಮ್ಮೆಲಾ ಬೀಟ್ ಬಾಯ್ಸ್ ಮೊಬೈಲ್ ಇಟ್ಟಿದ್ದಾರೆ. ಮತ್ತು ಈ ಮೊಬೈಲ್ ಕರೆಗಳ ಆಟ ನನ್ನೊಬ್ಬನಿಗೆ ಸೀಮಿತವಾಗಿಲ್ಲ. ಎಲ್ಲಾ ದಿನಪತ್ರಿಕೆ ವಿತರಕರಿಗೂ ಇದು ಪ್ರತಿದಿನದ ಕತೆ].

ಆ ಕ್ಷಣ ವಾಸ್ತವಕ್ಕೆ ಬಂದು ನಾನು ಸ್ವೆಟರ್ ಹಾಕಿಕೊಂಡು ಹೊರಡಲು ಸಿದ್ದನಾಗುತ್ತೇನೆ. ನನ್ನ ಸ್ಕೂಟಿ ಏರಿ ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ ೫ ನಿಮಿಷ ಬೇಕಾಗುತ್ತದೆ. ಆ ಐದು ನಿಮಿಷಗಳಲ್ಲಿ

"ಓಂ ಭೂಃರ್ಭುವಸ್ವಃ
ತತ್ಸವಿತೂರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್" ಗಾಯತ್ರಿ ಮಂತ್ರ ಅಥವಾ

"ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿವರ್ಧನಂ
ಉರ್ವಾರುಕಮಿವ ಬಂಧರ್ನಾ
ಮೃತ್ಯೋರ್ಮುಕ್ಷೀಯ ಮಾಮೃತಾತ್ " ಮೃತ್ಯುಂಜಯ ಮಂತ್ರವನ್ನು ಮನಸ್ಸಿನಲ್ಲಿಯೇ ೯ ಸಲ ಹೇಳಿಕೊಂಡು ಸಾಗುತ್ತೇನೆ.

ಸಹಾಯಕರ ಮೊಬೈಲ್ ಸ್ವಿಚ್ ಆಪ್ ಅಗಿದ್ದ ದಿನ ಎಲ್ಲಾ ಕೆಲಸ ನಾನೇ ಮಾಡಬೇಕಲ್ಲ ಎಂಬ ಭಾವನೆ ಸಿಟ್ಟಿನ ಮೂಲಕ ನುಗ್ಗಿ ಬಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ ಎರಡಕ್ಕೂ ಜಾಗವಿಲ್ಲದೆ ಅವರನ್ನು ಮನಸ್ಸಿನಲ್ಲಿಯೇ ಬೈದುಕೊಳ್ಳುವ ಮಂತ್ರ ನನಗರಿವಿಲ್ಲದೇ ಬಂದುಬಿಡುತ್ತದೆ. ಹಾಗು ಅದು ೯ ಸಲಕ್ಕಿಂತ ಹೆಚ್ಚಾಗಿರುತ್ತದೆ.

ಇಷ್ಟೆಲ್ಲಾ ಕತೆ ಮುಗಿದು ನನ್ನ ದಿನಪತ್ರಿಕೆ ವಿತರಣೆ ಸ್ಥಳ ತಲುಪುವ ಹೊತ್ತಿಗೆ "ಅರೆರೆ....ಆಗಲೇ ೪-೪೫ ಆಗಿಹೋಯಿತಲ್ಲ ಎನಿಸಿ ಮುಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ.

ಇದರ ನಂತರದ ಚಟುವಟಿಕೆಗಳು ಮುಂದಿನ ಬಾರಿ ಹಾಕುತ್ತೇನೆ.

ಶಿವು.

Monday, December 15, 2008

ಹಾವೂ ಸಾಯಬಾರದು...ಕೋಲು ಮುರಿಯಬಾರದು...

ಅವತ್ತು ಮುಂಜಾನೆ ಖುಷಿಯಲ್ಲಿದ್ದೆ. ಇಂಥ ಚಳಿಗಾಲದಲ್ಲೂ ಬೇಗ ಬಂದು ತಮ್ಮ ತಮ್ಮ ಬೀಟುಗಳನ್ನು ಸೈಕಲ್ಲಿಗೇರಿಸಿಕೊಂಡು ಹೊರಟರಲ್ಲ ! ಅವತ್ತಿನ ಕೆಲಸ ಬೇಗ ಮುಗಿಯಿತಲ್ಲ ಅಂತ! ಸ್ವಲ್ಪ ಹೊತ್ತು ಅಲ್ಲೇ ಕುಳಿತು ಒಂದು ಸುತ್ತು ಎಲ್ಲಾ ಪೇಪರುಗಳ ಹೆಡ್‌ಲೈನ್ಸ್ ನೋಡುತ್ತಿದ್ದೆ.

ಒಂದರ್ಧ ಗಂಟೆ ಕಳೆದಿರಬಹುದು. ನನ್ನ ಮೊಬೈಲ್ ಫೋನು ರಿಂಗಾಯಿತು. "ತತ್, ನೆಮ್ಮದಿಯಾಗಿ ಪೇಪರ್ ಓದೊದಕ್ಕೂ ಬಿಡೋದಿಲ್ವಲ್ಲ ಈ ಫೋನು" ಅಂದು ಕೊಂಡು ನೋಡಿದರೆ ಚೆನ್ನಾಗಿ ಗೊತ್ತಿರುವ ಗ್ರಾಹಕನ ನಂಬರ್.

"ಹಲೋ ಹೇಳಿ" ಅಂದೆ.

"ಶಿವು ನಾನು ಕಣ್ರೀ.... ಸಂತೋಷ್ ಗೊತ್ತಾಯ್ತಾ.......

ನಾನು ಸ್ವಲ್ಪ ಯೋಚಿಸಿ, " ಗೊತ್ತಾಯ್ತು ಹೇಳಿ ಸಾರ್"

"ನೋಡ್ರಿ ಶಿವು. ನಿಮ್ಮ ಪೇಪರ್ ಹಾಕೊ ಹುಡುಗ ನನ್ನ ಹೊಸ ಚಪ್ಪಲಿಯನ್ನು ತಗೊಂಡು ಹೋಗಿಬಿಟ್ಟಿದ್ದಾನೆ. ಅದರ ಬೆಲೆ ೮೫೦ ರೂಪಾಯಿ ಕಣ್ರೀ.... ದಯವಿಟ್ಟು ಅವನು ಬಂದರೆ ಸ್ವಲ್ಪ ಬಂದರೆ ನೋಡ್ರೀ...."

ಅವರ ಮಾತು ಕೇಳಿ ನನಗೆ ಶಾಕ್!

ಇದೇನಪ್ಪ ಇದು ಬೆಳಿಗ್ಗೆ ಬೆಳಿಗ್ಗೆ ಇಲ್ಲದ "ತರಲೆ ತಾಪತ್ರಯ" ಅಂದುಕೊಂಡೆ ಬೇಸರದಿಂದ.

ಮರುಕ್ಷಣ ಸಾವರಿಸಿಕೊಂಡು,

"ನೋಡಿ ಸಾರ್ ನಮ್ಮ ಹುಡುಗ ಅಂತೋನಲ್ಲ, ನೀವೇನಾದ್ರು ಕನ್‌ಪ್ಯೂಸ್ ಆದ್ರಾ ನೋಡಿ "

ಹೀಗೆ ಇಬ್ಬರ ನಡುವೆ ಕೆಲವು ಮಾತುಕತೆ ನಡೆಯಿತು. ಕೊನೆಗೆ ಆತ ಖಚಿತವಾಗಿ ಸಾಕ್ಷಿ ಸಮೇತ ಹೇಳಿದ ಮೇಲೆ ನಾನು ನಂಬಲೇ ಬೇಕಾಯಿತು.

"ರ್ರೀ......ಶಿವು, ನನಗೆ ಬೆಳಿಗ್ಗೆ ಎದ್ದು ನಿಮ್ಮ ಹುಡುಗನ ಮೇಲೆ ಕಂಪ್ಲೆಂಟು ಹೇಳೋದು ಬಿಟ್ಟು ಬೇರೆ ಕೆಲಸ ಇಲ್ಲ ಆಂದುಕೊಂಡಿರೇನ್ರೀ..... ನೀವೆ ಬಂದು ಇಲ್ಲಿ ನೋಡಿ ಬೇಕಾದ್ರೆ, ನೀಟಾಗಿ ಅವನ ಹಳೇ ಚಪ್ಪಲಿ ಬಿಟ್ಟು ನಮ್ಮ ಹೊಸ ಚಪ್ಪಲಿ ಹಾಕ್ಕೊಂಡು ಹೋಗಿದ್ದಾನೆ" ಸ್ವಲ್ಪ ತಡೆದು ,

"ನಿಮ್ಮ ಆ ಹುಡುಗ ಬಂದ್ರೆ ಅವನ್ನ ನನ್ನ ಬಳಿ ಕಳಿಸ್ರೀ.......ನಾನು ಏನು ಮಾಡೊಲ್ಲ, ನಮ್ಮ ಚಪ್ಪಲಿ ಬಿಟ್ಟು ಹೋದ್ರೆ ಸಾಕು" ಎಂದ.

"ಸರಿ ಸಾರ್ ನೋಡ್ತೀನಿ...." ಎಂದಾಗಲೇ ಅವನು ಫೋನ್ ಕಟ್ ಆದದ್ದು.

ಹೀಗೇನು ಮಾಡುವುದು ? ಮತ್ತೆ ಪೇಪರ್ ಓದುವ ಮೂಡ್ ಇಲ್ಲ. ನನ್ನೊಳಗೆ ಇಲ್ಲದ ತಳಮಳಗಳು ಶುರುವಾದವು.

ನಮ್ಮ ಹುಡುಗ ನರಸಿಂಹ ಚಪ್ಪಲಿ ಕದ್ದಿದ್ದು ಸತ್ಯವಾದರೆ ಆ ಗಿರಾಕಿ ನನ್ನ ಕಡೆಯಿಂದ ಪೇಪರ್ ತರಿಸುವುದು ನಿಲ್ಲಿಸುತ್ತಾನೆ. ಜೊತೆಯಲ್ಲಿ ಇಂಥ ಹುಡುಗನಿಂದಾಗಿ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ! ಆ ಗಿರಾಕಿ ಒರಟನಾದರೆ ಪೋಲಿಸ್........... ಕಂಪ್ಲೆಂಟು......... ಅದು ಇನ್ನೂ ಭಯವಾಯಿತು.

ನಂತರ ಆ ಹುಡುಗನನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ. ಆಷ್ಟಕ್ಕೂ ಮೀರಿ ನರಸಿಂಹನನ್ನೇ ಇಟ್ಟುಕೊಂಡರೆ ಅವನ ಕಳ್ಳತನಕ್ಕೆ ನಾನೇ ಸಪೋರ್ಟ್ ಮಾಡಿದಂತಾಗಿ ಇನ್ನಷ್ಟು ಇಂತ ಕೆಲಸಗಳಿಂದಾಗಿ ನಾನು ಕೆಲವು ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದಲ್ಲ!

ಮತ್ತೆ ನರಸಿಂಹನನ್ನು ತೆಗೆದುಹಾಕಿದರೆ........ ಮೊದಲೇ ನನಗೆ ಬೀಟು ಹುಡುಗರ ಕೊರತೆಯಿರುವುದರಿಂದ ಮುಂದೆ ನನಗೆ ಈ ದಿನಪತ್ರಿಕೆ ವಿತರಣೆ ಕೆಲಸ ಇನ್ನಷ್ಟು ತೊಂದರೆಗೊಳಗಾಗುವುದು ಖಂಡಿತ.

ಈಗೇನು ಮಾಡುವುದು ? ತಲೆನೋವು ಶುರುವಾಯಿತು.

ಆ ನರಸಿಂಹ ವಾಪಸು ಬರಲಿ..... ಮುಂದೇನಾಗುತ್ತದೊ ನೋಡೋಣ ಎಂದುಕೊಂಡು ಸುಮ್ಮನಾದೆ. ನನ್ನ ಇನ್ನೊಬ್ಬ ಹುಡುಗ ಮಾದೇಶನನ್ನು ಕರೆದು ನಡೆದ ವಿಷಯವನ್ನು ವಿವರಿಸಿ, "ಅವನು ಬಂದ ತಕ್ಷಣ ನಿನ್ನ ಜೊತೆ ಕಳುಹಿಸುತ್ತೇನೆ. ಆ ಕಷ್ಟಮರ್ ಮನೆಗೆ ಕರೆದು ಹೋಗು ಎಂದು ಹೇಳಿ ಅವನ ಕೈಗೆ ನನ್ನ ಸ್ಕೂಟಿಯ ಕೀ ಕೊಟ್ಟೆ.

ಆಗೋ ಬಂದ ನರಸಿಂಹ. ನನ್ನ ಕಣ್ಣು ನೇರವಾಗಿ ಅವನ ಪಾದದ ಕಡೆಗೆ........ಸಂಶಯವೇ ಇಲ್ಲ..........ಕಷ್ಟಮರ್ ಹೇಳಿದಂತೆ ಬ್ರೌನ್ ಕಲರಿನ ಹೊಸ ಚಪ್ಪಲಿ ಇವನ ಕಾಲಿನಲ್ಲೇ ಇದೆ!!.

ಈ ವಿಚಾರದಲ್ಲಿ ಹಾವು ಸಾಯಬಾರದು ಕೋಲು ಮುರಿಯಬಾರದು. ಅಂದರೆ ನನಗೆ ಗಿರಾಕಿಯೂ ಉಳಿಯಬೇಕು, ಈ ಬೀಟ್ ಹಾಕುವ ನರಸಿಂಹನನ್ನು ಉಳಿಸಿಕೊಳ್ಳಬೇಕಲ್ಲ ? ಏನು ಮಾಡೋದು ಕೊನೆಗೊಂದು ಐಡಿಯಾ ಹೊಳೆಯಿತು. ಮೊದಲು ಸರಳವಾಗಿ ಮಾತಾಡಿಸಬೇಕು.

"ಲೋ ನರಸಿಂಹ ಎಲ್ಲ ಸರಿಯಾಗಿ ಮುಗಿಯಿತೇನೊ " ಇದು ನನ್ನ ಪ್ರತಿನಿತ್ಯದ ಮಾತು.

"ಹೂಂ.. ಸಾರ್......" ನರಸಿಂಹನದೂ ಕೂಡ ನಿತ್ಯದ ಉತ್ತರ.

ಈಗ ನೇರ ಬಾಣ ಬಿಡಬೇಕು ಅಂದುಕೊಂಡು,

"ನೋಡು ನರಸಿಂಹ ನಿನ್ನ ಮೇಲೊಂದು ಕಂಪ್ಲೆಂಟು ಬಂದಿದೆ. ನೀನು ಗಿರಾಕಿಯ ಮನೆಯಿಂದ ಚಪ್ಪಲಿ ಹಾಕ್ಕೋಂಡು[ಕದ್ದು ಅಂತ ಹೇಳಲಾಗದೆ] ಬಂದಿದ್ದೀಯ ಅಂತ ಫೋನ್ ಮಾಡಿದ್ರೂ, ಅದಕ್ಕೆ ನೀನು ಅವರ ಮನೆಗೆ ಇವನ ಜೊತೆ ಮತ್ತೊಮ್ಮೆ ಹೋಗಿ "ನನಗೇನು ಗೊತ್ತಿಲ್ಲ ಎಂದು ಹೇಳಿಬಿಡು ಹೋಗು" ಅವನಿಗೆ ಮಾತನಾಡಲು ಅವಕಾಶ ಕೊಡದೆ ಒಂದೇ ಉಸುರಿಗೆ ಹೇಳಿದೆ.

"ಸಾರ್..... ನಾನು......ಇದು.....ನಾನು ಹೊಸದು ಹೋದ ವಾರ ತಗೊಂಡೆ ಸಾರ್....೪೦೦ ರೂಪಾಯಿ...." ಬಾಣ ಗುರಿ ಮುಟ್ಟಿತ್ತು.

" ಸರಿನಪ್ಪ ನೀನು ತಗೊಂಡಿಲ್ಲವೆಂದ ಮೇಲೆ ನಿನಗ್ಯಾಕೆ ಚಿಂತೆ, ಹೋಗು ದೈರ್ಯವಾಗಿ ನಾನು ಅಂತವನಲ್ಲ ಎಂದು ಹೇಳೀ ಬಾ" ಎಂದು ಅವನು ಮರುಮಾತಾಡಲು ಅವಕಾಶ ಕೊಡದೆ ಮತ್ತೊಬ್ಬ ಹುಡುಗ ಮಾದೇಶನ ಜೊತೆ ಕಳುಹಿಸಿದ್ದೆ.

ಗಿರಾಕಿ ಬಾಗಿಲಲ್ಲಿ ಕಾಯುತ್ತಿದ್ದ. ನರಸಿಂಹನನ್ನು ನೋಡಿದ ಕೂಡಲೇ

"ಹೆಚ್ಚು ಮಾತಾಡದೆ ಕಾಲಲ್ಲಿರುವ ನಮ್ಮ ಚಪ್ಪಲಿ ಬಿಟ್ಟು ಹೋಗು"

ಈ ಹುಡುಗ "ಇಲ್ಲಾ ಸಾರ್, ನಾನು ಹೋದ ವಾರ.............." ಮಾತಾಡಲೆತ್ನಿಸಿದ.

"ಸುಮ್ಮನೆ ಬಿಟ್ಟು ಹೋಗು, ಇಲ್ಲದಿದ್ದಲ್ಲಿ ಪೋಲಿಸ್‌ಗೆ ಕಂಪ್ಲೆಂಟ್ ಕೊಡಬೇಕಾಗುತ್ತೆ."

ನರಸಿಂಹ ಮರುಮಾತಾಡಲಾಗದೆ ಆ ಹೊಸ ಚಪ್ಪಲಿಯನ್ನು ಬಿಟ್ಟು ಬರಿಕಾಲಲ್ಲಿ ವಾಪಸ್ ನನ್ನ ಬಳಿ ಬಂದ.

"ಸಾರ್ ಏನ್ ಸಾರ್ ಬೆಳಿಗ್ಗೆನೇ ಇದು ತಲೆನೋವು, ನಾನು ಮನೆಗೆ ಹೋದರೆ ಚಪ್ಪಲಿ ಎಲ್ಲಿ ಅಂತ ನಮ್ಮನೆಯಲ್ಲಿ ಕೇಳಿ ಬೈಯ್ತಾರಲ್ಲಾ " ?

ತನ್ನ ತಪ್ಪನ್ನು ಮುಚ್ಚಿಹಾಕಲು ನರಸಿಂಹನ ಪ್ರಯತ್ನ.

"ನೋಡು ನರಸಿಂಹ ನೀನು ಬೆಳಿಗ್ಗೆ ಎದ್ದಾಗ ಯಾರ ಮುಖ ನೋಡಿದ್ಯೋ ಗೊತ್ತಿಲ್ಲ. ಇದು ಇಷ್ಟಕ್ಕೆ ಮುಗಿಯಿತಲ್ಲ ಅಂತ ಖುಷಿಪಡು. ಆ ಕಸ್ಟಮರು ಒಳ್ಳೆಯವನು. ಅದಕ್ಕೆ ಸುಮ್ಮನೆ ಕಳುಹಿಸಿದ. ಬೇರೆಯವನಾಗಿದ್ದರೆ ಪೋಲಿಸ್........ಕಂಪ್ಲೆಂಟು..........ನನ್ನ ಮಾತು ಮುಂದುವರಿಸುತ್ತಾ ಅವನ ಮುಖ ನೋಡಿದೆ.

ಮುಖದಲ್ಲಿ ಭಯದ ಸೂಚನೆಗಳು ಆವರಿಸುತ್ತಿದ್ದವು.

" ಹೋಗಲಿ ಬಿಡು. ತಗೋ ಈ ೩೦ ರೂಪಾಯಿ. ಮನೆಗೆ ಹೋಗುತ್ತಾ ದಾರಿಯಲ್ಲಿರುವ ಆಂಗಡಿಯಲ್ಲಿ ಹವಾಯಿ ಚಪ್ಪಲಿ ತಗೋ ಸದ್ಯಕ್ಕೆ. ಮುಂದಿನ ತಿಂಗಳ ಸಂಬಳಕ್ಕೆ ಮತ್ತೆ ಅಂತದ್ದೇ ತಗೊಳ್ಳುವಿಯಂತೆ....."

ಅವನು ಮಾತಾಡಲು ಅವಕಾಶ ನೀಡದೆ ಸಮಾಧಾನ ಮಾಡುವ ರೀತಿಯಲ್ಲಿ ತಿಪ್ಪೆ ಸಾರಿಸಿದೆ. ಮರು ಮಾತಾಡದೆ ಅವನು ಹೊರಟು ಹೋದ.

"ಶಿವು ಥ್ಯಾಂಕ್ಸ್ ಕಣ್ರೀ..... ನನ್ನ ಹೊಸ ಚಪ್ಪಲಿ ಹೋಯ್ತು ಅಂದುಕೊಂಡಿದ್ದೆ. ವಾಪಸ್ ಸಿಕ್ಕಿತಲ್ಲ ಅಷ್ಟೇ ಸಾಕು. ಇಂಥ ಹುಡುಗರ ಬಗ್ಗೆ ನೀವು ತುಂಬಾ ಹುಷಾರಾಗಿರಬೇಕು" ಕಷ್ಟಮರ್ ಸಂತೋಷ್‌ರವರಿಂದ ಮತ್ತೆ ಫೋನು.

"ಹೌದು ಸಾರ್, ನೋಡಿ ಹುಡುಗರು ಎಂಥ ಕೆಲಸಗಳನ್ನು ಮಾಡಿಬಿಡ್ತಾರೆ, ಇದು ಗೊತ್ತಾದರೂ ನಾವು ಅವರನ್ನು ಈ ಪೇಪರ್ ಕೆಲಸದಿಂದ ತೆಗೆದುಹಾಕೊಕ್ಕಾಗಲ್ಲ.....ಏಕೆಂದರೆ ಬೇರೆ ಹುಡುಗರು ತಕ್ಷಣ ಸಿಗುವುದಿಲ್ಲವಲ್ಲ ಸಾರ್, ನಮಗೆ ತುಂಬಾ ಲೇಬರ್ ಪ್ರಾಬ್ಲಂ ಇದೆ"

"ಸರಿ ಶಿವು ಆಯ್ತು" ಆತ ಫೋನಿಟ್ಟ.

ನನಗೆ ಈಗ ಸಮಾಧಾನವಾಗಿತ್ತು. ಆ ಕಷ್ಟಮರು ಉಳಿದುಕೊಂಡ. ಈ ಹುಡುಗನನ್ನು ಸದ್ಯಕ್ಕೆ ಉಳಿಸಿಕೊಂಡಂತೆ ಆಯ್ತು. ಆದರೂ ಈ ಹುಡುಗನನ್ನು ನಂಬುವಂತಿಲ್ಲ. ನಾಳೆಯಿಂದಲೇ ಹೊಸ ಹುಡುಗನನ್ನು ಹುಡುಕಬೇಕು. ಸಿಕ್ಕಿದ ಮೇಲೆ ಇವನನ್ನು ತೆಗೆದುಹಾಕಿದರಾಯಿತು ಎಂದುಕೊಂಡೆ.

ಮರುದಿನ ಮತ್ತೆ ಎಂದಿನಂತೆ ಸೈಕಲ್ಲೇರಿ ಬಂದ ನರಸಿಂಹ ತನ್ನ ಪೇಪರ್ ಬೀಟನ್ನು ತೆಗೆದುಕೊಂಡು ಹೋದ. ನನ್ನ ಮತ್ತು ಮಾದೇಶನ ಕಣ್ಣುಗಳು ಮಾತ್ರ ಆ ಸಮಯದಲ್ಲಿ ನರಸಿಂಹನ ಕಾಲಿನ ಕಡೆ ನೆಟ್ಟಿದ್ದವು. ಅವನು ಚಪ್ಪಲಿ ಹಾಕಿರಲಿಲ್ಲ. ಅವನು ಹೋದ ಮೇಲೆ ನಾವಿಬ್ಬರು ಮುಸಿಮುಸಿ ನಕ್ಕಿದ್ದವು. ಬೀಟ್ ಮುಗಿಸಿ ಬಂದ ನರಸಿಂಹ ಅದೇ ಮನೆಯ ಬಾಗಿಲಲ್ಲಿ ಬಿಟ್ಟಿದ್ದ ತನ್ನ ಹಳೇ ಚಪ್ಪಲಿ ಹಾಕಿಕೊಂಡು ಬಂದಿದ್ದನ್ನು ನೋಡಿ ನಾನು ಮಾದೇಶನಿಗೆ ಕಣ್ಸನ್ನೆ ಮಾಡಿದೆ. ಅದನ್ನು ಗಮನಿಸಿದ ಮಾದೇಶ "ನಾನೊಬ್ಬ ಕಳ್ಳನೂ ನಾನೊಬ್ಬ ಸುಳ್ಳನೂ ಬಲುಮೋಸಗಾರನು ಸರಿಯೇನು " ಎಂದು ಜೋರಾಗಿ ಹಾಡು ಹೇಳಲಾರಂಭಿಸಿದ.

ಆಗೂ ಹೀಗೂ ಒಂದು ತಿಂಗಳು ಕಳೆಯಿತು. ಹೊಸ ಹುಡುಗ ಆನಂದನನ್ನು ಆ ಬೀಟಿಗೆ ಕಳುಹಿಸಿ ನರಸಿಂಹನನ್ನು ಮನೆಗೆ ಕಳುಹಿಸಿದ್ದೆ.

ಒಂದು ವಾರದ ನಂತರ ಆದೇ ಕಷ್ಟಮರ್ ಸಂತೋಷ್‌ರವರಿಂದ ಫೋನ್ ಬಂತು.

" ಹಲೋ ಶಿವು, ಹೊಸ ಹುಡುಗ ಬಂದಿದ್ದಾನೆ. ಇವನು ಹೇಗೆ? ಅವನ ತರಾನಾ ಎಲ್ಲಾ ಬೇರೆ ತರಾನ...." ?

ಯಾಕ್ ಸಾರ್ ಏನಾದ್ರು ಮತ್ತೆ ಅದೇ ತರ ಇವನು ಏನಾದ್ರು........." ನನಗೆ ಮತ್ತೆ ದಿಗಿಲು ಶುರುವಾಗುತ್ತಿತ್ತು. ಆಷ್ಟರಲ್ಲಿ

"ಇನ್ನು ಹಾಗೇನು ಹಾಗಿಲ್ಲ. ಸುಮ್ಮನೆ ಕೇಳಿದೆ.. ಆಷ್ಟೇ.."

ಸಾರ್, ನೀವೊಂದು ಕೆಲ್ಸ ಮಾಡಿ, ಮತ್ತೊಂದು ಜೊತೆ ಹೊಸದಾದ ಚಪ್ಪಲಿಯನ್ನೋ ಶೂಗಳನ್ನೋ ಬಾಗಿಲ ಹೊರಗಿಟ್ಟು ನೋಡಿ " ಎಂದು ನಕ್ಕಿದ್ದೆ.
ನನ್ನ ಮಾತು ಕೇಳಿ ಸಂತೋಷ್ ಕೂಡ ಜೋರಾಗಿ ನಕ್ಕಿದ್ದರು.

Saturday, December 6, 2008

ಮುಂಜಾನೆ ಸಂತೆಯಲ್ಲೊಬ್ಬ ಹಿರಿಯಜ್ಜ.

ಹಿರಿಯಜ್ಜ
ಏ ತಾತ ನಿಂಗೇನ್ ಬೇರೆ ಕೆಲಸ ಇಲ್ವ? ಹೋಗ್, ಆಮೇಲೆ ಬಾ, ಎಂದು ಅಲ್ಲಿ ಸುರೇಶ ಜೋರಾಗಿ ಕೂಗಿ ಹೇಳುತ್ತಿದ್ದಾಗ, ನನಗೆ ಗೊತ್ತಾಯಿತು. ಅವನು ಯಾರ ಮೇಲೆ ಕೂಗಾಡುತ್ತಿದ್ದಾನೆಂದು.


ಸುಮಾರು ೭೦ ದಾಟಿರಬಹುದು ಆ ಹಿರಿಯಜ್ಜನಿಗೆ. ಒಂದು ದೊಡ್ಡ ಗೋಣಿಚೀಲದಲ್ಲಿ ರದ್ದಿ ಪೇಪರ್, ಪ್ಲಾಸ್ಟಿಕ್ ದಾರ, ಮಾಮೂಲಿ ಗೋಣಿ ದಾರ, ಬಂಡಲ್ಲಾಗಿ ಬರುವ ಪತ್ರಿಕೆಗಳ ಸುತ್ತ ಹಾಕಿರುವ ಪ್ಲಾಸ್ಟಿಕ್ ಪೇಪರ್ ಎಲ್ಲವನ್ನು ತುಂಬಿಸಿಕೊಳ್ಳುವಾಗ ಯಾರಾದರೂ ಆತನಿಗೆ ಖಚಿತವಾಗಿ ಹೀಗೆ ಬೈಯ್ಯುತ್ತಾರೆ.


ಆ ಹಿರಿಯಜ್ಜ ಅವನೆಲ್ಲಾ ತೆಗೆದುಕೊಂಡು ಹೋಗುತ್ತಾನೆಂದು ಬೈಯ್ಯುವುದಿಲ್ಲ. ಪತ್ರಿಕಾ ವಿತರಕರು ಕೆಲಸ ಮಾಡುವಾಗ ಈ ಹಿರಿಯಜ್ಜ ಅವರ ಬಳಿ ಇದ್ದ ದಾರ ಪೇಪರ್ ಇತ್ಯಾದಿಗಳಿಗೆ ಕೈ ಹಾಕಿದಾಗ ಅವರಿಗೆ ತಕ್ಷಣ ಕೋಪ ಬರುತ್ತದೆ. ಅದಲ್ಲದೇ ಅವರಿಗೆ ಹುಡುಗರಿಂದ ತೊಂದರೆಯುಂಟಾದರೂ ಆ ಸಿಟ್ಟನ್ನು ಈತನ ಮೇಲೆ ಪ್ರದರ್ಶಿಸುತ್ತಾರೆ.


ಈ ಹಿರಿಯಜ್ಜ ಅದಕ್ಕೆ ಏನು ಪ್ರತಿಕ್ರಿಯೆ ನೀಡದೆ, ದೊಡ್ಡ ನಾಯಿಯೊಂದು ತನ್ನ ಬೌಂಡರಿಯೊಳಗೆ ಬೇರೊಂದು ವಯಸ್ಸಾದ ನಾಯಿಯನ್ನು ಕಂಡು ಗುರುಗುಟ್ಟಿದಾಗ ಈ ವಯಸ್ಸಾದ ನಾಯಿ ಹೆದರಿ ಬಾಲಮುದುರಿಕೊಂಡು ಹಿಂದೆ ಸರಿಯುವಂತೆ ಹಿಂದಕ್ಕೋಗುತ್ತಾನೆ ಆತ.


ಮೊದಲಿಗೆ ಅವನ ಜೊತೆ ಅವನಷ್ಟೇ ವಯಸ್ಸಾದ ಹೆಂಡತಿಯು ಇದ್ದಳು. ಹಗಲು ಹೊತ್ತು ಎಲ್ಲಿಯೂ ಕಾಣದ ಆ ಹಿರಿಯಜ್ಜ ಮುಂಜಾನೆ ನಾಲ್ಕು ಗಂಟೆಗೆ ನಮ್ಮ ದಿನಪತ್ರಿಕಾ ವಿತರಣ ವಲಯದೊಳಗೆ ಹಾಜರಿರುತ್ತಾನೆ. ಸುಮಾರು ೧೦ ವರ್ಷಗಳಿಂದ ನಾನು ಆತನನ್ನು ನೋಡುತ್ತಿದ್ದೇನೆ. ಇದುವರೆಗೂ ಒಂದು ಪದವು ಆತನ ಬಾಯಿಂದ ಹೊರಬಿದ್ದಿಲ್ಲ.


ಅವನಿಗೆ ಮಾತಾಡಲು ಬರುವುದಿಲ್ಲವೋ, ಮಾತು ಬಂದರೂ ಮಾತಾಡಲು ಅವನಿಗೆ ಇಷ್ಟವಿಲ್ಲವೋ, ಅಥವಾ ನಮ್ಮ ಭಾಷೆ ಬರುವುದಿಲ್ಲವೋ ಒಂದು ತಿಳಿಯಲಾಗಿಲ್ಲ. ನಮ್ಮ ಈ ಕೆಲಸಗಳ ನಡುವೆ ಖುಷಿ, ತಮಾಷೆ, ಕೋಪ, ಜಗಳ ಗೊಂದಲ, ಹರಟೆಗಳೆಲ್ಲಾ ನಮ್ಮ ಮುಖಗಳಲ್ಲಿ ಹೊರಹೊಮ್ಮುತ್ತಿದ್ದರೂ, ಅದನ್ನೆಲ್ಲಾ ಆತ ನೋಡಿದರೂ ಯಾವುದೇ ಪ್ರತಿಕ್ರಿಯೆ ಆತನ ಮುಖದಲ್ಲಿ ವ್ಯಕ್ತವಾಗುವುದಿಲ್ಲ.


ನಾನೇನಾದರೂ ಬೈಯ್ದಾಗ ಅಥವಾ ಮಳೆಬಂದು ನಮಗೇ ಬೇಕೆಂದು ಆತ ತುಂಬಿಕೊಂಡ ರದ್ದಿ, ದಾರ ಇತ್ಯಾದಿಗಳನೆಲ್ಲಾ ಕಿತ್ತುಕೊಂಡಾಗ ಅವನ ಹೆಂಡತಿ ಮಾತ್ರ ಪ್ರತಿಕ್ರಿಯಿಸುತ್ತಿದ್ದಳು. ಅವಳಿಗೂ ಮಾತು ಬರುವುದಿಲ್ಲವೇನೋ. ಏಕೆಂದರೇ ಅವಳು ಕೂಡ ಇಷ್ಟು ದಿನಗಳಲ್ಲಿ ಒಂದು ಮಾತು ಆಡಿರಲಿಲ್ಲ. ಕೇವಲ ಕೂಗಾಟ ಕಿರುಚಾಟವಷ್ಟೇ. ಇವರಿಬ್ಬರಿಗೂ ಫುಟ್ ಪಾತ್ ಮೇಲೆ ಜೀವನ. ಮಳೆ, ಚಳಿ, ಗಾಳಿ, ಬಿಸಿಲು ಎಲ್ಲಾ ಸಮಯದಲ್ಲೂ ಇವರದು ಮೂಕ ಪ್ರೀತಿ. ಸಂಸಾರ.


ಕೆಲವು ದಿನಗಳ ಹಿಂದೆ ಈ ಅಜ್ಜನ ಹೆಂಡತಿ ಕಾಣಲಿಲ್ಲ. ಬಹುಶಃ ಸತ್ತುಹೋಗಿರಬಹುದು. ಆತ ತನ್ನ ಜೊತೆ ಹೆಂಡತಿ ಇದ್ದಾಗ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸದೆ ಶೂನ್ಯ ಭಾವದಲ್ಲಿ ಇದ್ದನೋ, ತನ್ನ ಹೆಂಡತಿ ಸತ್ತ ಮರುದಿನವೂ ಆದೇ ಮುಖ ಭಾವ. ನಮ್ಮಿಂದ ಬೈಸಿಕೊಳ್ಳುವುದು, ಬಾಲ ಸುಟ್ಟ ನಾಯಿಯಂತೆ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು ನಡೆದೇ ಇತ್ತು.


ನಮ್ಮ ಸ್ವಸ್ತಿಕ್ ವೃತ್ತದ ಬಳಿ ಒಂದು ದೊಡ್ಡ ಕಟ್ಟಡ ಕಟ್ಟುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವವರೆಲ್ಲಾ ದೂರದ ಬಿಹಾರಿನಿಂದ ಬಂದವರು. ಅದರ ಪಕ್ಕದಲ್ಲೇ ನಮ್ಮ ಡಿಸ್ಟ್ರಿಬ್ಯೂಶನ್ ಸೆಂಟರ್ ಇದೆ. ಆ ಕಟ್ಟಡದಲ್ಲಿ ಕೆಲಸ ಮಾಡುವವನೊಬ್ಬ ನಮ್ಮ ಪತ್ರಿಕಾ ವಲಯದೊಳಗೆ ಕಾಣಿಸಿಕೊಂಡ. ಹಗಲುಹೊತ್ತಿನಲ್ಲಿ ಆ ಕಟ್ಟಡ ಕೆಲಸ ಮಾಡುವಾಗ ಯಾವ ತರದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಆದರೆ ಬೆಳಗಿನ ಆ ಸಮಯದಲ್ಲಿ ಒಂದು ಜುಬ್ಬ ಹಾಗೂ ಬರ್ಮುಡ, ಜೇಬಿನಲ್ಲೊಂದು ಮೊಬೈಲು, ಅದಕ್ಕೆ ತಗುಲಿಸಿದ ಇಯರ್ ಫೋನನ್ನು ಕಿವಿಗಿಟ್ಟುಕೊಂಡಿದ್ದ.


ದಿನನಿತ್ಯ ಇಂಥ ನೂರಾರು ಜನರು ಅಲ್ಲಿ ಓಡಾಡುತ್ತಾರೆ, ಪೇಪರ್ ಕೊಳ್ಳಲು ಬರುತ್ತಾರೆ, ಹಾಗೂ ಎಫ಼್ ಎಮ್ ರೇಡಿಯೊ ಕೇಳುತ್ತಾ ವಾಕಿಂಗ್ ಮಾಡುತ್ತಾರೆ ಅಂದುಕೊಳ್ಳುತ್ತೇವೆ. ಅದರಿಂದ ನಾವ್ಯಾರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.


ಆದರೆ ನಮ್ಮ ಊಹೆಯೆಲ್ಲಾ ತಪ್ಪಾಗಿ, ಆತನ ಕೈಯಲ್ಲಿ ಒಂದು ಚಿಕ್ಕ ಗೋಣಿ ಚೀಲ ಹಿಡಿದುಕೊಂಡು ಈ ಹಿರಿಯಜ್ಜನಿಗೆ ಪ್ರತಿಸ್ಪರ್ಧಿಯಾಗಿ ರದ್ದಿ, ದಾರ ಎಲ್ಲಾ ತುಂಬಿಕೊಳ್ಳಲಾರಂಭಿಸಿದ. ಮಧ್ಯ ವಯಸ್ಕನಿರಬಹುದು. ದಪ್ಪಗಿದ್ದ. ಹೊಟ್ಟೆ ಸ್ವಲ್ಪ ಜಾಸ್ತಿಯಾಗೇ ಇತ್ತು. ಈ ಬಿಹಾರಿ[ನನ್ನ ಗೆಳೆಯ ಆ ಕಟ್ಟಡದ ಕೆಲಸ ಮಾಡುವವರನ್ನು ವಿಚಾರಿಸಿದಾಗ ಅವರು ಬಿಹಾರದಿಂದ ಬಂದವರೆಂದು ಹೇಳಿದ್ದರು] ಆ ಹಿರಿಯಜ್ಜನ ಹಾಗೆ ಆತುರ ಪಡದೆ ನಾವೆಲ್ಲಾ ನಮ್ಮ ಜಾಗಬಿಟ್ಟು ಎದ್ದಮೇಲೆ ನಾವು ಉಳಿಸಿಬಿಟ್ಟ ದಾರ ಪ್ಲಾಸ್ಟಿಕ್ ಪೇಪರ್, ರದ್ದಿ ಕಾಗದವನ್ನೆಲ್ಲಾ ತನ್ನ ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ನಾವೆಲ್ಲರೂ ಅಲ್ಲಿಂದ ಜಾಗ ಕಾಲಿ ಮಾಡುವವರೆಗೂ ಆತ ಯಾವುದೇ ಚಿಂತೆಯಿಲ್ಲದೇ ಎಫ್ ಎಮ್ ಕೇಳುತ್ತಾ ಓಡಾಡುತ್ತಿದ್ದ.


ಬೆಳಗಿನ ರದ್ದಿ ಪೇಪರಿನಿಂದಲೇ ತನ್ನ ಜೀವನ ಸಾಗಿಸುತ್ತಿದ್ದ ಹಿರಿಯಜ್ಜನಿಗೆ ಈ ಬಿಹಾರಿ ನುಂಗಲಾರದ ತುತ್ತಾಗಿದ್ದ. ಏನು ಮಾಡುವುದು? ಆ ತಾತ ಪ್ರತಿಭಟಿಸುತ್ತಾನ ಎಂದುಕೊಂಡರೆ ೧೦ ವರ್ಷದಿಂದ ಒಂದೂ ಮಾತಾಡದವನು, ತನ್ನ ಹೆಂಡತಿ ಸತ್ತ ಮರುದಿನವೂ ಏನೊಂದೂ ಭಾವನೆಯನ್ನು ವ್ಯಕ್ತಪಡಿಸದವನು, ಇನ್ನು ನಿಜಕ್ಕೂ ಪ್ರತಿಭಟಿಸುತ್ತಾನಾ? ಸಾಧ್ಯವೇ ಇಲ್ಲ.


ನಾನು ಇದನ್ನು ಸೂಕ್ಷ್ಮವಾಗಿ ಗಮನಿಸಿದರೂ ಕೇಳುವುದು ಹೇಗೆ? ಮೊದಲಾದರೆ ಈ ಅಜ್ಜ ಹತ್ತಿರ ಬಂದರೂ ಸಾಕು ಕಾರಣವಿಲ್ಲದೇ ಬೈಯ್ಯುತ್ತಿದ್ದ ನಾವೆಲ್ಲಾ ಈಗ ಆ ಬಿಹಾರಿಬಾಬು ರದ್ದಿ ದಾರವೆಲ್ಲಾ ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಕೂಡ ಅವನನ್ನು ಕೇಳಲಿಲ್ಲವೇಕೆ.? ಅವನ ದೇಹಾಕಾರಕ್ಕೆ ಹೆದರಿದೆವೊ? ಇಲ್ಲಾ ಅವನ ಮೊಬೈಲು ಬಟ್ಟೆಗಳ ಔಟ್ ಲುಕ್ ನೋಡಿ ಬೆರಗಾಗಿ ಏನು ಮಾತಾಡದಂತಾದೆವೋ? ಒಟ್ಟಿನಲ್ಲಿ ಯಾರು ಈ ವಿಚಾರವಾಗಿ ಯೋಚಿಸುತ್ತಿರಲಿಲ್ಲ. ಕೊನೆಗೊಂದು ದಿನ ನಾನೆ ಕೇಳಿ ಬಿಡಬೇಕೆಂದುಕೊಂಡರೂ ಏನೆಂದು ಕೇಳುವುದು? ಕೇಳಿದರೆ ಅವನ ಪ್ರತಿಕ್ರಿಯೆ ಏನು? ನಾವು ಹಿರಿಯಜ್ಜನ ಪರವಾಗಿ ಮಾತನಾಡಿದರೆ ಅವನೇನು ಹೇಳಬಹುದು? ಹೀಗೆ ನನ್ನೆಲ್ಲಾ ಕೆಲಸಗಳ ಮಧ್ಯೆ ಈ ವಿಚಾರ ಪ್ರತಿದಿನ ಗೊಂದಲದಲ್ಲಿತ್ತು.


ಈ ಮಧ್ಯೆ ನರೇಂದ್ರ ಎನ್ನುವ ನನ್ನ ವೃತ್ತಿ ಭಾಂದವನಿಗೆ ಯಾವುದೋ ಸರ್ಕಾರಿ ಕಛೇರಿಗೆ ಸುಮಾರು ೭೦ ವಿವಿಧ ದಿನಪತ್ರಿಕೆಗಳನ್ನು ಸರಬರಾಜು ಮಾಡುವ ಅವಕಾಶ ಸಿಕ್ಕಿತಂತೆ. ಅದರೆ ಒಂದು ಷರತ್ತು ಏನೆಂದರೆ ಆಷ್ಟು ಪೇಪರುಗಳನ್ನು ಜೋಡಿಸಿ ಅದರ ಸುತ್ತಾ ಮತ್ತೊಂದು ಪ್ಯಾಕಿಂಗ್ ಪೇಪರ್ ಹಾಕಿ, ದಾರವನ್ನು ಅದರ ಸುತ್ತಾ ಕಟ್ಟಿ ಬಂಡಲ್ಲು ಮಾಡಿ ಕಳುಹಿಸಬೇಕಿತ್ತು.


ಅವನಿಗೆ ಹೊಸ ಆರ್ಡರ್ ಸಿಕ್ಕಿತೆಂಬ ಸಂತೋಷ ಒಂದು ಕಡೆಯಾದರೆ, ಈ ರೀತಿ ಪ್ರತಿದಿನ ಬಂಡಲ್ ಕಟ್ಟಲು ದೊಡ್ಡ ಪೇಪರ್ ಎಲ್ಲಿಂದ ತರೋದು ಎನ್ನುವ ಚಿಂತೆ ಮತ್ತೊಂದು ಕಡೆ. ಆಗ ಅವನ ಕಣ್ಣಿಗೆ ಬಿತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೂ ತರಂಗ ವಾರಪತ್ರಿಕೆಗಳ ಪ್ಯಾಕಿಂಗ್ ಪೇಪರುಗಳು. ಸಾಕಷ್ಟು ದೊಡ್ಡದಾಗಿರುತ್ತಿದ್ದವು. ಆವುಗಳನ್ನು ಬಿಚ್ಚಿ ಪತ್ರಿಕೆಗಳನ್ನು ಜೋಡಿಸಿದ ಮೇಲೆ ಆ ದೊಡ್ಡ ಪ್ಯಾಕಿಂಗ್ ಪೇಪರುಗಳನ್ನು ನೆಲಕ್ಕೆ ಹಾಸಿ ಅದರ ಮೇಲೆ ಕುಳಿತುಬಿಡುತ್ತಿದ್ದರು ಅದರ ವಿತರಕರು.


ಅವರ ಕೆಲಸವೆಲ್ಲಾ ಮುಗಿದಮೇಲೆ ಅವರು ಮತ್ತೆ ಅಲ್ಲಿಂದ ಎದ್ದೇಳುವ ಹೊತ್ತಿಗೆ ಅಲ್ಲಿಗೆ ಅಜ್ಜ ಮತ್ತು ಬಿಹಾರಿ ಇಬ್ಬರೂ ಹಾಜರಾಗಿಬಿಡುತ್ತಿದ್ದರು. ಇದೊಂದೆ ಅಲ್ಲ ಎಲ್ಲಾ ಪತ್ರಿಕೆಗಳ ಬಂಡಲ್ಲುಗಳನ್ನು ಬಿಚ್ಚಿ ದಾರ, ರದ್ದಿ, ಕವರ್ ತೆಗೆಯುವ ಸಮಯಕ್ಕೆ ಸರಿಯಾಗಿ ಹಾಜರಾಗಿಬಿಡುತ್ತಿದ್ದರು. ಯಾವಾಗ ನನ್ನ ಗೆಳೆಯ ನರೇಂದ್ರನ ಕಣ್ಣು ಆ ಪ್ಯಾಕಿಂಗ್ ಪೇಪರ್ ಮೇಲೆ ಬಿತ್ತೋ ಅವನು ನನಗೆ ಪ್ರತಿದಿನ ಕೊಡಬೇಕೆಂದು ಆ ವಿತರಕನಿಗೆ ಮೊದಲೇ ಹೇಳಿಬಿಟ್ಟಿದ್ದ. ಹಾಗೂ ಅದನ್ನು ತರಲು ತನ್ನ ಹುಡುಗರನ್ನು ಕಳುಹಿಸುತ್ತಿದ್ದ.


ನಾವೆಲ್ಲ ನಮ್ಮ ಕೆಲಸ ಮುಗಿದ ಮೇಲೆ ಅಲ್ಲಿನ ಸನ್ನಿವೇಶ ನೋಡಿ ನರೇಂದ್ರನಿಗೆ " ನೀನು ಇವರಿಗೆ ಕಾಂಫಿಟೇಷನ್ನ " ಅಂತ ರೇಗಿಸುತ್ತಿದ್ದೆವು.


ಒಮ್ಮೆ ನರೇಂದ್ರನೇ ಆ ಪ್ಯಾಕಿಂಗ್ ಪೇಪರ್ ತೆಗೆದುಕೊಳ್ಳುತ್ತಿದ್ದಾಗ ಆ ಬಿಹಾರಿ ಬಾಬು


"ಸಾರ್ ಅದು ನಿಮಗೆ ಬೇಕಾ" ಅವನ ಮಾತಿನಲ್ಲಿ ವಿನಯತೆ ಇತ್ತು.


"ಹೌದು ನಮಗೆ ಆಫೀಸಿಗೆ ಬಂಡಲ್ ಮಾಡಲು ಬೇಕು"


ನರೇಂದ್ರನ ಮಾತಿನಲ್ಲಿ ಸ್ವಲ್ಪ ಗತ್ತು ಇತ್ತು. ಯಾಕೆಂದರೆ ಈ ನಮ್ಮ ಬೆಳಗಿನ ಕೆಲಸದಲ್ಲಿ ಹೊರಗಿನವನು ಯಾರೊ ಒಬ್ವ ಬಂದು ನಮಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟಿದರೂ ನಮ್ಮ ಹಕ್ಕುಗಳನ್ನೂ ಯಾರೋ ಚ್ಯುತಿಗೊಳಿಸುತ್ತಿದ್ದಾರೆನ್ನುವಂತೆ ಭಾವಿಸಿ ಅದರ ಪ್ರತಿಭಟನೆಯನ್ನು ಈ ರೀತಿ ಗತ್ತಿನಿಂದ ಮಾತಾಡುವುವದರ ಮೂಲಕ ವ್ಯಕ್ತಪಡಿಸಿದ್ದನು.


"ಸರಿ ತಗೊಳ್ಳಿ ಸಾರ್" ಎಂದು ಮತ್ತಷ್ಟು ವಿನಯದಿಂದ ಹೇಳಿ ಪಕ್ಕದಲ್ಲಿದ್ದ ಚಿಕ್ಕ ಚಿಕ್ಕ ವೇಷ್ಟ್ ಪೇಪರ್ ತೋರಿಸಿ "ಇದೂ ಬೇಕಾಗುತ್ತಾ ಸಾರ್" ಎಂದ. ಅವನ ವಿನಯತೆ ನೋಡಿ ನರೇಂದ್ರನ ಗತ್ತು ಮತ್ತಷ್ಟು ಹೆಚ್ಚಾಗಿ ಅವನೆಡೆಗೆ ತಿರಸ್ಕಾರದಿಂದ "ಬೇಡ ತಗೊಳ್ಳಿ' ಎಂದ.


ಆತ ನರೇಂದ್ರನಿಗೆ ಬೇಡದ ವೇಷ್ಟು ಪೇಪರುಗಳನ್ನು ತನ್ನ ಗೋಣಿಚೀಲದಲ್ಲಿ ತುಂಬಿಕೊಂಡ. ಹೀಗೆ ಅವನ ಹುಡುಗರು ಪ್ರತಿದಿನ ಅವರಿಗೆ ಬೇಕಾದ ದೊಡ್ದ ಪ್ಯಾಕಿಂಗ್ ಪೇಪರುಗಳನ್ನು ತೆಗೆದುಕೊಂಡ ನಂತರ, ಉಳಿದ ರದ್ದಿ ಪೇಪರ್, ದಾರ, ಪ್ಲಾಸ್ಟಿಕ್ ಎಲ್ಲವನ್ನು ಆ ಬಿಹಾರಿಬಾಬು ತುಂಬಿಕೊಳ್ಳುತ್ತಿದ್ದ. ಇದನೆಲ್ಲಾ ದೂರದಿಂದ ನಿಂತು ನೋಡುತ್ತಿದ್ದ ಹಿರಿಯಜ್ಜ ಅಸಹಾಯಕತೆಯಿಂದ.


ಪ್ರತಿದಿನ ಇದನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ ಹೆಚ್ಚಾಗಿ ಕೊನೆಗೊಂದು ದಿನ ಕೇಳಿಯೇ ಬಿಟ್ಟೆ. ರೀ ನೀವು ಬಿಹಾರದಿಂದ ಬಂದು ಇಲ್ಲಿ ಈ ಬಿಲ್ಡಿಂಗಿನಲ್ಲಿ ಕೂಲಿ ಕೆಲಸ ಮಾಡುತ್ತೀರ ನಿಮಗೆ ಕನ್ನಡ ಚೆನ್ನಾಗೆ ಬರುತ್ತಲ್ರೀ!


ನನ್ನ ಮಾತಿಗೆ " ಹೌದು ಸಾರ್ ನಾನು ಬೆಂಗಳೂರಿಗೆ ಬಂದು ಮೂರು ವರ್ಷ ಆಯ್ತು. ಇಲ್ಲಿ ಸೆಟಲ್ ಆದ ಮೇಲೆ ಕನ್ನಡ ಕಲೀಬೇಕಲ್ವ ಸಾರ್?" ಅವನೇ ನನಗೆ ಮರು ಪ್ರಶ್ನೆ ಹಾಕಿದ.


ಅಲ್ಲ ರೀ ನಿಮಗ್ಯಾಕ್ರೀ ಇದೆಲ್ಲಾ ಆ ತಾತ ಬಂದು ರದ್ಧಿ ತಗೊಂಡು ಹೋಗಿ ಮಾರಿ ಜೀವನ ಮಾಡುತ್ತಿದ್ದ. ನೀವು ಅ ಮುದುಕನ ಹೊಟ್ಟೆಯ ಮೇಲೆ ಹೊಡೆದಾಗಲ್ಲವೇನ್ರೀ?" ಇಲ್ಲಾ ಸಾರ್ ನಾನೆಲ್ಲಿ ಹಾಗೆ ಮಾಡಿದೆ, ಬೆಳಗಿನ ಹೊತ್ತು ಸುಮ್ಮನಿರಬೇಕಲ್ಲ ಅಂತ ಈ ರೀತಿ ಇದೆಲ್ಲಾ ಆರಿಸಿ ಹೋಗಿ ಖರ್ಚಿಗೆ ಕಾಸು ಮಾಡಿಕೊಳ್ತೀನಿ. ಬಿಲ್ಡಿಂಗಲ್ಲಿ ಮಾಡೊ ಕೆಲಸದ ಸಂಪಾದನೆ ಎನಕ್ಕೂ ಸಾಲಲ್ಲ ಸಾರ್. ಮತ್ತೆ ನಾನೇ ಎಲ್ಲಾನು ತಗೊಂಡು ಹೋಗಲ್ಲ ಸಾರ್, ಆ ಮುದುಕನಿಗೂ ಬಿಡ್ತೀನಿ ನೋಡಿ, ನಾನು ಆ ಕಡೆ ಹೋಗೊಲ್ಲ ಅಲ್ಲಿರೋದನೆಲ್ಲಾ ಅವನೇ ತುಂಬಿಕೊಳ್ತಾನೆ ನೋಡಿ"


ಅವನ ಮಾತಿಗೆ ನಾನು ಏನು ಹೇಳದಾದೆ.


ಅನಂತರ ನನ್ನ ಬಳಿ ನರೇಂದ್ರ ಬಂದು "ನೋಡೋ ಎಲ್ಲೆಲ್ಲಿಂದನೋ ಬರುತ್ತಾರೆ ಇಲ್ಲಿ ಎಲ್ಲಾ ಕೆಲಸ ಮಾಡುತ್ತಾರೆ ಜೀವನ ಮಾಡ್ತಾರೆ, ಅವರಿಗೆ ಇಂಥ ಕೆಲಸ ಅಂತ ಕೆಲಸ ಅಂತ ಅಂದುಕೊಳ್ಳದೆ ಕಣ್ಣಿಗೊತ್ತಿಕೊಂಡು ಮಾಡ್ತಾರೆ, ನಂತರ ಒಳ್ಳೇ ಬಟ್ಟೆ ಹಾಕಿ ಮೊಬೈಲು ಇಟ್ಟುಕೊಂಡು ಎಫ್ ಎಮ್ ಕೇಳುತ್ತಾ ಸೋಕಿ ಮಾಡಿದ್ರೂ ಈ ರದ್ದಿ ಪೇಪರ್ ಅಯ್ತರಲ್ರೀ, ನಾವು ಇದ್ದೀವಿ ನೋಡು ಕನ್ನಡದವರು ಎಲ್ಲಿಗೂ ಹೋಗಲ್ಲ. ಇಲ್ಲೇ ಇರಬೇಕಂತೀವಿ, ನಮಗೆ ಇಂಥ ಕೆಲಸಾನೆ ಬೇಕಂತೀವಿ. ನಮಗೆ ಮೈ ಬಗ್ಗಲ್ಲ ನೋಡು" ಅಂದಿದ್ದ.


ಕೆಲವು ದಿನಗಳ ನಂತರ ಅಲ್ಲಿ ಕಟ್ಟುತ್ತಿದ್ದ ಬಿಲ್ಡ್ಂಗ್ ಕೆಲಸ ಮುಗಿದು ನಂತರ ಆ ಬಿಹಾರಿ ಕಾಣಲಿಲ್ಲ. ಆತ ಮತ್ಯಾವ ಬಿಲ್ಡಿಂಗ್ ಕೆಲಸ ಹುಡುಕಿ ಹೊರ್‍ಅಟನೊ. ಆದಾದ ಒಂದು ವಾರದಲ್ಲೇ ನರೇಂದ್ರ ದಿನಪತ್ರಿಕೆಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದ ಕಛೇರಿಯ ಕೆಲವು ಕಮೀಷನರುಗಳು ಬೇರೆ ಬೇರೆ ಕಡೆ ವರ್ಗವಾಗಿ ಹೋದರಂತೆ.


ಇದೇ ಸಮಯವೆಂದು ಅವನು ಅಲ್ಲಿಗೆ ಕಳುಹಿಸುವ ಪತ್ರಿಕೆಗಳನ್ನು ಪ್ಯಾಕಿಂಗ್ ಪೇಪರ್ ಹಾಕದೇ ಕೇವಲ ದಾರವನ್ನು ಮಾತ್ರ ಕಟ್ಟಿ ಕಳುಹಿಸುವ ಅಬ್ಯಾಸ ಮಾಡಿದ್ದ. ಮತ್ತು ಕಛೇರಿಗೆ ವರ್ಗವಾಗಿ ಬಂದ ಹೊಸ ಸಿಪಾಯಿಗಳು, ಗುಮಾಸ್ತರೆಲ್ಲಾ ಮೊದಲಿನಿಂದಲೂ ಇದೇ ವ್ಯವಸ್ಥೆ ಇತ್ತೇನೋ ಎಂದು ಅವರಿಗೂ ಅನ್ನಿಸಿರಬೇಕು. ಅವರು ಏನು ಕೇಳದೇ ಸುಮ್ಮನಾದರು. ಮುಂದೆ ಅವನಿಗೆ ಆ ರದ್ದಿ ಪೇಪರ್ ಕಡೆಗೆ ಹೋಗುವ ಪ್ರಮೇಯವೇ ಬರಲಿಲ್ಲ.


ನರೇಂದ್ರ ಹಾಗೂ ಬಿಹಾರಿಯ ಪ್ರತಿದಿನದ ರದ್ದಿ ಪೇಪರಿನ ಆಟವನ್ನು ದಿನವೂ ನೋಡುತ್ತಾ ನಿಸ್ಸಾಹಾಯಕನಾಗಿ ಹೋಗಿದ್ದ ಹಿರಿಯಜ್ಜನಿಗೆ ಮುಂದೊಂದು ದಿನ ಆ ಬಿಹಾರಿಯೂ ಕಾಣದಾಗಿ, ನರೇಂದ್ರನಿಗೂ ಆ ಪ್ಯಾಕಿಂಗ್ ಪೇಪರ್ ಬೇಡವಾಗಿ ಆ ಕಡೆ ಸುಳಿಯದಾದಾಗ ಮತ್ತೆ ಹಿರಿಯಜ್ಜನಿಗೆ ಹುಲ್ಲುಗಾವಲು ಅವನದೇ, ಅದನ್ನು ಮೇಯುವ ಕುದುರೆಯೂ ಅವನದೇ ಅನ್ನುವಂತಾಯಿತು.


ಇಂಥ ಆಟಗಳನ್ನೆಲ್ಲಾ ನೋಡಿಯೂ ಆ ಹಿರಿಯಜ್ಜನ ಕಣ್ಣುಗಳಲ್ಲಿನ ನಿರ್ಲಿಪ್ತತೆ, ವಿಷಾದ, ಮುಖದ ಕೆನ್ನೆ ಮೇಲಿನ ಅನುಭವದ ಸುಕ್ಕುಗಳು ಎಲ್ಲಾ ಜೀವನಾನುಭವವನ್ನು ಅನುಭವಿಸಿ, ಜೀವನವೆಂದರೆ ಇಷ್ಟೇ. ಇಂಥ ಜೀವನಕ್ಕೆ ಇವರು ಯಾಕೆ ಹೀಗೆ ಹಾರಾಡುತ್ತಾರೆ ಎನ್ನುವ ಶೂನ್ಯತೆಯ ನೋಟ ನಾವು ಚಿಕ್ಕ ಚಿಕ್ಕ ವಿಷಯಗಳಿಗೂ ಆ ಸಮಯದಲ್ಲಿ ಅತಿರಥ ಮಹಾರಥರಂತೆ ಪ್ರದರ್ಶಿಸುವ ಪ್ರತಿಭೆಗಳನ್ನು ಆಣಕಿಸುತ್ತಿತ್ತು.

ಲೇಖನ : ಶಿವು.