Saturday, December 6, 2008

ಮುಂಜಾನೆ ಸಂತೆಯಲ್ಲೊಬ್ಬ ಹಿರಿಯಜ್ಜ.

ಹಿರಿಯಜ್ಜ
ಏ ತಾತ ನಿಂಗೇನ್ ಬೇರೆ ಕೆಲಸ ಇಲ್ವ? ಹೋಗ್, ಆಮೇಲೆ ಬಾ, ಎಂದು ಅಲ್ಲಿ ಸುರೇಶ ಜೋರಾಗಿ ಕೂಗಿ ಹೇಳುತ್ತಿದ್ದಾಗ, ನನಗೆ ಗೊತ್ತಾಯಿತು. ಅವನು ಯಾರ ಮೇಲೆ ಕೂಗಾಡುತ್ತಿದ್ದಾನೆಂದು.


ಸುಮಾರು ೭೦ ದಾಟಿರಬಹುದು ಆ ಹಿರಿಯಜ್ಜನಿಗೆ. ಒಂದು ದೊಡ್ಡ ಗೋಣಿಚೀಲದಲ್ಲಿ ರದ್ದಿ ಪೇಪರ್, ಪ್ಲಾಸ್ಟಿಕ್ ದಾರ, ಮಾಮೂಲಿ ಗೋಣಿ ದಾರ, ಬಂಡಲ್ಲಾಗಿ ಬರುವ ಪತ್ರಿಕೆಗಳ ಸುತ್ತ ಹಾಕಿರುವ ಪ್ಲಾಸ್ಟಿಕ್ ಪೇಪರ್ ಎಲ್ಲವನ್ನು ತುಂಬಿಸಿಕೊಳ್ಳುವಾಗ ಯಾರಾದರೂ ಆತನಿಗೆ ಖಚಿತವಾಗಿ ಹೀಗೆ ಬೈಯ್ಯುತ್ತಾರೆ.


ಆ ಹಿರಿಯಜ್ಜ ಅವನೆಲ್ಲಾ ತೆಗೆದುಕೊಂಡು ಹೋಗುತ್ತಾನೆಂದು ಬೈಯ್ಯುವುದಿಲ್ಲ. ಪತ್ರಿಕಾ ವಿತರಕರು ಕೆಲಸ ಮಾಡುವಾಗ ಈ ಹಿರಿಯಜ್ಜ ಅವರ ಬಳಿ ಇದ್ದ ದಾರ ಪೇಪರ್ ಇತ್ಯಾದಿಗಳಿಗೆ ಕೈ ಹಾಕಿದಾಗ ಅವರಿಗೆ ತಕ್ಷಣ ಕೋಪ ಬರುತ್ತದೆ. ಅದಲ್ಲದೇ ಅವರಿಗೆ ಹುಡುಗರಿಂದ ತೊಂದರೆಯುಂಟಾದರೂ ಆ ಸಿಟ್ಟನ್ನು ಈತನ ಮೇಲೆ ಪ್ರದರ್ಶಿಸುತ್ತಾರೆ.


ಈ ಹಿರಿಯಜ್ಜ ಅದಕ್ಕೆ ಏನು ಪ್ರತಿಕ್ರಿಯೆ ನೀಡದೆ, ದೊಡ್ಡ ನಾಯಿಯೊಂದು ತನ್ನ ಬೌಂಡರಿಯೊಳಗೆ ಬೇರೊಂದು ವಯಸ್ಸಾದ ನಾಯಿಯನ್ನು ಕಂಡು ಗುರುಗುಟ್ಟಿದಾಗ ಈ ವಯಸ್ಸಾದ ನಾಯಿ ಹೆದರಿ ಬಾಲಮುದುರಿಕೊಂಡು ಹಿಂದೆ ಸರಿಯುವಂತೆ ಹಿಂದಕ್ಕೋಗುತ್ತಾನೆ ಆತ.


ಮೊದಲಿಗೆ ಅವನ ಜೊತೆ ಅವನಷ್ಟೇ ವಯಸ್ಸಾದ ಹೆಂಡತಿಯು ಇದ್ದಳು. ಹಗಲು ಹೊತ್ತು ಎಲ್ಲಿಯೂ ಕಾಣದ ಆ ಹಿರಿಯಜ್ಜ ಮುಂಜಾನೆ ನಾಲ್ಕು ಗಂಟೆಗೆ ನಮ್ಮ ದಿನಪತ್ರಿಕಾ ವಿತರಣ ವಲಯದೊಳಗೆ ಹಾಜರಿರುತ್ತಾನೆ. ಸುಮಾರು ೧೦ ವರ್ಷಗಳಿಂದ ನಾನು ಆತನನ್ನು ನೋಡುತ್ತಿದ್ದೇನೆ. ಇದುವರೆಗೂ ಒಂದು ಪದವು ಆತನ ಬಾಯಿಂದ ಹೊರಬಿದ್ದಿಲ್ಲ.


ಅವನಿಗೆ ಮಾತಾಡಲು ಬರುವುದಿಲ್ಲವೋ, ಮಾತು ಬಂದರೂ ಮಾತಾಡಲು ಅವನಿಗೆ ಇಷ್ಟವಿಲ್ಲವೋ, ಅಥವಾ ನಮ್ಮ ಭಾಷೆ ಬರುವುದಿಲ್ಲವೋ ಒಂದು ತಿಳಿಯಲಾಗಿಲ್ಲ. ನಮ್ಮ ಈ ಕೆಲಸಗಳ ನಡುವೆ ಖುಷಿ, ತಮಾಷೆ, ಕೋಪ, ಜಗಳ ಗೊಂದಲ, ಹರಟೆಗಳೆಲ್ಲಾ ನಮ್ಮ ಮುಖಗಳಲ್ಲಿ ಹೊರಹೊಮ್ಮುತ್ತಿದ್ದರೂ, ಅದನ್ನೆಲ್ಲಾ ಆತ ನೋಡಿದರೂ ಯಾವುದೇ ಪ್ರತಿಕ್ರಿಯೆ ಆತನ ಮುಖದಲ್ಲಿ ವ್ಯಕ್ತವಾಗುವುದಿಲ್ಲ.


ನಾನೇನಾದರೂ ಬೈಯ್ದಾಗ ಅಥವಾ ಮಳೆಬಂದು ನಮಗೇ ಬೇಕೆಂದು ಆತ ತುಂಬಿಕೊಂಡ ರದ್ದಿ, ದಾರ ಇತ್ಯಾದಿಗಳನೆಲ್ಲಾ ಕಿತ್ತುಕೊಂಡಾಗ ಅವನ ಹೆಂಡತಿ ಮಾತ್ರ ಪ್ರತಿಕ್ರಿಯಿಸುತ್ತಿದ್ದಳು. ಅವಳಿಗೂ ಮಾತು ಬರುವುದಿಲ್ಲವೇನೋ. ಏಕೆಂದರೇ ಅವಳು ಕೂಡ ಇಷ್ಟು ದಿನಗಳಲ್ಲಿ ಒಂದು ಮಾತು ಆಡಿರಲಿಲ್ಲ. ಕೇವಲ ಕೂಗಾಟ ಕಿರುಚಾಟವಷ್ಟೇ. ಇವರಿಬ್ಬರಿಗೂ ಫುಟ್ ಪಾತ್ ಮೇಲೆ ಜೀವನ. ಮಳೆ, ಚಳಿ, ಗಾಳಿ, ಬಿಸಿಲು ಎಲ್ಲಾ ಸಮಯದಲ್ಲೂ ಇವರದು ಮೂಕ ಪ್ರೀತಿ. ಸಂಸಾರ.


ಕೆಲವು ದಿನಗಳ ಹಿಂದೆ ಈ ಅಜ್ಜನ ಹೆಂಡತಿ ಕಾಣಲಿಲ್ಲ. ಬಹುಶಃ ಸತ್ತುಹೋಗಿರಬಹುದು. ಆತ ತನ್ನ ಜೊತೆ ಹೆಂಡತಿ ಇದ್ದಾಗ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸದೆ ಶೂನ್ಯ ಭಾವದಲ್ಲಿ ಇದ್ದನೋ, ತನ್ನ ಹೆಂಡತಿ ಸತ್ತ ಮರುದಿನವೂ ಆದೇ ಮುಖ ಭಾವ. ನಮ್ಮಿಂದ ಬೈಸಿಕೊಳ್ಳುವುದು, ಬಾಲ ಸುಟ್ಟ ನಾಯಿಯಂತೆ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು ನಡೆದೇ ಇತ್ತು.


ನಮ್ಮ ಸ್ವಸ್ತಿಕ್ ವೃತ್ತದ ಬಳಿ ಒಂದು ದೊಡ್ಡ ಕಟ್ಟಡ ಕಟ್ಟುತ್ತಿದ್ದಾರೆ. ಅಲ್ಲಿ ಕೆಲಸ ಮಾಡುವವರೆಲ್ಲಾ ದೂರದ ಬಿಹಾರಿನಿಂದ ಬಂದವರು. ಅದರ ಪಕ್ಕದಲ್ಲೇ ನಮ್ಮ ಡಿಸ್ಟ್ರಿಬ್ಯೂಶನ್ ಸೆಂಟರ್ ಇದೆ. ಆ ಕಟ್ಟಡದಲ್ಲಿ ಕೆಲಸ ಮಾಡುವವನೊಬ್ಬ ನಮ್ಮ ಪತ್ರಿಕಾ ವಲಯದೊಳಗೆ ಕಾಣಿಸಿಕೊಂಡ. ಹಗಲುಹೊತ್ತಿನಲ್ಲಿ ಆ ಕಟ್ಟಡ ಕೆಲಸ ಮಾಡುವಾಗ ಯಾವ ತರದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಆದರೆ ಬೆಳಗಿನ ಆ ಸಮಯದಲ್ಲಿ ಒಂದು ಜುಬ್ಬ ಹಾಗೂ ಬರ್ಮುಡ, ಜೇಬಿನಲ್ಲೊಂದು ಮೊಬೈಲು, ಅದಕ್ಕೆ ತಗುಲಿಸಿದ ಇಯರ್ ಫೋನನ್ನು ಕಿವಿಗಿಟ್ಟುಕೊಂಡಿದ್ದ.


ದಿನನಿತ್ಯ ಇಂಥ ನೂರಾರು ಜನರು ಅಲ್ಲಿ ಓಡಾಡುತ್ತಾರೆ, ಪೇಪರ್ ಕೊಳ್ಳಲು ಬರುತ್ತಾರೆ, ಹಾಗೂ ಎಫ಼್ ಎಮ್ ರೇಡಿಯೊ ಕೇಳುತ್ತಾ ವಾಕಿಂಗ್ ಮಾಡುತ್ತಾರೆ ಅಂದುಕೊಳ್ಳುತ್ತೇವೆ. ಅದರಿಂದ ನಾವ್ಯಾರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.


ಆದರೆ ನಮ್ಮ ಊಹೆಯೆಲ್ಲಾ ತಪ್ಪಾಗಿ, ಆತನ ಕೈಯಲ್ಲಿ ಒಂದು ಚಿಕ್ಕ ಗೋಣಿ ಚೀಲ ಹಿಡಿದುಕೊಂಡು ಈ ಹಿರಿಯಜ್ಜನಿಗೆ ಪ್ರತಿಸ್ಪರ್ಧಿಯಾಗಿ ರದ್ದಿ, ದಾರ ಎಲ್ಲಾ ತುಂಬಿಕೊಳ್ಳಲಾರಂಭಿಸಿದ. ಮಧ್ಯ ವಯಸ್ಕನಿರಬಹುದು. ದಪ್ಪಗಿದ್ದ. ಹೊಟ್ಟೆ ಸ್ವಲ್ಪ ಜಾಸ್ತಿಯಾಗೇ ಇತ್ತು. ಈ ಬಿಹಾರಿ[ನನ್ನ ಗೆಳೆಯ ಆ ಕಟ್ಟಡದ ಕೆಲಸ ಮಾಡುವವರನ್ನು ವಿಚಾರಿಸಿದಾಗ ಅವರು ಬಿಹಾರದಿಂದ ಬಂದವರೆಂದು ಹೇಳಿದ್ದರು] ಆ ಹಿರಿಯಜ್ಜನ ಹಾಗೆ ಆತುರ ಪಡದೆ ನಾವೆಲ್ಲಾ ನಮ್ಮ ಜಾಗಬಿಟ್ಟು ಎದ್ದಮೇಲೆ ನಾವು ಉಳಿಸಿಬಿಟ್ಟ ದಾರ ಪ್ಲಾಸ್ಟಿಕ್ ಪೇಪರ್, ರದ್ದಿ ಕಾಗದವನ್ನೆಲ್ಲಾ ತನ್ನ ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ನಾವೆಲ್ಲರೂ ಅಲ್ಲಿಂದ ಜಾಗ ಕಾಲಿ ಮಾಡುವವರೆಗೂ ಆತ ಯಾವುದೇ ಚಿಂತೆಯಿಲ್ಲದೇ ಎಫ್ ಎಮ್ ಕೇಳುತ್ತಾ ಓಡಾಡುತ್ತಿದ್ದ.


ಬೆಳಗಿನ ರದ್ದಿ ಪೇಪರಿನಿಂದಲೇ ತನ್ನ ಜೀವನ ಸಾಗಿಸುತ್ತಿದ್ದ ಹಿರಿಯಜ್ಜನಿಗೆ ಈ ಬಿಹಾರಿ ನುಂಗಲಾರದ ತುತ್ತಾಗಿದ್ದ. ಏನು ಮಾಡುವುದು? ಆ ತಾತ ಪ್ರತಿಭಟಿಸುತ್ತಾನ ಎಂದುಕೊಂಡರೆ ೧೦ ವರ್ಷದಿಂದ ಒಂದೂ ಮಾತಾಡದವನು, ತನ್ನ ಹೆಂಡತಿ ಸತ್ತ ಮರುದಿನವೂ ಏನೊಂದೂ ಭಾವನೆಯನ್ನು ವ್ಯಕ್ತಪಡಿಸದವನು, ಇನ್ನು ನಿಜಕ್ಕೂ ಪ್ರತಿಭಟಿಸುತ್ತಾನಾ? ಸಾಧ್ಯವೇ ಇಲ್ಲ.


ನಾನು ಇದನ್ನು ಸೂಕ್ಷ್ಮವಾಗಿ ಗಮನಿಸಿದರೂ ಕೇಳುವುದು ಹೇಗೆ? ಮೊದಲಾದರೆ ಈ ಅಜ್ಜ ಹತ್ತಿರ ಬಂದರೂ ಸಾಕು ಕಾರಣವಿಲ್ಲದೇ ಬೈಯ್ಯುತ್ತಿದ್ದ ನಾವೆಲ್ಲಾ ಈಗ ಆ ಬಿಹಾರಿಬಾಬು ರದ್ದಿ ದಾರವೆಲ್ಲಾ ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಕೂಡ ಅವನನ್ನು ಕೇಳಲಿಲ್ಲವೇಕೆ.? ಅವನ ದೇಹಾಕಾರಕ್ಕೆ ಹೆದರಿದೆವೊ? ಇಲ್ಲಾ ಅವನ ಮೊಬೈಲು ಬಟ್ಟೆಗಳ ಔಟ್ ಲುಕ್ ನೋಡಿ ಬೆರಗಾಗಿ ಏನು ಮಾತಾಡದಂತಾದೆವೋ? ಒಟ್ಟಿನಲ್ಲಿ ಯಾರು ಈ ವಿಚಾರವಾಗಿ ಯೋಚಿಸುತ್ತಿರಲಿಲ್ಲ. ಕೊನೆಗೊಂದು ದಿನ ನಾನೆ ಕೇಳಿ ಬಿಡಬೇಕೆಂದುಕೊಂಡರೂ ಏನೆಂದು ಕೇಳುವುದು? ಕೇಳಿದರೆ ಅವನ ಪ್ರತಿಕ್ರಿಯೆ ಏನು? ನಾವು ಹಿರಿಯಜ್ಜನ ಪರವಾಗಿ ಮಾತನಾಡಿದರೆ ಅವನೇನು ಹೇಳಬಹುದು? ಹೀಗೆ ನನ್ನೆಲ್ಲಾ ಕೆಲಸಗಳ ಮಧ್ಯೆ ಈ ವಿಚಾರ ಪ್ರತಿದಿನ ಗೊಂದಲದಲ್ಲಿತ್ತು.


ಈ ಮಧ್ಯೆ ನರೇಂದ್ರ ಎನ್ನುವ ನನ್ನ ವೃತ್ತಿ ಭಾಂದವನಿಗೆ ಯಾವುದೋ ಸರ್ಕಾರಿ ಕಛೇರಿಗೆ ಸುಮಾರು ೭೦ ವಿವಿಧ ದಿನಪತ್ರಿಕೆಗಳನ್ನು ಸರಬರಾಜು ಮಾಡುವ ಅವಕಾಶ ಸಿಕ್ಕಿತಂತೆ. ಅದರೆ ಒಂದು ಷರತ್ತು ಏನೆಂದರೆ ಆಷ್ಟು ಪೇಪರುಗಳನ್ನು ಜೋಡಿಸಿ ಅದರ ಸುತ್ತಾ ಮತ್ತೊಂದು ಪ್ಯಾಕಿಂಗ್ ಪೇಪರ್ ಹಾಕಿ, ದಾರವನ್ನು ಅದರ ಸುತ್ತಾ ಕಟ್ಟಿ ಬಂಡಲ್ಲು ಮಾಡಿ ಕಳುಹಿಸಬೇಕಿತ್ತು.


ಅವನಿಗೆ ಹೊಸ ಆರ್ಡರ್ ಸಿಕ್ಕಿತೆಂಬ ಸಂತೋಷ ಒಂದು ಕಡೆಯಾದರೆ, ಈ ರೀತಿ ಪ್ರತಿದಿನ ಬಂಡಲ್ ಕಟ್ಟಲು ದೊಡ್ಡ ಪೇಪರ್ ಎಲ್ಲಿಂದ ತರೋದು ಎನ್ನುವ ಚಿಂತೆ ಮತ್ತೊಂದು ಕಡೆ. ಆಗ ಅವನ ಕಣ್ಣಿಗೆ ಬಿತ್ತು ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೂ ತರಂಗ ವಾರಪತ್ರಿಕೆಗಳ ಪ್ಯಾಕಿಂಗ್ ಪೇಪರುಗಳು. ಸಾಕಷ್ಟು ದೊಡ್ಡದಾಗಿರುತ್ತಿದ್ದವು. ಆವುಗಳನ್ನು ಬಿಚ್ಚಿ ಪತ್ರಿಕೆಗಳನ್ನು ಜೋಡಿಸಿದ ಮೇಲೆ ಆ ದೊಡ್ಡ ಪ್ಯಾಕಿಂಗ್ ಪೇಪರುಗಳನ್ನು ನೆಲಕ್ಕೆ ಹಾಸಿ ಅದರ ಮೇಲೆ ಕುಳಿತುಬಿಡುತ್ತಿದ್ದರು ಅದರ ವಿತರಕರು.


ಅವರ ಕೆಲಸವೆಲ್ಲಾ ಮುಗಿದಮೇಲೆ ಅವರು ಮತ್ತೆ ಅಲ್ಲಿಂದ ಎದ್ದೇಳುವ ಹೊತ್ತಿಗೆ ಅಲ್ಲಿಗೆ ಅಜ್ಜ ಮತ್ತು ಬಿಹಾರಿ ಇಬ್ಬರೂ ಹಾಜರಾಗಿಬಿಡುತ್ತಿದ್ದರು. ಇದೊಂದೆ ಅಲ್ಲ ಎಲ್ಲಾ ಪತ್ರಿಕೆಗಳ ಬಂಡಲ್ಲುಗಳನ್ನು ಬಿಚ್ಚಿ ದಾರ, ರದ್ದಿ, ಕವರ್ ತೆಗೆಯುವ ಸಮಯಕ್ಕೆ ಸರಿಯಾಗಿ ಹಾಜರಾಗಿಬಿಡುತ್ತಿದ್ದರು. ಯಾವಾಗ ನನ್ನ ಗೆಳೆಯ ನರೇಂದ್ರನ ಕಣ್ಣು ಆ ಪ್ಯಾಕಿಂಗ್ ಪೇಪರ್ ಮೇಲೆ ಬಿತ್ತೋ ಅವನು ನನಗೆ ಪ್ರತಿದಿನ ಕೊಡಬೇಕೆಂದು ಆ ವಿತರಕನಿಗೆ ಮೊದಲೇ ಹೇಳಿಬಿಟ್ಟಿದ್ದ. ಹಾಗೂ ಅದನ್ನು ತರಲು ತನ್ನ ಹುಡುಗರನ್ನು ಕಳುಹಿಸುತ್ತಿದ್ದ.


ನಾವೆಲ್ಲ ನಮ್ಮ ಕೆಲಸ ಮುಗಿದ ಮೇಲೆ ಅಲ್ಲಿನ ಸನ್ನಿವೇಶ ನೋಡಿ ನರೇಂದ್ರನಿಗೆ " ನೀನು ಇವರಿಗೆ ಕಾಂಫಿಟೇಷನ್ನ " ಅಂತ ರೇಗಿಸುತ್ತಿದ್ದೆವು.


ಒಮ್ಮೆ ನರೇಂದ್ರನೇ ಆ ಪ್ಯಾಕಿಂಗ್ ಪೇಪರ್ ತೆಗೆದುಕೊಳ್ಳುತ್ತಿದ್ದಾಗ ಆ ಬಿಹಾರಿ ಬಾಬು


"ಸಾರ್ ಅದು ನಿಮಗೆ ಬೇಕಾ" ಅವನ ಮಾತಿನಲ್ಲಿ ವಿನಯತೆ ಇತ್ತು.


"ಹೌದು ನಮಗೆ ಆಫೀಸಿಗೆ ಬಂಡಲ್ ಮಾಡಲು ಬೇಕು"


ನರೇಂದ್ರನ ಮಾತಿನಲ್ಲಿ ಸ್ವಲ್ಪ ಗತ್ತು ಇತ್ತು. ಯಾಕೆಂದರೆ ಈ ನಮ್ಮ ಬೆಳಗಿನ ಕೆಲಸದಲ್ಲಿ ಹೊರಗಿನವನು ಯಾರೊ ಒಬ್ವ ಬಂದು ನಮಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟಿದರೂ ನಮ್ಮ ಹಕ್ಕುಗಳನ್ನೂ ಯಾರೋ ಚ್ಯುತಿಗೊಳಿಸುತ್ತಿದ್ದಾರೆನ್ನುವಂತೆ ಭಾವಿಸಿ ಅದರ ಪ್ರತಿಭಟನೆಯನ್ನು ಈ ರೀತಿ ಗತ್ತಿನಿಂದ ಮಾತಾಡುವುವದರ ಮೂಲಕ ವ್ಯಕ್ತಪಡಿಸಿದ್ದನು.


"ಸರಿ ತಗೊಳ್ಳಿ ಸಾರ್" ಎಂದು ಮತ್ತಷ್ಟು ವಿನಯದಿಂದ ಹೇಳಿ ಪಕ್ಕದಲ್ಲಿದ್ದ ಚಿಕ್ಕ ಚಿಕ್ಕ ವೇಷ್ಟ್ ಪೇಪರ್ ತೋರಿಸಿ "ಇದೂ ಬೇಕಾಗುತ್ತಾ ಸಾರ್" ಎಂದ. ಅವನ ವಿನಯತೆ ನೋಡಿ ನರೇಂದ್ರನ ಗತ್ತು ಮತ್ತಷ್ಟು ಹೆಚ್ಚಾಗಿ ಅವನೆಡೆಗೆ ತಿರಸ್ಕಾರದಿಂದ "ಬೇಡ ತಗೊಳ್ಳಿ' ಎಂದ.


ಆತ ನರೇಂದ್ರನಿಗೆ ಬೇಡದ ವೇಷ್ಟು ಪೇಪರುಗಳನ್ನು ತನ್ನ ಗೋಣಿಚೀಲದಲ್ಲಿ ತುಂಬಿಕೊಂಡ. ಹೀಗೆ ಅವನ ಹುಡುಗರು ಪ್ರತಿದಿನ ಅವರಿಗೆ ಬೇಕಾದ ದೊಡ್ದ ಪ್ಯಾಕಿಂಗ್ ಪೇಪರುಗಳನ್ನು ತೆಗೆದುಕೊಂಡ ನಂತರ, ಉಳಿದ ರದ್ದಿ ಪೇಪರ್, ದಾರ, ಪ್ಲಾಸ್ಟಿಕ್ ಎಲ್ಲವನ್ನು ಆ ಬಿಹಾರಿಬಾಬು ತುಂಬಿಕೊಳ್ಳುತ್ತಿದ್ದ. ಇದನೆಲ್ಲಾ ದೂರದಿಂದ ನಿಂತು ನೋಡುತ್ತಿದ್ದ ಹಿರಿಯಜ್ಜ ಅಸಹಾಯಕತೆಯಿಂದ.


ಪ್ರತಿದಿನ ಇದನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ ಹೆಚ್ಚಾಗಿ ಕೊನೆಗೊಂದು ದಿನ ಕೇಳಿಯೇ ಬಿಟ್ಟೆ. ರೀ ನೀವು ಬಿಹಾರದಿಂದ ಬಂದು ಇಲ್ಲಿ ಈ ಬಿಲ್ಡಿಂಗಿನಲ್ಲಿ ಕೂಲಿ ಕೆಲಸ ಮಾಡುತ್ತೀರ ನಿಮಗೆ ಕನ್ನಡ ಚೆನ್ನಾಗೆ ಬರುತ್ತಲ್ರೀ!


ನನ್ನ ಮಾತಿಗೆ " ಹೌದು ಸಾರ್ ನಾನು ಬೆಂಗಳೂರಿಗೆ ಬಂದು ಮೂರು ವರ್ಷ ಆಯ್ತು. ಇಲ್ಲಿ ಸೆಟಲ್ ಆದ ಮೇಲೆ ಕನ್ನಡ ಕಲೀಬೇಕಲ್ವ ಸಾರ್?" ಅವನೇ ನನಗೆ ಮರು ಪ್ರಶ್ನೆ ಹಾಕಿದ.


ಅಲ್ಲ ರೀ ನಿಮಗ್ಯಾಕ್ರೀ ಇದೆಲ್ಲಾ ಆ ತಾತ ಬಂದು ರದ್ಧಿ ತಗೊಂಡು ಹೋಗಿ ಮಾರಿ ಜೀವನ ಮಾಡುತ್ತಿದ್ದ. ನೀವು ಅ ಮುದುಕನ ಹೊಟ್ಟೆಯ ಮೇಲೆ ಹೊಡೆದಾಗಲ್ಲವೇನ್ರೀ?" ಇಲ್ಲಾ ಸಾರ್ ನಾನೆಲ್ಲಿ ಹಾಗೆ ಮಾಡಿದೆ, ಬೆಳಗಿನ ಹೊತ್ತು ಸುಮ್ಮನಿರಬೇಕಲ್ಲ ಅಂತ ಈ ರೀತಿ ಇದೆಲ್ಲಾ ಆರಿಸಿ ಹೋಗಿ ಖರ್ಚಿಗೆ ಕಾಸು ಮಾಡಿಕೊಳ್ತೀನಿ. ಬಿಲ್ಡಿಂಗಲ್ಲಿ ಮಾಡೊ ಕೆಲಸದ ಸಂಪಾದನೆ ಎನಕ್ಕೂ ಸಾಲಲ್ಲ ಸಾರ್. ಮತ್ತೆ ನಾನೇ ಎಲ್ಲಾನು ತಗೊಂಡು ಹೋಗಲ್ಲ ಸಾರ್, ಆ ಮುದುಕನಿಗೂ ಬಿಡ್ತೀನಿ ನೋಡಿ, ನಾನು ಆ ಕಡೆ ಹೋಗೊಲ್ಲ ಅಲ್ಲಿರೋದನೆಲ್ಲಾ ಅವನೇ ತುಂಬಿಕೊಳ್ತಾನೆ ನೋಡಿ"


ಅವನ ಮಾತಿಗೆ ನಾನು ಏನು ಹೇಳದಾದೆ.


ಅನಂತರ ನನ್ನ ಬಳಿ ನರೇಂದ್ರ ಬಂದು "ನೋಡೋ ಎಲ್ಲೆಲ್ಲಿಂದನೋ ಬರುತ್ತಾರೆ ಇಲ್ಲಿ ಎಲ್ಲಾ ಕೆಲಸ ಮಾಡುತ್ತಾರೆ ಜೀವನ ಮಾಡ್ತಾರೆ, ಅವರಿಗೆ ಇಂಥ ಕೆಲಸ ಅಂತ ಕೆಲಸ ಅಂತ ಅಂದುಕೊಳ್ಳದೆ ಕಣ್ಣಿಗೊತ್ತಿಕೊಂಡು ಮಾಡ್ತಾರೆ, ನಂತರ ಒಳ್ಳೇ ಬಟ್ಟೆ ಹಾಕಿ ಮೊಬೈಲು ಇಟ್ಟುಕೊಂಡು ಎಫ್ ಎಮ್ ಕೇಳುತ್ತಾ ಸೋಕಿ ಮಾಡಿದ್ರೂ ಈ ರದ್ದಿ ಪೇಪರ್ ಅಯ್ತರಲ್ರೀ, ನಾವು ಇದ್ದೀವಿ ನೋಡು ಕನ್ನಡದವರು ಎಲ್ಲಿಗೂ ಹೋಗಲ್ಲ. ಇಲ್ಲೇ ಇರಬೇಕಂತೀವಿ, ನಮಗೆ ಇಂಥ ಕೆಲಸಾನೆ ಬೇಕಂತೀವಿ. ನಮಗೆ ಮೈ ಬಗ್ಗಲ್ಲ ನೋಡು" ಅಂದಿದ್ದ.


ಕೆಲವು ದಿನಗಳ ನಂತರ ಅಲ್ಲಿ ಕಟ್ಟುತ್ತಿದ್ದ ಬಿಲ್ಡ್ಂಗ್ ಕೆಲಸ ಮುಗಿದು ನಂತರ ಆ ಬಿಹಾರಿ ಕಾಣಲಿಲ್ಲ. ಆತ ಮತ್ಯಾವ ಬಿಲ್ಡಿಂಗ್ ಕೆಲಸ ಹುಡುಕಿ ಹೊರ್‍ಅಟನೊ. ಆದಾದ ಒಂದು ವಾರದಲ್ಲೇ ನರೇಂದ್ರ ದಿನಪತ್ರಿಕೆಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದ ಕಛೇರಿಯ ಕೆಲವು ಕಮೀಷನರುಗಳು ಬೇರೆ ಬೇರೆ ಕಡೆ ವರ್ಗವಾಗಿ ಹೋದರಂತೆ.


ಇದೇ ಸಮಯವೆಂದು ಅವನು ಅಲ್ಲಿಗೆ ಕಳುಹಿಸುವ ಪತ್ರಿಕೆಗಳನ್ನು ಪ್ಯಾಕಿಂಗ್ ಪೇಪರ್ ಹಾಕದೇ ಕೇವಲ ದಾರವನ್ನು ಮಾತ್ರ ಕಟ್ಟಿ ಕಳುಹಿಸುವ ಅಬ್ಯಾಸ ಮಾಡಿದ್ದ. ಮತ್ತು ಕಛೇರಿಗೆ ವರ್ಗವಾಗಿ ಬಂದ ಹೊಸ ಸಿಪಾಯಿಗಳು, ಗುಮಾಸ್ತರೆಲ್ಲಾ ಮೊದಲಿನಿಂದಲೂ ಇದೇ ವ್ಯವಸ್ಥೆ ಇತ್ತೇನೋ ಎಂದು ಅವರಿಗೂ ಅನ್ನಿಸಿರಬೇಕು. ಅವರು ಏನು ಕೇಳದೇ ಸುಮ್ಮನಾದರು. ಮುಂದೆ ಅವನಿಗೆ ಆ ರದ್ದಿ ಪೇಪರ್ ಕಡೆಗೆ ಹೋಗುವ ಪ್ರಮೇಯವೇ ಬರಲಿಲ್ಲ.


ನರೇಂದ್ರ ಹಾಗೂ ಬಿಹಾರಿಯ ಪ್ರತಿದಿನದ ರದ್ದಿ ಪೇಪರಿನ ಆಟವನ್ನು ದಿನವೂ ನೋಡುತ್ತಾ ನಿಸ್ಸಾಹಾಯಕನಾಗಿ ಹೋಗಿದ್ದ ಹಿರಿಯಜ್ಜನಿಗೆ ಮುಂದೊಂದು ದಿನ ಆ ಬಿಹಾರಿಯೂ ಕಾಣದಾಗಿ, ನರೇಂದ್ರನಿಗೂ ಆ ಪ್ಯಾಕಿಂಗ್ ಪೇಪರ್ ಬೇಡವಾಗಿ ಆ ಕಡೆ ಸುಳಿಯದಾದಾಗ ಮತ್ತೆ ಹಿರಿಯಜ್ಜನಿಗೆ ಹುಲ್ಲುಗಾವಲು ಅವನದೇ, ಅದನ್ನು ಮೇಯುವ ಕುದುರೆಯೂ ಅವನದೇ ಅನ್ನುವಂತಾಯಿತು.


ಇಂಥ ಆಟಗಳನ್ನೆಲ್ಲಾ ನೋಡಿಯೂ ಆ ಹಿರಿಯಜ್ಜನ ಕಣ್ಣುಗಳಲ್ಲಿನ ನಿರ್ಲಿಪ್ತತೆ, ವಿಷಾದ, ಮುಖದ ಕೆನ್ನೆ ಮೇಲಿನ ಅನುಭವದ ಸುಕ್ಕುಗಳು ಎಲ್ಲಾ ಜೀವನಾನುಭವವನ್ನು ಅನುಭವಿಸಿ, ಜೀವನವೆಂದರೆ ಇಷ್ಟೇ. ಇಂಥ ಜೀವನಕ್ಕೆ ಇವರು ಯಾಕೆ ಹೀಗೆ ಹಾರಾಡುತ್ತಾರೆ ಎನ್ನುವ ಶೂನ್ಯತೆಯ ನೋಟ ನಾವು ಚಿಕ್ಕ ಚಿಕ್ಕ ವಿಷಯಗಳಿಗೂ ಆ ಸಮಯದಲ್ಲಿ ಅತಿರಥ ಮಹಾರಥರಂತೆ ಪ್ರದರ್ಶಿಸುವ ಪ್ರತಿಭೆಗಳನ್ನು ಆಣಕಿಸುತ್ತಿತ್ತು.

ಲೇಖನ : ಶಿವು.

24 comments:

ಚಿತ್ರಾ ಸಂತೋಷ್ said...

ಶಿವಣ್ಣ ಬದುಕು ಅನ್ನೋದು ಇಷ್ಟೇ ಬಿಡಿ. ಆದ್ರೂ ನಾವು ಹೆಣೆದ ಕನಸು, ಕಲ್ಪನೆಗಳ ಸಾಕಾರದಲ್ಲಿ ಅದೇನೋ ಖುಷಿಯಿದೆ ಬಿಡಿ. ಹುಟ್ಟು-ಸಾವಿನ ನಡುವೆ ಕೆಲವರು ಅತಿರಥ-ಮಹಾರಥರು..ಇನ್ನು ಕೆಲವರು ಇದ್ದುದರಲ್ಲೇ ಖುಷಿ ಪಡೋರು...ಇನ್ನು ಕೆಲವರು ಬದುಕಲಷ್ಟೇ ಕಲಿತೋರು.
ಯಾಕೋ ನೆನಪಾಯಿತು ಕೈಲಾಸಂ ಅವರ ಮಾತು "ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ವ್ಯಕ್ತಿಯಾಗಬೇಕು. ಇದರಲ್ಲಿ ಕುಳಿತು ಆಕಾಶ ನೋಡಬೇಕು, ಸೂರ್ಯನನ್ನು ನೋಡಬೇಕು, ಸುತ್ತಲಿನ ಜಗತ್ತನ್ನು ಕಾಣಬೇಕು..!"
-ಚಿತ್ರಾ

shivu.k said...

ಚಿತ್ರಾ ಮರಿ!
ನಿನ್ನ ಕಾಮೆಂಟಿಗೆ ನಾನು ಏನು ಹೇಳಲಿ ! Thanks.

Lakshmi Shashidhar Chaitanya said...

ನಿಜ್ವಾಗ್ಲೂ ಸಂಕಟಾ ಆಯ್ತು ನಂಗೆ ಆ ಹಿರಿಯಜ್ಜನ ಅಸಹಾಯಕತೆ ನೋಡಿ. ಜೀವನ ನಮ್ಮ ಅಹಂಕಾರ ಮತ್ತು ಅದೃಷ್ಟಗಳ ಮೇಲೆ ನಿಂತಿದೆ ಅಲ್ವ ?

Ittigecement said...

ಶಿವು ಸರ್...

ತಮ್ಮ ಫೋಟೊ ಪ್ರಶಸ್ತಿಗಳಿಸಿದ್ದಕ್ಕೆ..ಹ್ರದಯ ಪೂರ್ವಕ "ಅಭಿನಂದನೆಗಳು..."
ಇನ್ನಷ್ಟು..ಮತ್ತಷ್ಟು..ಪ್ರಶಸ್ತಿಗಳು..ತಮ್ಮ ಪರಿಶ್ರಮಕ್ಕೆ..ಬರಲಿ..ಎಂದು ಹಾರೈಸುವೆ...


ಬದುಕಿನಲ್ಲಿ "ಅಸಹಾಯಕತೆ" ಕಲಿಸುವ ಪಾಠವನ್ನು ಯಾವ ಪುಸ್ತಕವೂ..ಶಾಲೆಯಲ್ಲೂ ಸಿಗಲಾರದು..
ಮನಕಲಕುವಂತೆ ಬಣ್ಣಿಸಿದ್ದೀರಿ...
ನಿಮ್ಮ ಫೋಟೊಗಳ ಹಾಗೆ...
ಧನ್ಯವಾದಗಳು...

shivu.k said...

ಲಕ್ಷ್ಮಿ ಮೇಡಮ್, ಪ್ರಕಾಶ್ ಸಾರ್,

ಹಿರಿಯಜ್ಜನ ಸ್ಥಾನದಲ್ಲಿ ನಿಂತು ಆಸಹಾಯಕತೆ ಅನುಭವಿಸಿದಾಗ ನನಗೆ ತೋಚಿದ್ದು ಇದೊಂದೆ. ಬರೆದು ಮನಸ್ಸನ್ನು ಹಗುರಾಗಿಸಿಕೊಳ್ಳೋದು. ನಿಮ್ಮ ಇಂಥ ಅರ್ಥಗರ್ಭಿತ ಪ್ರತಿಕ್ರಿಯೆಗಳಿಂದಲೇ ನನ್ನ ಜವಾಬ್ದಾರಿ ಹೆಚ್ಚಾಗಿದೆ ಅನ್ನಿಸುತ್ತೆ.

ಪ್ರಕಾಶ್ ಸಾರ್,
ನಿಮ್ಮ ಅಭಿನಂದನೆಗೆ ನನ್ನ ಥ್ಯಾಂಕ್ಸ್. ನಿಮ್ಮಂತವರ ಹಾರೈಕೆಗಳಿಂದಲೇ ನಾನು ಈ ರೀತಿ ಜೀವನದಲ್ಲಿ ಹೊಸ ವಿಚಾರಗಳ ಹಿಂದೆ ಬಿದ್ದಿರುವುದು.

sunaath said...

ಶಿವು,
ಮಾನವೀಯತೆಯನ್ನು ನೀವು ಗುರುತಿಸಿ ನಿಮ್ಮ ಲೇಖನಗಳಲ್ಲಿ ವ್ಯಕ್ತ ಪಡಿಸುತ್ತಿದ್ದೀರಿ.
ವಿನೋದವೇ ಇರಲಿ, ಅಸಹಾಯಕತೆಯೇ ಇರಲಿ, ಅದರ ಮೂಲೆಯೊಂದರಲ್ಲಿ ಮಾನವೀಯತೆಯ ಇಣಕನ್ನು ನಿಮ್ಮ ಲೇಖನಗಳು ಒಳಗೊಂಡಿವೆ.
ನಾವೆಲ್ಲರೂ ನಿಮ್ಮ ಲೇಖನಗಳಲ್ಲಿ, ನಿಮ್ಮ ಫೋಟೋಗಳಲ್ಲಿ ನೋಡುವ ಹಾಗೂ ಮೆಚ್ಚುವ ದೊಡ್ಡ ಗುಣ ಇದು.

shivu.k said...

ಸುನಾಥ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಹರೀಶ್ ಕೇರ said...

ಶಿವು , ಅಂತಃಕರಣದ ಚಿತ್ರಣ. ಚೆನ್ನಾಗಿದೆ. ಆದರೆ ಇದು ಹಳೆ ರೈಟಪ್ ಅಲ್ಲವೆ ? ನಾವು ಹೊಸತು ನಿರೀಕ್ಷಿಸುವವರು.
- ಹರೀಶ್ ಕೇರ

ಅಂತರ್ವಾಣಿ said...

ಶಿವು ಅವರೆ,
ತುಂಬಾ ದುಃಖವಾಗುತ್ತಾಯಿದೆ, ಆ ಅಜ್ಜನ ಜೀವನವನ್ನು ಕಲ್ಪಿಸಿಕೊಂಡು..

ಆ ಬಿಹಾರಿಬಾಬು ಯಾವುದು ಕೆಳ ಮಟ್ಟದ ಕೆಲಸ ಅಲ್ಲ ಅಂದುಕೊಂಡು ಮಾಡುತ್ತಾಯಿದ್ದದ್ದು ನನಗೆ ಹಿಡಿಸಿತು.

ಬಾಲು said...

ಅಜ್ಜನ ಸ್ಥಿತಿ ಅಸಹಾಯಕತೆ ನ? ಹಾತಶೆ ನ? ದುರಾದೃಷ್ಟ ನ? ಲೇಖನ ತುಂಬನೆ ಕಾಡೀತು!!!!
ಥ್ಯಾಂಕ್ಸ್ ಶಿವು.

shivu.k said...

ಹರೀಶ್ ಕೇರ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ನೀವು ಹೇಳಿದಂತೆ ಇದು ಹಳೆಯ ಲೇಖನ. ಇದನ್ನು ಪ್ರಾರಂಭದಲ್ಲಿ ಹಾಕಿದ್ದರಿಂದ ಯಾರು ನೋಡಲು ಬಂದಿರಲಿಲ್ಲವಾದ್ದರಿಂದ ಈಗ ಮತ್ತೆ ಹಾಕಿದ್ದೇನೆ. ಹೊಸ ಲೇಖನಗಳು ಸಿದ್ದವಾಗಿವೆ. ನಿಮ್ಮ ನೀರೀಕ್ಷೆ ಹುಸಿಮಾಡುವುದಿಲ್ಲವೆಂದು ಭರವಸೆ ಕೊಡುತ್ತೇನೆ.

ಜಯಶಂಕರ್, ಬಾಲು,
ಪ್ರತಿಕ್ರಿಯಿಸಿದ್ದಕ್ಕೆ thanks.
ಆ ಅಜ್ಜ ಈಗಲೂ ಇದ್ದಾನೆ. ಅದೇ ಪರಿಸ್ಥಿತಿಯಲ್ಲಿ. ನಾವು ನಿತ್ಯ ನೋಡುವುದರಿಂದ ನಮಗೇನು ಅನ್ನಿಸುವುದಿಲ್ಲ. ಮತ್ತು ಈಗ ಅವನಿಗೆ ಸಹಾಯ ಮಾಡುತ್ತೇವೆ.

Harisha - ಹರೀಶ said...

ಸ್ಥಿತಪ್ರಜ್ಞ ಎಂದು ಭಗವದ್ಗೀತೆಯಲ್ಲಿ ಕೃಷ್ಣ ವರ್ಣಿಸಿರುವುದು ಜಗತ್ತಿನ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದೆ ನಿರ್ಲಿಪ್ತರಾಗಿರುವ ಇಂಥವರನ್ನೇ ಇರಬಹುದೇ?

shivu.k said...

ಹರೀಶ್
ನಿಮ್ಮ ಮಾತು ನಿಜ. ಅದರೂ ನಾವು ಎಷ್ಟೆಲ್ಲಾ ತಲೆಕೆಡಿಸಿಕೊಳ್ಳುತ್ತೇವೆ ಅಲ್ವ !
thanks for comment.

Annapoorna Daithota said...

ಬರಹ ಚೆನ್ನಾಗಿದೆ....
ಇಂಥಾ ಬರಹ ಓದಿದಾಗ, ಅಂಥಾ ಅಸಹಾಯ ವ್ಯಕ್ತಿಗಳನ್ನು,
ಸಂಕಟಪಡುವ ಮೂಕಪ್ರಾಣಿಗಳನ್ನು ನೋಡಿದಾಗಲೆಲ್ಲಾ ಮನಕಲಕುತ್ತದೆ.

NilGiri said...

ಶಿವು , ಈ ಲೇಖನವನ್ನು ಮೊದಲು ಓದಿದ್ನಾ ನಾನು? ಆಗ
" ಹಿರಿಯಜ್ಜ"ನ ಫೋಟೋ ಇರಲಿಲ್ಲ ಅನ್ನಿಸುತ್ತೆ! ಅಜ್ಜನಿಗೆ ಈ ಇಳಿವಯಸ್ಸಿನಲ್ಲೂ ದುಡಿದು ತಿನ್ನುವ ಛಲ ನೋಡಿ ಖುಷಿಯಾಯಿತು.

shivu.k said...

ಅನ್ನಪೂರ್ಣ ಮತ್ತು ಗಿರಿಜಾ ಮೇಡಮ್,
ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

ಗಿರಿಜಾ ಮೇಡಮ್,
ಈ ಲೇಖನವನ್ನು ಮೊದಲು ಹಾಕಿದ್ದೆ. ಅದು ಹೆಚ್ಚು ಜನ ಬ್ಲಾಗಿಗರಿಗೆ ತಲುಪಿರಲಿಲ್ಲವಾದ್ದರಿಂದ ಮತ್ತೊಮ್ಮೆ ಫೋಟೋಸಮೇತ ಹಾಕಿದ್ದೇನೆ ಆಷ್ಟೆ. ಇನ್ನು ಮುಂದೆ ಹೊಸ ಲೇಖನಗಳು ಮಾತ್ರ ಬರುತ್ತವೆಂದು ಭರವಸೆ ಕೊಡುತ್ತೇನೆ.

ಸುಧೇಶ್ ಶೆಟ್ಟಿ said...

ನನಗೂ ಈ ಲೇಖನವನ್ನೂ ಹಿ೦ದೊಮ್ಮೆ ಓದಿದ್ದೇನೆ ಅನಿಸಿತ್ತು. ಆದರೆ ಮತ್ತೊಮ್ಮೆ ಚಿತ್ರದ ಜೊತೆಗೆ ಹಾಕಿದುದರಿ೦ದ ಅದರ ಮೌಲ್ಯ ಹೆಚ್ಚಿದೆ ಅನಿಸುತ್ತದೆ.

- ಸುಧೇಶ್

shivu.k said...

ಸುಧೇಶ್,
ಈ ಲೇಖನವನ್ನು ಮೊದಲು ಓದಿದ್ದೀರಿ. ಮತ್ತೆ ಹಾಕಲು ಕಾರಣ ಅದು ಆಗ ಎಲ್ಲರಿಗೂ ತಲುಪಿರಲಿಲ್ಲವಾದ್ದರಿಂದ. ಜೊತೆಗೆ ಫೋಟೊ ಹಾಕಿದರೆ ಮತ್ತಷ್ಟು ಅರ್ಥಪೂರ್ಣವೆನಿಸಬಹುದು ಅನ್ನಿಸಿತು. ಈ ಬ್ಲಾಗಿನ ಬರವಣಿಗೆಯ ಖುಷಿಯೇ ಬೇರೆ. ಮತ್ತೊಂದು ನಿಜ ಘಟನೆಯ ಇಕ್ಕಟ್ಟಿನ ಪರಿಸ್ಥಿತಿಯ ಘಟನೆಯ ಲೇಖನ ಸಿದ್ದವಾಗುತ್ತಿದೆ. ಮುಂದಿನ ಬಾರಿ ಹಾಕುತ್ತೇನೆ. ಆಗಲು ಹೀಗೆ ಬಿಡುವು ಮಾಡಿಕೊಂಡು ಬನ್ನಿ.

shivu.k said...
This comment has been removed by the author.
ಸಂದೀಪ್ ಕಾಮತ್ said...

ಪಾಪ ಅಜ್ಜ:(

Anonymous said...

:(

shivu.k said...

ಸಂದೀಪ್,
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ವೈಶಾಲಿ ಮೇಡಮ್,
ನಿಮ್ಮ ಪ್ರತಿಕ್ರಿಯೆ ನನಗರ್ಥವಾಗಲಿಲ್ಲ.

Vivek's said...

ಮನ ತಟ್ಟುವನ್ತಿತು. ಕನ್ನಡಿಗರ ಅಹಂಬಾವ ಜಾಸ್ತಿನೇ. ಬಹಳ ಚೆನ್ನಾಗಿ ವ್ಯಕ್ತ ಪಡಿಸಿದ್ದೀರ.......

ಧನ್ಯವಾದಗಳು

shobha said...

ಬಹಳ ಚೆನ್ನಾಗಿದೆ ಸಾರ್