Friday, December 26, 2008

ಕರೆಂಟ್ ಷಾಕ್ !!

ಡಿಸೆಂಬರ್ ಮೊದಲ ವಾರ ಬೆಳಗಿನ ಸಮಯ ಚಳಿ ಹೆಚ್ಚು. ಅವತ್ತು ಬೆಳಿಗ್ಗೆ ೯ ಗಂಟೆಯಾದರೂ ಸೂರ್ಯ ಮುಖ ತೋರಿಸಿರಲಿಲ್ಲ. ನಾನಂತೂ ಚಳಿಯಿಂದ ನನ್ನನ್ನು ಕಾಪಾಡಿಕೊಳ್ಳಲು ಸ್ವೆಟರು ಮತ್ತು ಚಳಿ ಟೋಪಿ ಹಾಕಿದ್ದೆ.


ಅದೊಂದು ಆಧುನಿಕ ಸುಂದರ ಆಪಾರ್ಟ್‌ಮೆಂಟು. ಮೂರನೆ ಮಹಡಿಯ ಮಾರ್ವಾಡಿ ಮನೆ. ಕಾಲಿಂಗ್ ಬೆಲ್ ಒತ್ತಿದೆ. ಕಿಟಕಿ ತೆರೆದು


"ಕೌನ್ ಹೈ " ಹೆಣ್ಣಿನ ದ್ವನಿ.


"ಪೇಪರ್ ವಾಲ ಮೇಡಮ್, ನ್ಯೂಸ್ ಪೇಪರ್ ಬಿಲ್ " ಕೇಳಿದೆ.


"ವೇಟ್ ಕರೋ, ಯಜಮಾನ್ ಹಾತಾಹೇ " ಹೇಳಿ ಒಳಗೋದಳು ಆಕೆ.


ಎರಡು ನಿಮಿಷದಲ್ಲಿ ಬಾಗಿಲು ತೆರೆಯಿತು. ಆತನಿಗೆ ಕನ್ನಡ ಬರುತ್ತದೆ. ಬಿಲ್ ಕೈಗೆ ಕೊಟ್ಟೆ. ಅವನು ಎಂದಿನಂತೆ ಒಂದಷ್ಟು ನನ್ನ ಹುಡುಗನ ಮೇಲೆ ಕಂಪ್ಲೆಂಟು ಹೇಳುವುದು, ಪೇಪರ್ ಇಂಥ ದಿನ ಬಂದಿಲ್ಲ ಎನ್ನುವುದು, ಅವನ ಮಾತಿಗೆಲ್ಲಾ "ಸರಿ ಸಾರ್, ಆಯ್ತು ಸಾರ್, ಹೇಳ್ತೀನಿ ಸಾರ್, ನಾಳೆಯಿಂದ ಸರಿಹೋಗತ್ತೆ ಸಾರ್" ನಾನು ಉತ್ತರಿಸಿ ರಾಜಕೀಯದವರ ತರ ಭರವಸೆ ನೀಡುವುದು, ಇದು ಪ್ರತಿ ತಿಂಗಳು ಚಾಲ್ತಿಯಲ್ಲಿರುತ್ತದೆ.


ಈ ವಿಚಾರದಲ್ಲಿ ಕಳೆದ ಐದು ವರ್ಷದಿಂದ ಇಬ್ಬರಲ್ಲೂ ಸ್ವಲ್ಪವೂ ಬದಲಾವಣೆಗಳಾಗಿಲ್ಲ, ಅದೇ ಪರಿಸ್ಥಿತಿ.


ನಮ್ಮಿಬ್ಬರ ನಡುವೆ " ಈ ಸಂಭಾಷಣೆ..........ನಮ್ಮ ಈ ಪ್ರೇಮ ಸಂಭಾಷಣೆ.............." ನಡೆಯುತ್ತಿರುವ ಸಮಯದಲ್ಲಿ ಅವನ ಐದು ವರ್ಷದ ಮಗ ಓಡಿ ಬಂದ.


ಕೈಯಲ್ಲಿ ಎಂಥದೊ ಸಿಗರೇಟ್ ಪ್ಯಾಕಿನ ಆಕಾರದ ಆಟದ ಸಾಮಾನು ಹಿಡಿದಿದ್ದ. ಹುಡುಗ ಮುದ್ದಾಗಿದ್ದ. ಮಾರ್ವಾಡಿ ಅಪ್ಪ ಮಗನನ್ನು ನೋಡಿ,


"ಅಂಕಲ್‌ಗೆ ಗುಡ್ ಮಾರ್ನಿಂಗ್ ಹೇಳು"


"ಹಲೋ ಗುಡ್ ಮಾರ್ನಿಂಗ್ ಆಂಕಲ್"


ಬಾಯಿಂದ ಮುತ್ತುಗಳು ಉದುರಿದಂತೆ ಬಂತು ತೊದಲು ಮಾತುಗಳು.


ನನಗೆ ಖುಷಿಯಾಗಿತ್ತು. ಪರ್ವಾಗಿಲ್ಲ, ಮಕ್ಕಳಿಗೆ ಹೊರಗಿನವರನ್ನು ಕಂಡರೆ ಗೌರವದಿಂದ ಮಾತಾಡಿಸುವುದನ್ನು ಕಲಿಸಿದ್ದಾರಲ್ಲ ಅಂತ.


"ಹಾಯ್ ಪುಟ್ಟ ಗುಡ್ ಮಾರ್ನಿಂಗ್, ಏನು ನಿನ್ನ ಹೆಸರು ? "

ಮಗು ಅಪ್ಪನ ಮುಖ ನೋಡಿತು.


"ಅಂಕಲ್‌ಗೆ ಹೆಸರು ಹೇಳು " ಮಗು ಹೇಳಿತು.


"ಶ್ರೇಯಸ್ ಮರ್ಲೇಚ... "


ತೊದಲು ನುಡಿ ಮುದ್ದಾಗಿ ಬಂತು. ಕೇಳಿ ಖುಷಿಯಾಯಿತು. ಮಗುವಿಗೆ ದೈರ್ಯ ಬಂತೇನೋ ,


"ಅಂಕಲ್ ಚಾಕ್‌ಲೇಟ್ ತಗೊಳ್ಳಿ"


ನನ್ನೆಡೆಗೆ ತನ್ನ ಪುಟ್ಟ ಕೈ ನೀಡಿತು. ಅದರಲ್ಲಿ ಸಿಗರೇಟ್ ಪ್ಯಾಕಿನಂತಿದ್ದ ಬಾಕ್ಸ್‌ನೊಳಗೆ ಉದ್ದದ್ದವಾಗಿ ಚಾಕ್‌ಲೇಟ್‌ಗಳು ಇದ್ದವು.


"ಬೇಡ ಮರಿ ನೀನೇ ತಿನ್ನು ಥ್ಯಾಂಕ್ಸ್"


" ಅಂಕಲ್ ಒಂದೇ ಒಂದು ತಗೊಳ್ಳಿ "


ಅದರ ಪ್ರೀತಿಯ ಮಾತಿಗೆ ಮನಸೋತರು ಮತ್ತೆ ಬೇಡವೆಂದೆ.


ನಮ್ಮಿಬ್ಬರನ್ನು ನೋಡುತ್ತಿದ್ದ ಮಾರ್ವಾಡಿ ನನಗೆ ದಿನಪತ್ರಿಕೆ ಹಣ ಕೊಡುತ್ತಾ,


" ಮಗು ಪಾಪ ಪ್ರೀತಿಯಿಂದ ಕೊಡುತ್ತಿದೆ ತೊಗೊಳ್ಳಿ" ಅಂದ.


ನನಗೆ ಮೊದಲಬಾರಿಗೆ ತುಂಬಾ ಖುಷಿಯಾಗಿತ್ತು. ಇಂಥ ಆಪಾರ್ಟ್‌ಮೆಂಟ್‌ಗಳಲ್ಲಿ ನಮ್ಮಂಥ ಆರ್ಡಿನರಿ ದಿನಪತ್ರಿಕೆಯವರಿಗೆ ಇವರು ಇಷ್ಟೊಂದು ಗೌರವ ಕೊಡುತ್ತಿದ್ದಾರಲ್ಲ! ಮತ್ತು ಮಗುವಿಗೂ ಅದೇ ಸಂಸ್ಕಾರ ಕಲಿಸಿದ್ದಾರೆ......... ಜನರಲ್ಲಿ ಇನ್ನೂ ಒಳ್ಳೆಯತನವಿದೆ ಅಂದುಕೊಂಡೆ.


" ತಗೊಳ್ಳಿ ಮಗು ಕೊಡ್ತಾ ಇದೆ, ಬೇಡ ಅನ್ನಬಾರದು "


ನಾನು ಮಾರ್ವಾಡಿಯ ಮುಖ ನೋಡಿದೆ. ಪ್ರೀತಿ ತುಂಬಿ ತುಳುಕುತ್ತಿದೆ. ಮಗುವಿನ ಕಡೆಗೆ ನೋಡಿದೆ. ಮುಗ್ದತೆಯ ಪ್ರತಿರೂಪವೇ ಆಗಿ ನನ್ನ ಕಡೆಗೆ ಕೈ ಚಾಚಿದೆ.


ಇಷ್ಟೆಲ್ಲಾ ಪ್ರೀತಿ ಗೌರವ ಇಬ್ಬರೂ ತೋರಿಸುತ್ತಿರುವಾಗ ನಾನು ಅದನ್ನು ತೆಗೆದುಕೊಳ್ಳದಿದ್ದಲ್ಲಿ ನನ್ನದೇ ಆಹಾಂಕಾರವೆನಿಸಬಹುದು. ಸರಿ ಆ ಚಾಕಲೇಟ್ ತೆಗೆದುಕೊಳ್ಳೋಣವೆಂದು ಕೈ ಚಾಚಿದೆ ಆಷ್ಟೇ,


ಹೊಡೆಯಿತು ಕರೆಂಟ್ ಷಾಕ್ !!


ಅಂತ ಚಳಿಯಲ್ಲಿ ಒಂದು ಕ್ಷಣ ಮೈಯಲ್ಲಾ ಜುಮ್ಮೆಂದಿತು.


ಮನೆಯಲ್ಲಿ ಗೊತ್ತಿಲ್ಲದೆ ಯಾವುದಾದರೂ ವಿದ್ಯುತ್ ತಂತಿ ಮುಟ್ಟಿದಾಗ ಅಥವಾ ಪ್ಲಗ್‌ಗಳನ್ನು ಮುಟ್ಟಿದಾಗ ಎಲೆಕ್ಟ್ರಿಕ್ ಷಾಕ್ ಆದರೆ ಹೇಗಾಗುತ್ತೋ ಆ ರೀತಿ ಆಗಿತ್ತು ನನ್ನ ಪರಿಸ್ಥಿತಿ.


ವಾಸ್ತವಕ್ಕೆ ಬರವಷ್ಟರಲ್ಲಿ ೫-೬ ಸೆಕೆಂಡುಗಳೇ ಬೇಕಾಯಿತು. ಎದುರಿಗಿದ್ದ ಅಪ್ಪ ಮಗನನ್ನು ನೋಡಿದೆ. ಕೇಕೆ ಹಾಕಿ ಜೋರಾಗಿ ನಗುತ್ತಿದ್ದರು !


" ಡ್ಯಾಡಿ ಎಂಗೆ " ಅಪ್ಪನತ್ತ ಕೈಚಾಚಿದ ಮಗ.


"ಸೂಪರ್ ಬೇಟ " ಅಪ್ಪ ಮಗನ ಪುಟ್ಟ ಕೈ ಕುಲುಕಿದ.

ಅದೊಂದು ರೀತಿಯ ಹೊಸ ಆಟದ ಸಾಮಾನು. ಹಿಂಭಾಗದಿಂದ ಹಿಡಿದುಕೊಂಡು ಹಿಂದಿನಿಂದ ಒಂದೆರಡು ಪೆನ್ಸಿಲ್ ಆಕಾರದ ಚಾಕ್‌ಲೇಟ್‌ಗಳನ್ನು ಮುಂದೆ ತಳ್ಳಿದ ಮೇಲೆ ಆ ಚಾಕ್‌ಲೇಟ್‌ಗಳನ್ನು ತೆಗೆದುಕೊಳ್ಳಲು ಯಾರು ಮುಟ್ಟುತ್ತಾರೋ ಅವರಿಗೆ ಕರೆಂಟ್ ಷಾಕ್ ಹೊಡೆಯುತ್ತದೆ !!


"!!ಮಾಡುವವರಿಗೆ ಅದು ಬಲು ಮಜ. ಮುಟ್ಟಿದವರಿಗೆ ಇಂಗು ತಿಂದ ಮಂಗನ ಸ್ಥಿತಿ ! "


ಒಂದು ನಿಮಿಷದ ಹಿಂದೆ ಮುಗ್ದತೆಯ ಪ್ರತಿರೂಪದಂತಿದ್ದ ಐದು ವರ್ಷದ ಮಗ, ಸಂಸ್ಕಾರದ ತದ್ರೂಪಿನ ಅಪ್ಪ ಇಬ್ಬರು ಇನ್ನೂ ನಗುತ್ತಿದ್ದರು........


ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.

ಪ್ರೀತಿಯಿರಲಿ
ಶಿವು.

31 comments:

Ittigecement said...

ಶಿವು ಸರ್...

ನಗರದಲ್ಲಿ ಮಾನವೀಯತೆ ಹೇಗೆ ಸಾಯುತ್ತಿದೆ.?
ಈಗ ಅರ್ಥವಾಯಿತು..
ಇಂಥಹ ಹಾಸ್ಯವನ್ನು ಎಂಜೋಯ್ ಮಾಡುವ.., ಮಗನನ್ನು ಪ್ರೋತ್ಸಾಹಿಸುವ..
ಅಪ್ಪನನ್ನು ನೋಡಿ ಕನಿಕರ ಬಂತು...

ತುಂಬಾ ಚೆನ್ನಾಗಿ ಬರೆದಿದ್ದೀರಿ...
ಧನ್ಯವಾದಗಳು..

Ashok Uchangi said...

ತೀರ ಹತ್ತಿರದವರಿಗೆ,ಸ್ನೇಹಿತರಿಗೆ ಹೀಗೆಲ್ಲಾ ತಮಾಷೆ ಮಾಡೋದು ಸರಿ.ಮನೆಗೆ ಬಂದವರಿಗೆಲ್ಲಾ ಹೀಗೆ ಮಾಡಿದರೆ ಏನು ಚೆನ್ನ?
ಮುಂದಿನ ತಿಂಗಳಿಂದ ಬಿಲ್ ವಸೂಲಿಗೆ ಬರಬಾರದೆಂಬ ಹುನ್ನಾರವೇ?
ಅಶೋಕ ಉಚ್ಚಂಗಿ
http://mysoremallige01.blogspot.com/

shivu.k said...

ಪ್ರಕಾಶ್ ಸಾರ್,

ನಮ್ಮ ನಿಜ ಪರಿಸ್ಥಿತಿ ಪ್ರತಿಯೊಬ್ಬರಿಗೂ ತಿಳಿಯಲಿ ಎಂಬ ಹಂಬಲದಿಂದ ನಡೆದ ವಿಚಾರವನ್ನು ಇಲ್ಲಿ ಹಾಕಿದ್ದೇನೆ.
ಪ್ರೀತಿಯಿರಲಿ.
ಶಿವು.

shivu.k said...

ಆಶೋಕ್,
ಪ್ರತಿಕ್ರಿಯೆಗೆ ಧನ್ಯವಾದಗಳು.
ನಮ್ಮ ಕೆಲಸದ ಇನ್ನು ಅನೇಕ ಮುಖಗಳಲ್ಲಿ ಇದು ಒಂದು.
ಪ್ರೀತಿಯಿರಲಿ.
ಶಿವು.

sunaath said...

ಕರಂಟಿನ shockಗಿಂತ ಈ ’ನಾಗರಿಕ’ರ ಸಂಸ್ಕಾರದ shock
ಹೆಚ್ಚು ಆಘಾತಕಾರಿಯಾಗಿದೆ.

shivu.k said...

ಸುನಾಥ್ ಸಾರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ಸುಧೇಶ್ ಶೆಟ್ಟಿ said...

While reading, I was thinking how nice the baby and the father are.... After finishing it, I am not feeling bad about the child, but feeling very disgusted for the father... Father should give good attributes to son but here, father itself is spoiling his child....

Worth reading shivanna....

(Sorry for the comment in English. Font problem)

Harisha - ಹರೀಶ said...

ಕರ್ಮಕಾಂಡ

ಮುತ್ತುಮಣಿ said...

ಇಂತಹ ಘಟನೆಗಳು ಇತ್ತೀಚೆಗೆ ಕಾಮನ್! ಅಂತಹವನ್ನು ಸಹಿಸ್ಕೋತೇವಲ್ಲ, ಅದೂ ಒಮ್ಮೊಮ್ಮೆ ಆಶ್ಚರ್ಯ ಉಂಟು ಮಾಡುತ್ತೆ!

shivu.k said...

ಸುಧೇಶ್,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಇಲ್ಲಿ ಭಾಷೆಗಿಂತ ಅಭಿವ್ಯಕ್ತಿ ಮುಖ್ಯ.

shivu.k said...

ಹರೀಶ್, ಮುತ್ತುಮಣಿ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

NilGiri said...

ಈ ತರಹದ ಜನ ಇರ್ತಾರೆ ಏನೂ ಮಾಡಲಾಗುವುದಿಲ್ಲ.

ಮುಂದಿನ ತಿಂಗಳ ಪೇಪರ್ ಬಿಲ್ ಕೊಡಲು ಹೋದಾಗ. ನೀವೂ ಆ ತರಹದೊಂದು ಮಾಡಿಕೊಂಡು ಬಿಲ್ ಒಳಗೆ ಸುತ್ತಿ ಆಯಪ್ಪನ ಕೈಗೆ ಕೊಡಿ.

shivu.k said...

ಗಿರಿಜಕ್ಕ,

ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಮತ್ತು ನೀವು ಹೇಳಿದಂತೆ ಮಾಡಿದರೆ ನಾನು ಗಿರಾಕಿ ಕಳೆದುಕೊಳ್ಳಬೇಕಾಗುತ್ತೆ ! ನನ್ನದು ಒಂದು ರೀತಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಹ ಸ್ಥಿತಿ!!

ಅಂತರ್ವಾಣಿ said...

ಶಿವಣ್ಣ,
ಈ ರೀತಿ ಚಾಕೊಲೇಟುಗಳನ್ನು ನೋಡಿದ್ದೀನಿ.ಆದರೆ ತಂದೆಯೇ ಇದನ್ನು ಪ್ರೋತ್ಸಾಹಿಸುತ್ತಿರುವುದು ಇದೇ ಮೊದಲು ಬಾರಿ ಕೇಳಿದ್ದು.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರೀತಿಯ ಶಿವೂ ಸರ್,
"ಎಲ್ಲಿಗೆ ಪಯಣ, ಯಾವುದೋ ದಾರಿ" ಎಂಬಂತಾಗಿದೆ, ಒಳ್ಳೆಯ ನಾಗರೀಕತೆಯ ಪಾಠ ತನ್ನ ಮಗುವಿಗೆ ಕಲಿಸುತ್ತಿದ್ದಾನೆ ಪಿತಾಮಹ, ಇಂದಲ್ಲ ನಾಳೆ ಇದರ ಪರಿಣಾಮ ಅವನನ್ನೂ ತಾಕದೆ ಬಿಡದು.
ಕೊನೆಯದಾಗೊಂದು ಮಾತು ಆರ್ಡಿನರಿ ದಿನಪತ್ರಿಕೆಯವರೆನ್ನದಿರಿ, ಮನಸ್ಸಿಗೆ ನೋವಾಗುತ್ತದೆ.
ತುಂಬು ಗೌರವ ಮತ್ತು ಪ್ರೀತಿಯಿಂದ,
-ರಾಜೇಶ್ ಮಂಜುನಾಥ್

shivu.k said...

ಜಯಶಂಕರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ರಾಜೇಶ್ ಮಂಜುನಾಥ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ನಮ್ಮಂಥ ದಿನಪತ್ರಿಕೆಯವರ ಬಗ್ಗೆ ನಿಮಗಿರುವ ಗೌರವ ಭಾವನೆ ನನಗೆ ಖುಷಿ ತರುತ್ತಿದೆ....;ಹೀಗೆ ಬರುತ್ತಿರಿ... ಮುಂದಿನ ಫೋಷ್ಟಿಂಗುಗಳಲ್ಲಿ ಮತ್ತಷ್ಟು ವಿಭಿನ್ನ ಲೇಖನಗಳು ಬರುತ್ತವೆ.

ಅಮರ said...
This comment has been removed by the author.
ಅಮರ said...

ತಮಾಷೆಯ ಪರಮಾವದಿ ಈ ಘಟನೆ.... ಇದು ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ...
ನಿಮ್ಮ ಬರಹದ ಶೈಲಿ ಹಿಡಿಸಿತು :)
-ಅಮರ

shivu.k said...

ಅಮರ ಸಾರ್,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

ರಾಘವೇಂದ್ರ ಕೆಸವಿನಮನೆ. said...

ಶಿವು,
ಲೇಖನವನ್ನು ನವಿರು ದಾಟಿಯಲ್ಲಿದ್ದರೂ ಓದಿ ಮನಸ್ಸಿಗೆ ಖೇದವಾಯಿತು. ಚಿಕ್ಕವರಿಗೆ ಸಂಸ್ಕಾರ ಕಲಿಸಬೇಕಾದ ದೊಡ್ಡವರೇ ಮಗು ಇನ್ನೊಬ್ಬರನ್ನು ಗೋಳುಹುಯ್ದುಕೊಂಡಾಗ ಅದಕ್ಕೆ ಬೆಂಬಲ ನೀಡುವ ಮಟ್ಟ ತಲುಪಿಬಿಟ್ಟಿದ್ದೇವಲ್ಲ.!!! ಅದು ಈಗ ಅವರಿಗೆ ಚಂದಕಾಣಬಹುದು.ಆ ಮಗು ದೊಡ್ಡವನಾಗಿ ಅವರಪ್ಪನಿಗೇ ಒಂದು ಷಾಕ್ ಕೊಟ್ಟಾಗಲೇ ಅವರಿಗೆ ಸಂಸ್ಕಾರದ ಬೆಲೆ ತಿಳಿಯೋದು.!!! ಏನಂತೀರಿ!?
- ರಾಘವೇಂದ್ರ ಕೆಸವಿನಮನೆ.

shivu.k said...

ರಾಘವೇಂದ್ರ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಅಭಿಪ್ರಾಯದಂತೆ ಮುಂದೆ ಮಗನೇ ಅಪ್ಪನಿಗೆ ಷಾಕ್ ಕೊಟ್ಟಾಗ ಸಂಸ್ಕಾರದ ಬೆಲೆ ಖಂಡಿತ ತಿಳಿಯುತ್ತದೆ.

PaLa said...

ನಗಬೇಕೋ, ಬೇಸರಪಟ್ಟುಕೊಳ್ಳಬೇಕೋ ಒಂದೂ ಗೊತ್ತಾಗ್ತಾ ಇಲ್ಲಾ! ಮಕ್ಕಳನ್ನು ಬೆಳೆಸೋವ್ರೇ ಹಿಂಗಾದ್ರೆ ಹೆಂಗೆ..

shivu.k said...

ಪಾಲ ಚಂದ್ರ,
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.

Annapoorna Daithota said...

Oh !!

shivu.k said...

ಅನ್ನಪೂರ್ಣ ಥ್ಯಾಂಕ್ಸ್...

ಬಾಲು said...

paper bill navaru bittu, bere inyaro bandidre heege madtha idra?

maneye modala paata shaale anthare, inthaha vathavarana dalli makkalu idre, a makkalu munde enu aagtharo?

manassige bejar aadru, avanua giraki, magu ninu chooti iddiya antha heli, eradu smile kottu barabekagutte!!!

ಪೂರ್ಣಿಮಾ ಭಟ್ಟ, ಸಣ್ಣಕೇರಿ said...
This comment has been removed by the author.
shivu.k said...

ಬಾಲು ಸರ್,....ಥ್ಯಾಂಕ್ಸ್....

ತೇಜಸ್ವಿನಿ ಹೆಗಡೆ said...

ಯಥಾ ರಾಜ ತಥಾ ಪ್ರಜಾ. ಅಪ್ಪನೇ ಮಗನಿಗೆ ಇಂತಹ ಸಂಸ್ಕಾರ(???) ಕೊಡುತ್ತಿರಬೇಕಾದರೆ ಇನ್ನು ಮುಂದೆ ಮಗ ಎಷ್ಟು ಉತ್ತಮ ಪ್ರಜೆ ಆಗಬೇಡಾ ಅಲ್ಲವೇ? ತುಂಬಾ ಬೇಸರದ ಪ್ರಸಂಗವಿದು.

Unknown said...

tu0baa bEsaravAyitu .. idannu Odi.. e0tha keTTa jana ... :(:(

ಉಉನಾಶೆ said...

ತುಂಬ ಬೇಸರ ಆಯ್ತು..
"ಜನ ಈ ಮಟ್ಟಕ್ಕೂ ಇಳೀತಾರೆ" ಅಂದ್ರೆ...
ಈ ತರ ಆಟಿಕೆಗಳನ್ನು ನಮ್ಮ ಆಫೀಸಿನಲ್ಲೂ ನೋಡಿದ್ದೇನೆ.
ಆದರೆ ಅದನ್ನು ಪರಸ್ಪರ ಸಲುಗೆಯಿರುವವರೊಂದಿಗೆ ಮಾತ್ರ ಬಳಸಿದ್ದು ನೋಡಿದ್ದೇನೆ. (ಅದೂ ಕೂಡ ಸರಿ ಅನ್ನಿಸಲಿಲ್ಲ, ನನಗೆ)